ಕಲಬುರಗಿ | ಶಾದಿಮಹಲ್, ಸಮುದಾಯ ಭವನಗಳಿಗೆ ಅನುದಾನ ಘೋಷಿಸುವಂತೆ ಆಗ್ರಹ

ಕಲಬುರಗಿ : ಮಾ.7ರಂದು ರಾಜ್ಯ ಸರಕಾರ ಮಂಡಿಸಲಿರುವ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಸಮುದಾಯಗಳ ಅಪೂರ್ಣಗೊಂಡಿರುವ ಶಾದಿಮಹಲ್ ಮತ್ತು ಸಮುದಾಯ ಭವನಗಳಿಗೆ ಅನುದಾನ ಘೋಷಣೆ ಮಾಡುವಂತೆ ಕಲ್ಯಾಣ ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯಧನ ಪಡೆದ ಶಾದಿಮಹಲ್ ಸಮುದಾಯ ಭವನಗಳ ಒಕ್ಕೂಟದ ಉಪಾಧ್ಯಕ್ಷ ಶೌಕತ್ ಅಲಿ ಆಲೂರ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 2013 ರಿಂದ 2018 ರವರೆಗೆ ಮಂಜೂರಾಗಿರುವ ಶಾದಿಮಹಲ್/ಸಮುದಾಯ ಭವನಗಳು ಸಮರ್ಪಕ ಅನುದಾನವಿಲ್ಲದೆ ಅರ್ಧಕ್ಕೆ ನಿಂತು ಹೋಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 370 ಭವನಗಳ ಕಟ್ಟಡಗಳು ಅಪೂರ್ಣಗೊಂಡು ನೆನೆಗುದಿಗೆ ಬಿದ್ದಿವೆ. ಅಪೂರ್ಣಗೊಂಡಿರುವ ಕಟ್ಟಡಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಮುತುವರ್ಜಿ ವಹಿಸಿ, ಕಾಮಗಾರಿಗಳನ್ನು ಪೂರ್ಣಗೊಳಿಸಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅನ್ವರ್ ಹುಸೇನ್, ಮೈನುದ್ದೀನ ಕಾಳಗಿ ಸೇರಿದಂತೆ ಇತರರು ಹಾಜರಿದ್ದರು.





