ಬೀದರ್ | ನ್ಯಾ.ನಾಗಮೋಹನದಾಸ್ ವರದಿಯನ್ನು ಹರಿದು ಹಾಕಿ ಬಲಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ

ಬೀದರ್ : ಒಳಮೀಸಲಾತಿಗೆ ಸಂಬಂಧಿಸಿದಂತೆ ರಚಿಸಿರುವ ನ್ಯಾ.ನಾಗಮೋಹನದಾಸ್ ವರದಿಯನ್ನು ಹರಿದು ಹಾಕಿ ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿಯಿಂದ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ನಗರದ ಅಂಬೇಡ್ಕರ್ ವೃತ್ತದ ಹತ್ತಿರ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಬಲಗೈ ಸಮುದಾಯದ ಜನರು ನ್ಯಾ.ನಾಗಮೋಹನದಾಸ್ ವರದಿಯ ವಿರುದ್ಧ ಘೋಷಣೆ ಕೂಗಿ, ಬಲಗೈ ಸಮುದಾಯದ ಮುಖಂಡರು ಮಾತನಾಡಿದರು.
ನಂತರ ಹರಳಯ್ಯ ವೃತ್ತ, ಮಡಿವಾಳ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ, ಸಮಾಜ ಕಲ್ಯಾಣ ಇಲಾಖೆಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪೌರಾಡಳಿತ ಸಚಿವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಹರಿದು ಹಂಚಿ ಹೋಗಿರುವ ಬಲಗೈ ಸಮುದಾಯಗಳನ್ನು ಒಟ್ಟುಗೂಡಿಸಿ, ಮೀಸಲಾತಿ ಪ್ರಮಾಣವನ್ನು ಮರು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ನ್ಯಾ. ನಾಗಮೋಹನದಾಸ್ ಅವರ ವರದಿಯಲ್ಲಿನ ತಪ್ಪುಗಳನ್ನು ಸರಿಪಡಿಸಿ ಮೀಸಲಾತಿ ಹಂಚಿಕೆ ಮಾಡಿ ಬಲಗೈ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸರ್ಕಾರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾರುತಿ ಬೌದ್ದೆ, ಅನಿಲಕುಮಾರ್ ಬೆಲ್ದಾರ್, ರಮೇಶ್ ಡಾಕುಳಗಿ, ಬಾಬು ಪಾಸ್ವಾನ್, ವಿಠಲದಾಸ್ ಪ್ಯಾಗೆ, ಕಾಶೀನಾಥ್ ಚಲ್ವಾ, ಶ್ರೀಪತರಾವ್ ದಿನೆ, ಮಹೇಶ್ ಗೊರನಾಳಕರ್, ವಿನೋದ್ ಅಪ್ಪೆ, ವಿನಯ್ ಮಾಳಗೆ ಹಾಗೂ ದೇವೇಂದ್ರ ಸೋನಿ ಸೇರಿದಂತೆ ಬಲಗೈ ಸಮುದಾಯಕ್ಕೆ ಸೇರಿದ ಜಿಲ್ಲೆಯ ಸಾವಿರಾರು ಜನರು ಭಾಗವಹಿಸಿದ್ದರು.







