ಕಲಬುರಗಿ | ಜಿಲ್ಲಾ ಮಟ್ಟದ ಶಿಶಿಕ್ಷು, ಉದ್ಯೋಗ ಮೇಳಕ್ಕೆ ಪೊಲೀಸ್ ಕಮಿಷನರ್ ರಿಂದ ಚಾಲನೆ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿರುವ ನಿರುದ್ಯೋಗ ಯುವ ಜನತೆಗೆ ಉದ್ಯೋಗಾಧರಿತ ಶಿಶಿಕ್ಷು ತರಬೇತಿ ಹಾಗು ಉದ್ಯೋಗವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಲಬುರಗಿ ಸರ್ಕಾರಿ, ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳು ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಕಲಬುರಗಿ ಇವುಗಳ ಸಹಯೋಗದೊಂದಿಗೆ ಬುಧವಾರ ಕಲಬುರಗಿ (ಪುರುಷ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಶಿಶಿಕ್ಷು ಹಾಗೂ ಉದ್ಯೋಗ ಮೇಳಕ್ಕೆ ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ. ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಐ.ಟಿ.ಐ. ಕೋರ್ಸುಗಳ ಮಹತ್ವದ ಬಗ್ಗೆ ತಿಳಿಸಿದಲ್ಲದೇ ಆಸಕ್ತಿಯಿಂದ ತರಬೇತಿಯನ್ನು ಪಡೆದುಕೊಂಡು ಸೂಕ್ತ ಉದ್ಯೋಗವನ್ನು ಪಡೆದು ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಸಂಸ್ಥೆಯ ಪ್ರಾಚಾರ್ಯ ಮುರಳೀಧರ ರತ್ನಗಿರಿ ಅವರು ಮಾತನಾಡಿ, ಇಂದು ನಡೆದ ಉದ್ಯೋಗ ಮೇಳದಲ್ಲಿ ಸುಮಾರು 25ಕ್ಕೂ ಹೆಚ್ಚು ಉದ್ಯೋಗದಾತರು ಭಾಗವಹಿಸಿದ್ದು, ಸುಮಾರು 800 ಅಭ್ಯರ್ಥಿಗಳು ಆನ್ಲೈನ್ ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದು, ಸುಮಾರು 300ಕ್ಕೂ ಹೆಚ್ಚು ಅಭ್ಯರ್ಥಿಗಳು ಶಿಶಿಕ್ಷು/ಉದ್ಯೋಗಾವಕಾಶವನ್ನು ಪಡೆಯಲಿದ್ದಾರೆ. ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳಾದ ಎಲ್ ಆಂಡ್ ಟಿ, ಎಂಆರ್ಫ್, ಟೊಯೊಟೋ, ರಾಜಶ್ರೀ ಸಿಮೆಂಟ್, ಶ್ರೀ ಸಿಮೆಂಟ್ ಸೇರಿದಂತೆ ಅನೇಕ ಕಂಪನಿಗಳು ಭಾಗವಹಿಸಿದರು ಎಂದರು.
ಕಾರ್ಯಕ್ರಮದಲ್ಲಿ ವಿಭಾಗೀಯ ಕಚೇರಿ ಜಂಟಿ ನಿರ್ದೇಶಕ ರಾಜೇಶ ಬಾವಗಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಸುರೇಶ ವಗ್ಗೆ, ವಿಭಾಗೀಯ ಕಚೇರಿಯ ಉಪನಿರ್ದೇಶಕಿ ಡಾ.ರುಬಿನಾ ಪರ್ವೀನ, ಪಿಯುಶ್ ಪರಿಹಾರ, ಪ್ರಾಚಾರ್ಯ ಶಕೀಲ ಅನ್ಸಾರಿ, ಉದ್ಯಮಿ ವೀರೇಶ ಸೇರಿದಂತೆ ಹಲವಾರು ಉದ್ಯೋಗದಾತರು, ಸರ್ಕಾರಿ, ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರಾಚಾರ್ಯರು, ಸಿಬ್ಬಂದಿ ಹಾಗೂ ತರಬೇತಿದಾರರು ಉಪಸ್ಥಿತರಿದ್ದರು.







