ಬೀದರ್ | ಬಸ್ಸಿನಲ್ಲಿಯೇ ನೇಣು ಬಿಗಿದುಕೊಂಡು ಬಸ್ ಚಾಲಕ ಆತ್ಮಹತ್ಯೆ

ರಾಜ್ಕುಮಾರ್
ಬೀದರ್ : ಬಸ್ ಚಾಲಕರೊಬ್ಬರು ಬೀದರ್ ನ ಬಸ್ ಡಿಪೋದಲ್ಲಿ ನಿಲ್ಲಿಸಿದ ಬಸ್ಸಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.
ಮೃತ ವ್ಯಕ್ತಿಯನ್ನು ಅಣದೂರು ಗ್ರಾಮದ ನಿವಾಸಿ ರಾಜ್ಕುಮಾರ್ (59) ಎಂದು ಗುರುತಿಸಲಾಗಿದೆ.
ಬೀದರ್ ನಿಂದ ಬಳ್ಳಾರಿಗೆ ಹೋರಡಬೇಕಿದ್ದ ಸ್ಲಿಪರ್ ಕೋಚ್ ಬಸ್ಸಿನ ಡ್ರೈವರ್ ಆಗಿದ್ದ ಇವರು, 5 ತಿಂಗಳಲ್ಲಿ ನಿವೃತ್ತಿಯಾಗಲಿದ್ದರು. ರಾತ್ರಿ 8 ಗಂಟೆಗೆ ಬೀದರ್ ನಿಂದ ಬಳ್ಳಾರಿಗೆ ಈ ಬಸ್ಸು ಹೊರಡಬೇಕಿತ್ತು. ಅವರ ಫೋನ್ ಸ್ವಿಚ್ಡ್ ಆಫ್ ಬಂದಿರುವ ಹಿನ್ನೆಲೆಯಲ್ಲಿ ಬಸ್ ಡಿಪೋ ಅಧಿಕಾರಿಗಳು ಬೇರೆ ಚಾಲಕನನ್ನು ಬಳ್ಳಾರಿಗೆ ಕಳುಹಿಸಿದ್ದರು ಎಂದು ತಿಳಿದು ಬಂದಿದೆ.
ಮುಂಜಾನೆ ಬಸ್ ಸ್ವಚ್ಛಗೊಳಿಸಲು ಹೋದಾಗ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಅವರ ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







