ಕಲಬುರಗಿ | ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮ

ಕಲಬುರಗಿ: ಜಿಲ್ಲಾ ಪೊಲೀಸ್ ಇಲಾಖೆಯ ಸೈಬರ್ ಅಪರಾಧ ವಿಭಾಗವು ಅಫಜಲಪುರ ಪಟ್ಟಣದ ಮಹಾಂತಮ್ಮ ಪಾಟೀಲ್ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಅಫಜಲಪುರ ಶಾಸಕ ಎಂ.ವೈ.ಪಾಟೀಲ್, ಕಂಪ್ಯೂಟರ್ ಮತ್ತು ಮೊಬೈಲ್ ಗಳಿಂದ ತುಂಬಾ ಉಪಯೋಗವಿದ್ದರೂ, ಅಪಾಯ ಕೂಡ ಇದೆ. ಇಂದಿನ ದಿನಗಳಲ್ಲಿ ಹಣಕಾಸು, ಬ್ಯಾಂಕ್ ವಂಚನೆಗಳು ಮತ್ತು ಮಹಿಳೆಯರ ಬ್ಲಾಕ್ ಮೇಲ್ ತಂತ್ರಗಳು ಇಂಟರ್ನೆಟ್ ಮೂಲಕ ಮಾಡುತ್ತಿರುವುದು ಘೋರ ಅಪರಾಧವಾಗಿದೆ ಎಂದರು.
ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವುದರಿಂದ ನಾವು ಇಂಟರ್ನೆಟ್ ಬಳಕೆ ಸಮಯದಲ್ಲಿ ಲಾಭಕ್ಕಿಂತ ಹಾನಿಯ ದೃಷ್ಟಿಯಲ್ಲಿ ಇಟ್ಟುಕೊಂಡು ಉಪಯೋಗಿಸಬೇಕು, ಯುವಮನಸ್ಕರು ಈ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದರು.
" ಸೈಬರ್ ವಂಚನೆಗಳ" ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಕಲಬುರಗಿ ಜಿಲ್ಲಾ ಸೈಬರ್ ಪೊಲೀಸ್ ಇಲಾಖೆಯ ಸಹಾಯಕ ಅಧಿಕ್ಷಕರಾದ ಬಸವೇಶ್ವರ ಹೀರಾ ಮಾತನಾಡುತ್ತಾ, ಪ್ರತಿಯೊಬ್ಬ ಅಂತರ್ಜಾಲ ಬಳಕೆದಾರ ವಹಿಸಬೇಕಾದ ಕೆಲವು ಎಚ್ಚರಿಕೆಗಳನ್ನು ವಿವರಣಾತ್ಮಕವಾಗಿ ವಿಶ್ಲೇಷಿಸಿದರು. ಅಂತರ್ಜಾಲ ಬಳಕೆದಾರರು ತಮ್ಮ ಕಾರ್ಡ್, ಸಿವಿವಿ, ಯುಪಿಐ ಪಿನ್, ಓಟಿಪಿ, ಎಮ್ ಪಿನ್ ಇವುಗಳನ್ನು ಯಾವುದೇ ಕಾರಣಕ್ಕೂ ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು, ಪರಿಚಯಸ್ತರಲ್ಲದ ವ್ಯಕ್ತಿಗಳಿಂದ ಎಸ್.ಎಂ.ಎಸ್, ವಾಟ್ಸಾಪ್ ಮತ್ತು ಇಮೇಲ್ ಲಿಂಕಗಳು ಬಂದರೆ ಅವುಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಿ ತೆರೆಯಬಾರದು ಎಂದು ಸಲಹೆ ನೀಡಿದರು.
ಗೂಗಲ್ ನಲ್ಲಿ ಕಂಡುಬರುವ ಕಸ್ಟಮರ್ ಕೇರ್ ಸಂಪರ್ಕ ಸಂಖ್ಯೆ, ಇಮೇಲ್ ವಿಳಾಸ, ಇವುಗಳ ನೈಜತೆಯನ್ನು ತಿಳಿದ ನಂತರವೇ ಉಪಯೋಗಿಸಬೇಕು, ವರ್ಕ್ ಫ್ರಮ್ ಹೋಮ್ ಆನ್ಲೈನ್ ಮೂಲಕ ಉದ್ಯೋಗ ಕೊಡಿಸುವ ಬಗ್ಗೆ ಬರುವ ಜಾಹೀರಾತುಗಳನ್ನು ನಂಬಬಾರದು ಮತ್ತು ಅನುಮಾನದಿಂದ ನೋಡಬೇಕು, ಎಪಿಕೆ ಫೈಲ್ಗಳನ್ನು ಕ್ಲಿಕ್ ಮಾಡಬಾರದು. ಬ್ಯಾಂಕ್ ಖಾತೆ, ಸಾಮಾಜಿಕ ಜಾಲತಾಣ ಇವುಗಳ ಪಾಸ್ವರ್ಡ್ ಗಳನ್ನು ಅಳವಡಿಸಿಕೊಂಡು ಮಹಾನಗರಗಳಾದ ಮುಂಬೈ, ದೆಹಲಿ ಮತ್ತು ವಿದೇಶಗಳ ಮಹಾನಗರಗಳ ಕ್ರೈಂ ಬ್ರಾಂಚ್ ಗಳ ಹೆಸರಿನಲ್ಲಿ ಡ್ರಗ್ಸ್ ಅಥವಾ ಇತರೆ ಯಾವುದೇ ಪಾರ್ಸೆಲ್ ಬಗ್ಗೆ ಸಂದೇಶ ಕಳಿಸಿ ಸೈಬರ್ ಅರೆಸ್ಟ್ ಮಾಡುವ ಅಪರಾಧಿಗಳು ಇಂದು ಹೆಚ್ಚಾಗಿದ್ದಾರೆ. ಅವರಿಂದ ಎಚ್ಚರಿಕೆ ವಹಿಸಬೇಕು ಎಂದರು.
ತಹಶೀಲ್ದಾರರಾದ ಸಂಜೀವ್ ಕುಮಾರ್ ದಾಸರ್ ಮಾತನಾಡಿದರು.
ಆಫ್ಜಲ್ಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಪೂಜಾರಿ ಮತ್ತು ಪಂಚಾಯತಿಯ ಮಾಜಿ ಉಪಾಧ್ಯಕ್ಷ ಶಿವಾನಂದ ಗಾಡಿ ಸೌಕಾರ್, ಶಾಸಕರ ಸರಕಾರಿ ಆಪ್ತ ಕಾವ್ಯದರ್ಶಿ ರಾಹುಲ್, ಮಹಾಂತಮ್ಮ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ಎಂ. ವೀರಣ್ಣಗೌಡ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು .
ಕಾರ್ಯಕ್ರಮದಲ್ಲಿ ಮಾಂತೇಶ್ವರ ವಿದ್ಯಾವರ್ಧಕ ಸಂಘದ ಸಿಬ್ಬಂದಿಯವರಾದ ಮೌನೇಶ ನಾಯಕ್, ಗುರುಶಾಂತ್ ಹೂಗಾರ್, ಗುಂಡಯ್ಯ ಸ್ವಾಮಿ, ಪ್ರಶಾಂತ ಪಾಟೀಲ್, ಅಶೋಕ ತಂಬಾಕೆ, ಶಂಕರ ದೊಡ್ಡಮನಿ, ಬಸವರಾಜ ಪಾಟೀಲ್, ರಾಜೇಶ್ವರಿ ಹಿರೇಮಠ್, ಶಹನಾಜ್ ಇನಾಮ್ದಾರ್, ವರಮಹಾಲಕ್ಷ್ಮಿ, ಚಿದಾನಂದ ಹಿರೇಮಠ, ಶ್ರೀಕಾಂತ ಪಾಟೀಲ, ಶ್ರೀಕಾಂತ ಧೂಳೇ, ಚಂದ್ರಕಾಂತ ಗುಂಡದ, ಅನಿಲ ಹೂನಳ್ಳಿ, ಶೈಲಜಾ ಮಾಳಗೆ, ಕುಮಾರ ಸ್ವಾಮಿ ಮತ್ತು ಇತರರು ಉಪಸ್ಥಿತರಿದ್ದರು.







