ಕಲಬುರಗಿ | ಕವಿಗೆ ಬದ್ಧತೆ , ಸೂಕ್ಷ್ಮ ಅವಲೋಕನ ಅಗತ್ಯ : ಡಾ.ಸಿದ್ಧರಾಮ ಹೊನ್ಕಲ್

ಕಲಬುರಗಿ : ಯಾವುದೇ ಕವಿಗೆ ಒಂದು ಸಾಮಾಜಿಕ ಜವಾಬ್ದಾರಿ ಇರುತ್ತದೆ. ಅವರು ಇಂದು ಬರೆದದ್ದು ಮುಂದಿನ ತಲೆಮಾರಿಗೆ ಹೋಗುವಂತಹ ಸೌಹಾರ್ದತೆಯ ಬದುಕಿನ ಕಾವ್ಯ ರಚಿಸಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಸಿದ್ಧರಾಮ ಹೊನ್ಕಲ್ ಅವರು ಹೇಳಿದರು.
ನಗರದ ಕಲಾ ಮಂಡಳದಲ್ಲಿ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾದಿಂದ ಗುರುವಾರ ಆಯೋಜಿಸಿದ್ದ ನಿವೃತ್ತ ಕನ್ನಡ ಉಪನ್ಯಾಸಕ ರೇವಣಸಿದ್ದಪ್ಪ ದುಕಾನ ಅವರ ʼಹೂಗನಸುʼ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಸಮಕಾಲಿನ ಸಂಕಟಗಳಿಗೆ ಕವಿ ದ್ವನಿಯಾಗಬೇಕು, ಸಮಾಜವನ್ನು ತಿದ್ದಿ ಸರಿದಾರಿಗೆ ತರುವ ರೀತಿಯಲ್ಲಿ ಅಕ್ಷರಗಳನ್ನು ಪೋಣಿಸಬೇಕು, ಕವಿಗೆ ಬದ್ಧತೆ ಮತ್ತು ಸುತ್ತಲಿನ ಸಂಗತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅಭಿವ್ಯಕ್ತಿಸುವ ಒಳದನಿ ಇರಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಕವಿಗಳು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು, ಕವಿಗಳಿಂದ ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಆಗಬೇಕು, ಹಿರಿಯ ತಲೆಮಾರಿನ ಸಾಹಿತಿಗಳ ಪುಸ್ತಕಗಳನ್ನು ಓದಿ ಸಾಹಿತ್ಯವನ್ನು ರಚನೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಡಾ.ವಿಜಯಕುಮಾರ ಪರೂತೆ ಮಾತನಾಡಿದರು. ಕೃತಿ ಕುರಿತು ಸಾಹಿತಿ ಡಾ.ಶೈಲಜಾ ಬಾಗೇವಾಡಿ ವಿವರಣಾತ್ಮಕವಾಗಿ ಮಾತನಾಡಿದರು.
ಕಾರ್ಯಕ್ರಮದ ಸಾನ್ನಿಧ್ಯ ಡಾ.ರೇವಣಸಿದ್ಧ ಶಿವಾಚಾರ್ಯರು, ಹಾಗೂ ಪೂಜ್ಯ ಚಿಕ್ಕ ಗುರು ನಂಜೇಶ್ವರ ಮಹಾ ಸ್ವಾಮಿಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಧುಕರ ದೇಶಪಾಂಡೆ ವಹಿಸಿದ್ದರು. ಬಿಡುಗಡೆಗೊಂಡ ಕೃತಿಯ ಕವಿ ರೇವಣಸಿದ್ದಪ್ಪ ದುಕಾನ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ.ಸೂರ್ಯಕಾಂತ್ ಪಾಟೀಲ್ ಬಸವರಾಜ ಘಾಣೂರೆ, ಗೋಸುದ್ದೀನ್ ತುಮಕೂರಕರ , ಬಸವರಾಜ್ ಬಿರಾಜದಾರ್, ಶ್ರೀದೇವಿ ಬಾವಿದೊಡ್ಡಿ ಅಂಬಾರಾಯ ಕೋಣೆ, ಡಾ ಶರಣಬಸಪ್ಪ ವಡ್ಡನಕೇರಿ, ಶೈಲೇಂದ್ರ ಸಿಂಗ್ ಠಾಕೂರ ಸೇರಿದಂತೆ ನೂರಾರು ಜನ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್ ನಿರಗುಡಿ ಪ್ರಾಸ್ತಾವಿಕ ಮಾತನಾಡಿದರು. ಅರುಣಾ ನಿರೂಪಿಸಿದರು ಶ್ವೇತಾ ವಂದಿಸಿದರು.
ಕವಿಯಾದವರಿಗೆ ಸಾಮಾಜಿಕ ಜವಾಬ್ದಾರಿ ಎಲ್ಲರಿಗಿಂತಲೂ ಹೆಚ್ಚಿರುತ್ತದೆ. ಅಧ್ಯಯನದ ಮೂಲಕ ತಮ್ಮ ಅನುಭವಗಳನ್ನು ವಿಸ್ತರಿಸಿಕೊಳ್ಳಬೇಕು. ಎಲ್ಲರೂ ಸಾಹಿತ್ಯವನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು.
-ಡಾ.ರೇವಣಸಿದ್ದ ಶಿವಾಚಾರ್ಯರು, ಶ್ರೀನಿವಾಸ್ ಸರಡಗಿ







