ಡಾ.ಬಿ.ಆರ್. ಅಂಬೇಡ್ಕರ್ ಜೀವನ ಕಥನ "ಮಹಾಯಾನ" ಕಾದಂಬರಿ ಬಿಡುಗಡೆ

ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನದ ಆಶಯಗಳು ಇಂದಿಗೂ ಈಡೇರಿಲ್ಲ ಎಂದು ಅನುವಾದ ಸಾಹಿತ್ಯದಲ್ಲಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ದೀಪಾ ಭಾಸ್ತಿ ಅವರು ಕಳವಳ ವ್ಯಕ್ತಪಡಿಸಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಬಂಡಾಯ ಸಾಹಿತಿ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿರ್ದೇಶಕ ಪ್ರೊ.ಎಚ್. ಟಿ. ಪೋತೆ ಅವರು ಡಾ. ಅಂಬೇಡ್ಕರ್ ಜೀವನ ಕಥನ ಕುರಿತ ಬರೆದಿರುವ "ಮಹಾಯಾನ" ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದ ದೀಪಾ ಭಾಸ್ತಿ, ಡಾ. ಬಿ. ಆರ್. ಅಂಬೇಡ್ಕರ್ ಅವರ ಸಂವಿಧಾನ ಎಲ್ಲರಿಗೂ ತಲುಪಿದೆ. ಆದರೆ, ಸಂವಿಧಾನದ ಕನಸುಗಳು ಇಂದಿಗೂ ಹಾಗೆ ಉಳಿದಿವೆ. ಸಂವಿಧಾನದ ಆಶಯದಂತೆ ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನತೆ ಸಿಕ್ಕಿದೆಯೇ? ಎಂದು ಪ್ರಶ್ನಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಆಲೋಚನೆ ಮತ್ತು ಚಿಂತನೆಗಳು ಓದಿನಲ್ಲಿ ಅಲೆಗಳಂತೆ ಎದುರಾಗುತ್ತವೆ. ಅವರ ದೂರದೃಷ್ಠಿ ಆಲೋಚನೆಗಳು ನೊಂದವರಿಗೆ ಚೈತನ್ಯ ನೀಡುತ್ತಿವೆ. ಅವರ ಅಗಾಧ ಚಿಂತನೆಗಳು ಸಮಾಜವನ್ನು ಎಲ್ಲಾ ಕಾಲಕ್ಕೂ ಎಚ್ಚರಿಸುತ್ತವೆ ಎಂದು ಹೇಳಿದರು.
ಬಹು ಭಾಷಾ ಪರಂಪರೆಯಿರುವ ಕನ್ನಡ ನಾಡಿನಲ್ಲಿ ವೈವಿಧ್ಯಮಯ ಸಂಸ್ಕೃತಿ ಬೆಳೆದಿದೆ. ಒಂದು ಭಾಷೆಗಿಂತ ಹಲವು ಭಾಷೆಗಳನ್ನ ಮಾತನಾಡುವ ಜನಸಮೂಹವಿದೆ. ಭಾಷಾ ಪ್ರಜ್ಞೆ ಮತ್ತು ಓದುವ ಆಸಕ್ತಿಯಿದೆ. ಸಾಹಿತ್ಯ ಅನುವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಅವಕಾಶವಿದೆ. ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ಮತ್ತು ಅನುವಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅತ್ಯಂತ ಶ್ರೀಮಂತ ನಾಡಾಗಿರುವ ಕಲ್ಯಾಣ ಕರ್ನಾಟಕ ಸಾಹಿತ್ಯ ಕ್ಷೇತ್ರಕ್ಕೆ ಹಲವು ಕೃತಿಗಳನ್ನು ಕೊಡುಗೆಯಾಗಿ ನೀಡಿದೆ. ಈ ಭಾಗದ ಸೃಜನಶೀಲ ಲೇಖಕರ, ವಿದ್ವಾಂಸರ, ಬರಹಗಾರರ ಚಿಂತನೆ ಮತ್ತು ವೈಚಾರಿಕ ಆಲೋಚನೆಗಳು ಮತ್ತು ನಿರೀಕ್ಷೆಗಳ ವಸ್ತುಸ್ಥಿತಿಯನ್ನು ಇನ್ನಿತರೆ ಭಾಷೆಗಳ ಮೂಲಕ ಅನುವಾದಿಸಿ ಪರಿಚಯಿಸಬೇಕಿತ್ತು. ಹಾಗೆ ನಾವು ಮಾಡದೇ ಇರುವುದಕ್ಕಾಗಿ ಕಲ್ಯಾಣ ಹಿಂದುಳಿಯಲು ಕಾರಣವಾಗಿದೆ. ಇವತ್ತು ಬೆಂಗಳೂ ಇನ್ನು ಹಲವು ನಗರಗಳಲ್ಲಿ ಇಂಗ್ಲಿಷ್ ತಾಯಿ ಭಾಷೆಯಂತೆ ಹೇಳಿಕೊಳ್ಳುವ ಜನರ ಹೆಚ್ಚಾಗುತ್ತಿದ್ದಾರೆ. ಈ ಕಾಲ ಘಟ್ಟದಲ್ಲಿ ನಾವು ಮಾತೃ ಭಾಷೆಯಾದ ಕನ್ನಡವನ್ನು ಉಳಿಸಿಕೊಳ್ಳಬೇಕಿದೆ. ಇಡೀ ರಾಜ್ಯದಲ್ಲಿ ಹಲವಾರು ಬಗೆಯಲ್ಲಿ ಕನ್ನಡವನ್ನು ಬೆಳೆಸಿಕೊಂಡಿದ್ದೇವೆ. ಆದರೆ, ನಮ್ಮ ತಾಯಿ ಭಾಷೆಯ ಮೂಲ ಬೇರುಗಳನ್ನು ನಾವೆಂದು ಕಳೆದುಕೊಳ್ಳಬಾರದು. ಎಲ್ಲಾ ಭಾಷೆಯ ವಿಷಯಗಳು, ಸಾಹಿತ್ಯದ ಮೂಲಕ ಎಲ್ಲರಿಗೂ ಪರಿಚಯವಾಗಬೇಕು. ಆಗ ಕರ್ನಾಟಕವನ್ನು ಉಳಿಸಿಕೊಳ್ಳಲಿಕ್ಕೆ ಸಾಧ್ಯ. ಕನ್ನಡ ಭಾಷೆ ಅಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ಸಾಹಿತ್ಯಾಭಿರುಚಿ ಬೆಳೆಸಿಕೊಂಡಿರುವ ವಿದ್ಯಾರ್ಥಿಗಳು ಕುವೆಂಪು, ತೇಜಸ್ವಿ, ಕಾರಂತ, ದೇವನೂರು ಹಾಗೂ ಡಾ. ಸಿದ್ದಲಿಂಗಯ್ಯ ಅವರಂತಹ ಸಾಹಿತಿಗಳ ಕೃತಿಗಳನ್ನು ಅನುವಾದ ಮಾಡಬಹುದು. ಓದು ಆಸಕ್ತಿ ಮತ್ತು ಬರವಣಿಗೆ ರುಚಿಯಿಂದ ಅನುವಾದ ಸಾಹಿತ್ಯ ಇತರ ಬಾಷೆ ಓದುಗರನ್ನು ಸೆಳೆಯುತ್ತವೆ. ಭಾಷಾ ಪಾಂಡಿತ್ಯ ಸಾಹಿತ್ಯ ಅನುವಾದಕ್ಕೆ ಪ್ರೇರಣೆಯಾಗುತ್ತದೆ ಎಂದರು.
ಮಹಾಯಾನ ಕಾದಂಬರಿ ಲೇಖಕ ಪ್ರೊ.ಎಚ್.ಟಿ. ಪೋತೆ ಅವರು ಮಾತನಾಡಿ, ಬುದ್ಧ, ಬಸವ ಮತ್ತು ಡಾ. ಬಿ. ಆರ್. ಅಂಬೇಡ್ಕರ ಅವರನ್ನು ಯಾವುದೇ ಜಾತಿ ವರ್ಗಕ್ಕೆ ಸೀಮಿತಗೊಳಿಸದೆ ಅವರ ತತ್ವ ಮತ್ತು ಆದರ್ಶ ಗುಣಗಳನ್ನು ಸ್ಪೂರ್ತಿಯಾಗಿರಿಸಿಕೊಂಡು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಎಸ್. ಉಡಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹರಿಯುವ ನದಿ ಮತ್ತು ಬೀಸುವ ಗಾಳಿಯನ್ನು ತಡೆಯಲು ಹೇಗೆ ಸಾಧ್ಯವಿಲ್ಲವೊ ಹಾಗೆಯೇ ವಿದ್ಯಾರ್ಥಿಗಳು ಪಡೆದುಕೊಂಡ ಜ್ಞಾನವನ್ನು ಯಾರಿಂದಲು ಕಸಿದುಕೊಳ್ಳಲು ಸಾಧ್ಯವಿಲ್ಲ. ಲೇಖಕರು ಮ್ತತು ಬೂಕರ್ ಪ್ರಶಸ್ತಿ ವಿಜೇತರಾದ ದೀಪಾ ಬಾಸ್ತಿ ನಮ್ಮ ವಿಶ್ವವಿದ್ಯಾಲಯಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿ ಪ್ರೊ. ಎಚ್. ಟಿ ಪೋತೆಯವರು ಬರೆದಿರುವ ಡಾ. ಬಿ. ಆರ್. ಅಂಬೇಡ್ಕರ್ ಜೀವನ ಕಥನ ಕುರಿತಾದ ಮಹಾಯಾನ ಕಾದಂಬರಿ ಲೋಕಾರ್ಪಣೆಯನ್ನು ಮಾಡಿ ಅನುವಾದ ಕುರಿತು ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿನ್ನು ನೀಡಿದ್ದಾರೆ. ಪ್ರತಿಯೊಬ್ಬರಿಗೂ ಶಿಕ್ಷಣ, ಸಮಾನತೆ ಮತ್ತು ಸಮಾನ ಅವಕಾಶಗಳು ಸಿಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಾನವಿಕ ಮತ್ತು ಭಾಷಾ ವಿಭಾಗದ ಡೀನ್ ಪ್ರೊ. ವಿಕ್ರಮ ವಿಸಾಜಿ ಮಾತನಾಡಿದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ರಮೇಶ ಲಂಡನಕರ್, ಡಿ.ಎಸ್.ಎಸ್ ಮುಖಂಡ ಡಿ.ಜಿ ಸಾಗರ್, ಕಲಬುರಗಿ ಸಪ್ನಾ ಬುಕ್ಹೌಸ್ನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಸೇರಿದಂತೆ ಬರಹಗಾರರು, ಚಿಂತಕರು, ಗುಲಬರ್ಗಾ ವಿಶ್ವವಿದ್ಯಾಲಯದ ವಿವಿಧ ವಿಭಾಗದ ಡೀನ್ಗಳು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.







