ಕಲಬುರಗಿ | ಸಚಿವ ತಂಗಡಗಿ ವಿರುದ್ಧ ಪೂರ್ಣಾನಂದ ಪುರಿ ಸ್ವಾಮೀಜಿ ಆರೋಪ ಸತ್ಯಕ್ಕೆ ದೂರ: ಸಿದ್ರಾಮ ದಂಡಗುಲ್ಕರ

ಕಲಬುರಗಿ: ಜು.6 ರಂದು ಗಾಣಿಗ ಸಮಾಜದ ಪೂರ್ಣಾನಂದ ಪುರಿ ಸ್ವಾಮಿಜಿಯವರು ಪತ್ರಿಕಾ ಗೋಷ್ಠಿಯನ್ನು ನಡೆಸಿ ಸಚಿವ ಶಿವರಾಜ ತಂಗಡಗಿ ಅವರ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು, ಅವರು ಕಮಿಷನ್ ಮೇಲೆ ಬದುಕುವಂತ ವ್ಯಕ್ತಿ ಅಲ್ಲ, ನ್ಯಾಯ ನಿಷ್ಠೆಯಿಂದ ರಾಜಕೀಯ ಜೀವನದಲ್ಲಿ ಇದ್ದಾರೆ ಎಂದು ಕಲಬುರಗಿ ಜಿಲ್ಲಾ ಭೋವಿ ವಡ್ಡರ ಸಮಾಜದ ಅಧ್ಯಕ್ಷರಾದ ಸಿದ್ರಾಮ ದಂಡಗುಲ್ಕರ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಮಿಷನ್ ತೆಗೆದುಕೊಂಡು ಸಚಿವರು ಕೆಲಸ ಮಾಡುತ್ತಾರೆ, ಅವರು ಭ್ರಷ್ಟ ಸಚಿವರಾಗಿದ್ದಾರೆ ಎಂದು ಹೇಳಿರುವ ಸ್ವಾಮೀಜಿಯ ಆರೋಪವನ್ನು ಜಿಲ್ಲಾ ಭೋವಿ ವಡ್ಡರ ಸಮಾಜ ಖಂಡಿಸುತ್ತದೆ ಎಂದು ಹೇಳಿದರು.
ಸಚಿವ ಶಿವರಾಜ್ ತಂಗಡಗಿ ಅವರು ಪ್ರಮಾಣಿಕವಾಗಿ ರಾಜಕೀಯವನ್ನು ನಡೆಸುತ್ತಿದ್ದಾರೆ. ಅವರು ಯಾರಿಂದಲೂ ಸಹ ಹಣವನ್ನು ಪಡೆದಿಲ್ಲ, ಇದಲ್ಲದೇ ಅವರೆ ಸಾಕಷ್ಟು ಜನರಿಗೆ ಸಹಾಯವನ್ನು ಮಾಡಿದ್ದಾರೆ. ರಾಜಕೀಯದಿಂದ ಹಣವನ್ನು ಮಾಡುವ ಉದ್ದೇಶ ಅವರಲ್ಲಿಲ್ಲ, ತಮ್ಮ ಜೀವನದಲ್ಲಿ ಕಾಯಕ ಪ್ರವೃತ್ತಿಯನ್ನು ರೂಢಿಸಿಕೊಂಡವರು ತಮ್ಮಲ್ಲಿ ಇದನ್ನು ಬೇರೆಯವರೊಂದಿಗೆ ಹಂಚಿಕೊಂಡು ಊಟವನ್ನು ಮಾಡುವವರಾಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗೌರವ ಅಧ್ಯಕ್ಷ ರಾಮಯ್ಯ ಪೂಜಾರಿ, ಕಾರ್ಯಾಧ್ಯಕ್ಷ ಈರಣ್ಣ ರಾವೂರಕರ, ಹಣಮಂತ ಜಾಧವ, ಮೋಹನ ವಿಟ್ಕರ್, ಹರಿ ಜಾಧವ, ಭೀಮಾಶಂಕರ ಭಂಕುರ, ರಾಜು ಎಂಪುರೆ, ಅನೀಲ ಜಾಧವ. ಶ್ರೀನಿವಾಸ ದಂಡಗುಲ್ಕರ ಮತ್ತಿತರು ಇದ್ದರು.







