ರೈಲ್ವೆ ಹಳಿ ಸ್ಥಳಾಂತರಕ್ಕೆ ಆಗ್ರಹಿಸಿ ಮಾ.10ರಂದು ಅನಿರ್ದಿಷ್ಟಾವಧಿ ಧರಣಿ : ಬಸವರಾಜ ಕೊರಳ್ಳಿ

ಕಲಬುರಗಿ : ಸೇಡಂನ ಅಲ್ಟ್ರಾ ಟೆಕ್ ಸಿಮೆಂಟ್ ಲಿಮಿಟೆಡ್ ಕಾರ್ಖಾನೆಯು ದಿನನಿತ್ಯ ವಿಷಪೂರಿತ ಕೆಮಿಕಲ್ ಹೊಗೆಯಿಂದ ಸ್ಥಳಿಯ ಜನರ ಆರೋಗ್ಯದಲ್ಲಿ ಸಮಸ್ಯೆ ಎದುರಾಗುತ್ತಿದ್ದು, ಅಲ್ಲಿರುವ ರೈಲ್ವೆ ಹಳಿ ಬೇರೆಡೆ ಸ್ಥಳಾಂತರಿಸಬೇಕು ಹಾಗೂ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಬೇಕೆಂದು ಒತ್ತಾಯಿಸಿ ಮಾ.10ರಂದು ಅಲ್ಲಿನ ಸಹಾಯಕ ಆಯುಕ್ತರು ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ ಕೊರಳ್ಳಿ ತಿಳಿಸಿದರು.
ಸೇಡಂ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಟ್ರಾ ಟೆಕ್ ಸಿಮೆಂಟ್ ಕಾರ್ಖಾನೆಯಿಂದ ವಿಷಪೂರಿತ ಕೆಮಿಕಲ್ ಬಿಳಿ ಹೋಗೆಯಿಂದ ಸ್ಥಳೀಯ ಜನರ ಆರೋಗ್ಯದಲ್ಲಿ ಹಲವು ರೋಗಗಳು ಕಾಣಿಸಿಕೊಳ್ಳುತ್ತಿವೆ, ಇದರಿಂದ ರೈತರು ಬೆಳೆದ ಬೆಳೆ ಸಂಪೂರ್ಣ ಹಾಳಾಗುತ್ತಿವೆ, ಕಾರ್ಖಾನೆಗೆ ಸಂಪರ್ಕಿಸುವ ರೈಲ್ವೆ ಹಳಿಯು, ಗರ್ಭಿಣಿ ಮಹಿಳೆಯರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಸರ್ಕಾರಿ ನೌಕರರು ಹಾಗೂ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ನಿತ್ಯವೂ ತೊಂದರೆ ಎದುರಾಗುತ್ತಿದೆ, ಹಾಗಾಗಿ ಕೂಡಲೇ ಅದನ್ನು ಬೇರೆಡೆ ಸ್ಥಾಳಾಂತರಿಸಬೇಕೆಂದು ಆಗ್ರಹಿಸಿದರು.
ಸಿಮೆಂಟ್ ಕಾರ್ಖಾನೆ ಸ್ಥಾಪಿಸುವ ಮುಂಚೆ ಹಲವು ಷರತ್ತು ಒಪ್ಪಿದ ನಂತರ ಸರ್ಕಾರ ಸಿಮೆಂಟ್ ಕಾರ್ಖಾನೆಗಳಿಗೆ ಅನುಮತಿ ನೀಡುತ್ತದೆ, ಆದರೆ ಸಿಮೆಂಟ್ ಕಾರ್ಖಾನೆ ಆಡಳಿತ ಮಂಡಳಿ ಅವರು ಕಾನೂನು ಬದ್ದವಾಗಿ ನಡೆದುಕೊಳ್ಳುವುದನ್ನು ಮರೆತು ಹೋಗಿದೆ ಎಂದು ಕಿಡಿ ಕಾರಿದರು.
ಅಲ್ಟ್ರಾ ಟೆಕ್ ಸಿಮೆಂಟ್ ಲಿಮಿಟೆಡ್ ಕಾರ್ಖಾನೆ ಸುತ್ತ ಮುತ್ತಲಿನ ಹಳ್ಳಿಗಳು ದತ್ತು ಪಡೆದುಕೊಂಡು ಕ್ರಿಯಾಯೋಜನೆ ದುಡ್ಡಿನಲ್ಲಿ ಅಲ್ಲಿರುವ ಸರ್ಕಾರಿ ಶಾಲೆ, ಸಿಸಿ ರಸ್ತೆ, ಒಳ್ಳೆ ಚರಂಡಿ ಸೇರಿದಂತೆ ಹಲವು ಮೂಲಭೂತ ಸೌಕರ್ಯ ಕಲ್ಪಿಸಿ ಸಂಪೂರ್ಣ ಅಭಿವೃದ್ಧಿ ಮಾಡಬೇಕು, ಆದರೆ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಅಲ್ಟ್ರಾ ಟೆಕ್ ಸಿಮೆಂಟ್ ಲಿಮಿಟೆಡ್ ಕಾರ್ಖಾನೆ ಆಡಳಿತ ಮಂಡಳಿ ಅವರು ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಉಪಾಧ್ಯಕ್ಷರಾದ ವರದಾ ಸ್ವಾಮಿ ಹೀರೆಮಠ ಅವರು ಮಾತನಾಡಿ, ಸೆಡಂನ ಅಲ್ಟ್ರಾ ಟೆಕ್ ಸಿಮೆಂಟ್ ಲಿಮಿಟೆಡ್ ಕಾರ್ಖಾನೆ ಆಡಳಿತ ಮಂಡಳಿ ಅವರು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬ್ಲಾಸ್ಟಿಂಗ್ ಮಾಡುವುದರಿಂದ ಬಟಗಿರ (ಕೆ) ಗ್ರಾಮದ ಮನೆಗಳು ಎಲ್ಲೆಂದರಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ ಎಂದರು.
ಅನೇಕ ಬೇಡಿಕೆಗಳನ್ನು ಈಡೇರಿಸುವವರೆಗೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗಿದ್ದು, ಸತ್ಯಾಗ್ರಹದಲ್ಲಿ 200ಕ್ಕಿಂತ ಹೆಚ್ಚು ಜನರು ಭಾಗವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಶೋಕ್ ಮಡಿವಾಳ, ನಾಗೇಂದ್ರ ಬೋವಿ ಮಳಖೇಡ, ದಯಾನಂದ ಪಾಟೀಲ್, ಅಂಬ್ರೇಶ ಪಾಟೀಲ್, ರಾಜು ಯಾದವ್ ಕದಲಾಪೂರ, ಮರೆಪ್ಪ ದೋರೆ, ಬನ್ನಿ ರಾಠೋಡ, ವೆಂಕಟರೆಡ್ಡಿ ಗಂಗರಾಯನಪಲಿ, ರವಿಕುಮಾರ್ ದೇವನೂರ, ಸಂತೋಷ ಭೂತಪೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







