ಕಲಬುರಗಿ | ಸರಕಾರಿ ಶಾಲೆಯ 21 ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಬಿಇಓ ಸೇರಿ ಹಲವು ಅಧಿಕಾರಿಗಳ ಆಸ್ಪತ್ರೆಗೆ ಭೇಟಿ, ಮಕ್ಕಳ ಆರೋಗ್ಯ ವಿಚಾರಣೆ

ಕಲಬುರಗಿ : ಕಾಳಗಿ ತಾಲೂಕಿನ ಮಲಘಾಣ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಾಯಂಕಾಲ 5 ವಿದ್ಯಾರ್ಥಿಗಳಲ್ಲಿ ಹೊಟ್ಟೆನೋವು ಮತ್ತು ಕಸಿವಿಸಿ ತಲೆಸುತ್ತು ಕಾಣಿಸಿಕೊಂಡು ಅಸ್ವಸ್ಥರಾಗಿ ಕಾಳಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಶನಿವಾರ ಬೆಳಿಗ್ಗೆ ಪುನಃ ಶಾಲೆಗೆ ಬಂದ 16 ವಿದ್ಯಾರ್ಥಿಗಳಿಗೆ ಅದೇ ತರಹದ ಹೊಟ್ಟೆನೋವು, ಕಸಿವಿಸಿ ತಲೆಸುತ್ತು ಲಕ್ಷಣಗಳು ಕಾಣಿಸಿಕೊಂಡು ಅಸ್ವಸ್ಥರಾಗಿದ್ದು, ತಕ್ಷಣ ಮುಖ್ಯಗುರುಗಳು, ಶಿಕ್ಷಕರು, ಪಾಲಕರು ಈ ಎಲ್ಲಾ ಮಕ್ಕಳನ್ನು ಕಾಳಗಿ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ತಿಳಿಸಿದ್ದಾರೆ.
ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕಾಳಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ವಿಜಯಕುಮಾರ ಮೇತ್ರೆ, ಡಾ.ಸಂಜಯ ಗೋಳೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದು ತಾಲೂಕುಮಟ್ಟದ ಅಧಿಕಾರಿಗಳಾದ ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಬಿಸಿಯೂಟ ಅಧಿಕಾರಿ ಪ್ರಕಾಶ ನಾಯಕೋಡಿ, ಬಿ.ಆರ್.ಪಿ.ರಮೇಶ ಮಠದ, ಗೋಟೂರ ಗ್ರಾ.ಪಂ ಅಧ್ಯಕ್ಷ ಶಿವಕುಮಾರ ಕಮಕನೊರ್, ಪಿಡಿಓ ಗುರುನಾಥ ರಾಠೋಡ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.
ಕೋರವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ಶಾಲೆಗೆ ಆಗಮಿಸಿ, ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ಈ ದಿನ ಮಕ್ಕಳಿಗೆ ಬಿಸಿಯೂಟ ಬಡಿಸದೆ ಬಿಸ್ಕೆಟ್, ಒಆರ್ಎಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿ ಅಸ್ವಸ್ಥರಾಗಿರುವುದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ, ಮಕ್ಕಳು ಆಹಾರ ಸೇವಿಸದೆ ಶಾಲೆಗೆ ಬಂದಿರಬಹುದು, ಕಡಿಯುವ ನೀರಿನಲ್ಲಿ ವ್ಯತ್ಯಾಸ ಹಾಗೂ ಬಿಸಿಲು, ವಾತವರಣ(ಕ್ರೈಮೆಟ್) ದಿಂದ ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆಯಾಗಿರಬಹುದು, ಇದರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
- ಶಶಿಧರ ಬಿರಾದಾರ. ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ತಾಪೂರ.
ಶಾಲಾ ಮಕ್ಕಳಿಗೆ ಅಲ್ಪಪ್ರಮಾಣದಲ್ಲಿ ಪುಡ್ ಫೈಜನ್ ಆಗಿರುವುದರಿಂದ ಅಸ್ವಸ್ಥಗೊಂಡಿದ್ದಾರೆ. ಸೂಕ್ತ ಚಿಕಿತ್ಸೆ ನೀಡಲಾಗಿದೆ. ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ. ಜಿಲ್ಲಾ ಕಾಲರಾ ಕಂಟ್ರೋಲ್ ತಂಡ ಶಾಲೆಗೆ ಭೇಟಿ ನೀಡಿದ್ದು, ವರದಿ ನಂತರ ಕಾರಣ ತಿಳಿಯಲಿದೆ.
- ಡಾ.ಸಂಜಯ ಗೋಳೆ, ವೈದ್ಯಾಧಿಕಾರಿಗಳು ಸರ್ಕಾರಿ ಆಸ್ಪತ್ರೆ ಕಾಳಗಿ.







