ಪ್ರಜ್ವಲ್ ಜೈಲು ಸೇರಿದ್ದು, ನಿಖಿಲ್ ಕುಮಾರ್ ಸ್ವಾಮಿಗೆ ಖುಷಿ ತಂದಿದೆ: ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್

ಬೆಂಗಳೂರು: ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವುದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿಗೆ ಖುಷಿ ತಂದಿದೆ ಎಂದು ಎಂದು ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಂಜುನಾಥ್ ಟೀಕಿಸಿದ್ದಾರೆ.
ರವಿವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಮನೆಯಿಂದ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿದ್ದಾರೆ. ಅವರು ತಮ್ಮನ್ನು ತಾವು ಸಾಮಾನ್ಯ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ. ಆದರೆ ಸಾಮಾನ್ಯ ವ್ಯಕ್ತಿಗಳು ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿಗಳ ಮನೆಯಿಂದ ಬರುವುದಿಲ್ಲ ಎಂದರು.
ನಿಖಿಲ್ ಕೇಂದ್ರ ಸರಕಾರದಿಂದ ಆಗಿರುವ ನೀಟ್ ಅನ್ಯಾಯ, ಜನಸಾಮಾನ್ಯರ ಮೇಲಿನ ಸಮಸ್ಯೆಯ ಬಗ್ಗೆ ಮಾತನಾಡುವುದಿಲ್ಲ. ಜೆಡಿಎಸ್ ನಿಮ್ಮ ಮನೆಯ ಕಂಪೆನಿ. ಅದು ಅಲ್ಲದೆ, ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವುದು ನಿಖಿಲ್ ಕುಮಾರ್ ಸ್ವಾಮಿಗೆ ಖುಷಿ ಮಾತ್ರವಲ್ಲದೆ, ಹಾಸನಕ್ಕೆ ತೆರಳಲು ಅನುಕೂಲವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಬಿಡದಿ ಟೌನ್ಶಿಪ್ಗಾಗಿ ಭೂ ಸ್ವಾಧೀನ ಪಡಿಸುವುದನ್ನು ಜೆಡಿಎಸ್ ವಿರೋಧಿಸುತ್ತಿದೆ. ಆದರೆ, ಬಿಡದಿಯ ಭೂಸ್ವಾಧೀನದ ಕತೆ, ಚಿತ್ರಕತೆ ಕುಮಾರಸ್ವಾಮಿ ಅವರದ್ದು. ಅವರು ಡಿಎಲ್ಎಫ್ ಅನ್ನು ಹೀರೋ ಮಾಡಲು ಹೊರಟಿದ್ದರು. ಆದರೆ ಈಗಿನ ಯೋಜನೆಗೆ ಅಲ್ಲಿನ ಶೇ.70ರಷ್ಟು ರೈತರು ಒಪ್ಪಿದ್ದಾರೆ ಎಂದ ಅವರು, ಬಿಡದಿ ಟೌನ್ಶಿಪ್ ಬಗ್ಗೆ ನಿಖಿಲ್ ಅವರ ಜೊತೆ ಚರ್ಚೆಗೆ ನಾವು ಸಿದ್ಧ. ಬಿಡದಿ ವಿಚಾರವನ್ನು ಇವರ ರಾಜಕೀಯಕ್ಕೋಸ್ಕರ ಬಳಸಿಕೊಳ್ಳುತ್ತಿದ್ದಾರೆ. ರೈತರು ದಡ್ಡರಲ್ಲ. ರೈತರ ಪ್ರಶ್ನೆಗಳಿಗೆ ಉತ್ತರ ಕೊಡುವ ಕೆಲಸವನ್ನು ಸರಕಾರ ಮಾಡಲಿದೆ ಎಂದು ಹೇಳಿದರು.






