ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ: ರಾಜು ಕಪನೂರ್ ಗೆ ಷರತ್ತು ಬದ್ಧ ಜಾಮೀನು

ರಾಜು ಕಪನೂರ್
ಬೀದರ್: ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತರಾದ ರಾಜು ಕಪನೂರ್ ಗೆ ತನ್ನ ಹುಟ್ಟು ಹಬ್ಬದ ದಿನದಂದೇ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಇಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಅರ್ಜಿದಾರರ ಹತ್ತಿರ ಶಸ್ತ್ರಾಸ್ತ್ರಗಳಿದ್ದಲ್ಲಿ ಕಲಬುರ್ಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಒಪ್ಪಿಸಬೇಕು. ಅವರು ಸಾಕ್ಷಿ ನಾಶಪಡಿಸಲು ಪ್ರಯತ್ನಿಸದೆ, ತನಿಖೆಗೆ ಸಹಕರಿಸಬೇಕು. ತನಿಖಾಧಿಕಾರಿಯು ಅವರಿಗೆ ನಿರ್ದಿಷ್ಟವಾಗಿ ಸಮನ್ಸ್ ನೀಡಿದಾಗ ತನಿಖಾ ಉದ್ದೇಶಕ್ಕಾಗಿ ಹೊರತುಪಡಿಸಿ ಯಾವುದೇ ಕಾರಣಕ್ಕೂ ಬೀದರ್ ಜಿಲ್ಲೆಗೆ ಪ್ರವೇಶ ಮಾಡಬಾರದು. ತನಿಖೆ ಪೂರ್ಣಗೊಂಡ ನಂತರ ಅವರು ನ್ಯಾಯಾಲಯದ ಮುಂದೆ ಹಾಜರಾಗಬೇಕಾದಾಗ ಮಾತ್ರ ಬೀದರ್ ಜಿಲ್ಲೆಗೆ ಪ್ರವೇಶಿಸಬೇಕು ಎಂದು ಷರತ್ತು ವಿಧಿಸಲಾಗಿದೆ.
ಅಂತಿಮ ವಿಚಾರಣೆ ಮುಕ್ತಾಯವಾಗುವವರೆಗೆ ಈ ಷರತ್ತು, ನಿಯಮ ಜಾರಿಯಲ್ಲಿರುತ್ತದೆ ಎಂದು ನ್ಯಾಯಾಲಯವು ತಿಳಿಸಿದೆ.
ಡಿ. 26 ರಂದು ಸಚಿನ್ ಪಾಂಚಾಳ್ ಅವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್ ನೋಟ್ ನಲ್ಲಿ ರಾಜು ಕಪನೂರ್ ಸೇರಿದಂತೆ ಹಲವರ ಹೆಸರುಗಳು ಉಲ್ಲೇಖವಾಗಿದ್ದವು. ಇದಕ್ಕೆ ಸಂಬಂಧಿಸಿದಂತೆ ರಾಜು ಕಪನೂರ್ ಸೇರಿ ಐವರನ್ನು ಬಂಧಿಸಲಾಗಿತ್ತು. ಈ ಆತ್ಮಹತ್ಯೆ ಪ್ರಕರಣವು ಇಡೀ ರಾಜ್ಯದಾದ್ಯಂತ ಸದ್ದು ಮಾಡಿತ್ತು.