ಆರೆಸ್ಸೆಸ್ ನಿಷೇಧಿಸುವಂತೆ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘ ಆಗ್ರಹ

ಕಲಬುರಗಿ: ಆರೆಸ್ಸೆಸ್ ಸಂಘಟನೆ ದೇಶದಾದ್ಯಂತ ಕೋಮು ವಿಷಬೀಜುವ ಕೆಲಸ ಮಾಡುತ್ತಿದೆ, ಕೂಡಲೇ ಆರೆಸ್ಸೆಸ್ ಅನ್ನು ನಿಷೇಧಿಸಬೇಕು ಎಂದು ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಚಿದರಳ್ಳಿ ಮಹದೇವಸ್ವಾಮಿ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಮತ್ತಿತ್ತರ ಚಟುವಟಿಕೆಗಳನ್ನು ನಿಷೇಧಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಅದಕ್ಕಾಗಿಯೇ ಸಚಿವರಿಗೆ ಜೀವ ಬೆದರಿಕೆ ಹಾಕಿರುವುದು ಅಕ್ಷಮ್ಯ ಅಪರಾಧ ಎಂದರು.
ಆರೆಸ್ಸೆಸ್ ದೇಶದಲ್ಲಿ ಕೋಮು ಪ್ರಚೋದನೆ ನೀಡುವುದಲ್ಲದೆ, ಭಯೋತ್ಪಾದಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ, ಇದರ ವಿರುದ್ಧ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ್ದಾರೆ, ಇಂತಹ ಗೊಡ್ಡು ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿ ಮುಖಂಡ ದಿನೇಶ್ ದೊಡ್ಡಮನಿ ಮಾತನಾಡಿ, ನೋಂದಣಿಯೇ ಇಲ್ಲದ ಆರೆಸ್ಸೆಸ್ ಸಂಘವನ್ನು ಯಾಕೆ ಬ್ಯಾನ್ ಮಾಡಬಾರದು, ಈವರೆಗೆ ಅವರು ದೇಶಪ್ರೇಮದ ಕೆಲಸ ಮಾಡಿಲ್ಲ. ಮಾಡಿದ್ದೆಲ್ಲವೂ ದೇಶದ್ರೋಹಿಗಳ ಕೆಲಸ. ಇವರು ಮಾಡಿರುವ ದೇಶದ್ರೋಹಿ ಕೆಲಸಗಳನ್ನು ಬಹಿರಂಗಗೊಳಿಸಲಿದ್ದೇವೆ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಳಿರುವ 10 ಪ್ರಶ್ನೆಗಳಿಗೆ ಉತ್ತರಿಸಲಾಗದ ಆರೆಸ್ಸೆಸ್ ನವರು ಸಮಾಜದಲ್ಲಿ ಜಾತಿ ಜಾತಿಗಳ ಮಧ್ಯೆ ಬೆಂಕಿ ಹಚ್ಚುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜು ಕಪನೂರ, ರಾಜಕುಮಾರ್ ಕೋರಳ್ಳಿ, ಅಮೃತ ಗೋಳಾ, ಭೀಮಶ್ಯಾ ಧರಿ, ಗೋರಖನಾಥ ಸಜ್ಜನ, ಜಗದೇವಪ್ಪ ಅಂಕಲಗಿ, ಅಂಬಾರಾಯ ಕಗ್ಗನಮಡಿ, ದೇವೇಂದ್ರ ಸಿನ್ನೂರ್ ಸೇರಿದಂತೆ ಮತ್ತಿತರರು ಇದ್ದರು.







