ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಸಿ ಚಿತ್ತಾಪುರ ಬಂದ್

ಕಲಬುರಗಿ: ಸಾರ್ವಜನಿಕ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಅವರಿಗೆ ಬೆದರಿಕೆ ಕರೆಗಳು ಬಂದಿರುವ ಬೆನ್ನಲ್ಲೇ ಸಚಿವ ಖರ್ಗೆ ಅವರನ್ನು ಬೆಂಬಲಿಸಿ, ಕಾಂಗ್ರೆಸ್ ಮುಖಂಡರು ಘೋಷಿಸಿದ ಚಿತ್ತಾಪುರ ಬಂದ್ ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಚಿತ್ತಾಪುರ ಹಾಗೂ ವಾಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕರೆ ನೀಡಿದ್ದ ಬಂದ್ ಕರೆಗೆ ಉತ್ತಮ ಸ್ಪಂದನೆ ದೊರಕಿದೆ. ಚಿತ್ತಾಪುರ ಪಟ್ಟಣದಲ್ಲಿರುವ ಬಹುತೇಕ ಅಂಗಡಿ ಮುಗ್ಗಟ್ಟುಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದವು. ಅಲ್ಲದೆ, ಯಾವುದೇ ಬಸ್ ಗಳು ರಸ್ತೆಗೆ ಇಳಿಯಲಿಲ್ಲ.
ಬಂದ್ ಕರೆ ನಿಮಿತ್ತ ಚಿತ್ತಾಪುರ ಪಟ್ಟಣದ ಚಿತ್ತಾಶಾಹವಲಿ ಚೌಕ್ನಿಂದ ಆರಂಭವಾದ ಪ್ರತಿಭಟನೆ ಜನತಾ ಚೌಕ, ಭುವನೇಶ್ವರಿ ವೃತ್ತ, ಡಾ. ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಹಾದು ಹೋಗಿ ಕೊನೆಗೆ ಮಾನವ ಸರಪಳಿ ನಿರ್ಮಿಸಲಾಯಿತು. ಪಟ್ಟಣದ ಹಲವೆಡೆ ಟೈರ್ಗೆ ಬೆಂಕಿ ಹಚ್ಚಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಚಿತ್ತಾಪುರ ಕ್ಷೇತ್ರದ ಶಾಸಕ ಮತ್ತು ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಆರೆಸ್ಸೆಸ್ ಮೂಲದ ವ್ಯಕ್ತಿ ಕರೆ ಮಾಡಿ ನಿಂದಿಸಿರುವುದು ಅಪರಾಧ. ಅಂತಹ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಖರ್ಗೆ ಅವರನ್ನು ಬೆಂಬಲಿಸಿ ತವರು ಕ್ಷೇತ್ರದಲ್ಲಿ ಬಂದ್ ಗೆ ಕರೆ ಕೊಟ್ಟಿದ್ದೇವೆ, ಇದರಲ್ಲಿ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿ, ಯಶಸ್ವಿ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ಮುಕ್ತಾರ್ ಪಟೇಲ್ ಮಾತನಾಡಿ, ಸರ್ಕಾರಿ ಶಾಲಾ-ಕಾಲೇಜು, ದೇವಸ್ಥಾನಗಳು ಸೇರಿದಂತೆ ಸರ್ಕಾರದ ವ್ಯಾಪ್ತಿಯ ಸ್ಥಳಗಳಲ್ಲಿ ಆರೆಸ್ಸೆಸ್ ಕಾರ್ಯಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇ ಈ ಬೆದರಿಕೆ ಕರೆಗಳು ಮತ್ತು ನಿಂದನೆಗಳಿಗೆ ಕಾರಣ. ಬೆದರಿಕೆ ಕರೆ ಮಾಡಿರುವುದು ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ಶಿವಾನಂದ ಪಾಟೀಲ ಮತ್ತೂರು, ರಮೇಶ ಮರಗೋಳ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಮಹಮುದ್ ಸಾಬ್ ನಾಡಿ, ಸುಜು ನಾಲವಾರ, ಶಿವರುದ್ರಪ್ಪ ಚೀಟಿ, ಜೆ.ರಾಮತೀರ್ಥ,ಮಲ್ಲಿಕಾರ್ಜುನ ಮುಡಬೂಳಕರ್, ಖಾಜಾ ಬಾದಲ್, ಸಂತೋಷ ಪೂಜಾರಿ, ನೋಮು ಟೋಕಾಪೂರ, ಬಸವರಾಜ ಮುಡಬೂಳ, ಗಂಗಾಧರ್ ಡಿಗ್ನಿ, ಸೂರಜ್ ಕಲ್ಲರ್, ಸಾಬಣ್ಣ ಕಾಶಿ, ಅಲ್ ವಡ್ಡತಗಿ, ಮುಜೀಬ್ ಮನೈಡಿ, ಶ್ರೀಮಂತ ಗುತ್ತೇದಾರ, ಶ್ರೀನಿವಾಸ ರೆಡ್ಡಿ ಪಾಲವ್, ಶಿವರಾಖ ವಾಳೆದ. ಇರಬಾಶ್ ಸಾಬ್, ರಾಮಲಿಂಗ ವಾನರ, ಲಕ್ಷ್ಮಿ ಕಾಂತ್ ಸಾಲಿ, ಪ್ರಭು ಹಳಕರ್ಟಿ, ಮಹೇಶ ಕಾಕಿ, ಶ್ರಿನಿವಾಸ ಸಗರ್, ಹಣಮಂತ ಸುoಕನೂರ್, ಚಂದ್ರಶೇಖರ ಕಾಕಿ, ಮಲ್ಲಿಕಾರ್ಜುನ ಕಾಳಗಿ, ಶೀಲಾ, ರಸೂಲ್ ಮುಸ್ತಫಾ, ಜಗದೀಶ್ ಚವ್ಹಾಣ, ಸುನಿಲ ದೊಡ್ಡಮನಿ, ಸಪ್ನಾ ಪಾಟೀಲ, ನಾಗರೆಡ್ಡಿ ಗೋಪಸೇನ್, ದೇವು ಯಾಬಾಳ, ಶಿವಕಾಂತ ಬೆಣ್ಣೂರಕರ್, ಈರಪ್ಪ ಭೋವಿ, ಎಂ.ಎ.ರಷೀದ್, ಕರಣ ಅಲ್ಲೂರ್, ಡಾ.ಪ್ರಭುರಾಜ, ಅಜೀಜ್, ಶಿವಾಜಿ, ವಿಠ್ಠಲ, ಸೇರಿದಂತೆ ಮತ್ತಿತರರು ಇದ್ದರು.







