ಕಲಬುರಗಿ| ಕೇಂದ್ರೀಯ ವಿವಿ ಆವರಣದಲ್ಲಿ ದೇವಸ್ಥಾನವಿದ್ದರೂ ಅದನ್ನು ತೆರವುಗೊಳಿಸಬೇಕು: ಶ್ರೀರಾಮಸೇನೆಯ ಆಂದೋಲಾ ಸ್ವಾಮೀಜಿ

ಕಲಬುರಗಿ: ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕೇಂದ್ರೀಯ ವಿವಿ ಆವರಣದಲ್ಲಿ ತೊಂದರೆಯಾಗುತ್ತಿದ್ದರೆ ದೇವಸ್ಥಾನವಿದ್ದರೂ ಅದನ್ನು ಕೂಡಲೇ ಅಲ್ಲಿಂದ ತೆರವುಗೊಳಿಸಲೇಬೇಕು ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಆಂದೋಲಾ ಸ್ವಾಮೀಜಿ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರೀಯ ವಿವಿ ಆವರಣದಲ್ಲಿ ಲಕ್ಷ್ಮೀ ದೇವಸ್ಥಾನ ಇರಲಿ, ಸರಸ್ವತಿ ದೇವಸ್ಥಾನ ಇರಲಿ, ಗೋರಿಯಾದರೂ ಇರಲಿ ವಿವಿಗೆ ತೊಂದರೆಯಾಗುತ್ತಿದ್ದರೆ ಅಲ್ಲಿಂದ ತೆಗೆಯಲಿ ಎಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಟಿವಿ ಮಾಧ್ಯಮಗಳ ಮೇಲೆಯೇ ಎಫ್ಐಆರ್ ಮಾಡಬೇಕೆಂದು ಪೊಲೀಸರು ತಯಾರು ಮಾಡಿದ್ದರು. ಯಾವಾಗ ನನ್ನ ಹೇಳಿಕೆ ಬಂತೋ, ಆವಾಗಲೇ ಅವರು ಈ ಸ್ವಾಮೀಜಿಯನ್ನು ಬಲಿಪಶು ಮಾಡಬೇಕೆಂದು ಅವರು ನಿರ್ಧರಿಸಿದ್ದರು. ಹಾಗಾಗಿ ಟಿವಿಯವರನ್ನು ಬದಿಗೆ ಸರಿಸಿ, ನನ್ನನ್ನೇ ಬಲಿಪಶು ಮಾಡಿದ್ದಾರೆ. ಯಾಕೆಂದರೆ ಟಿವಿಯವರನ್ನು ಕಂಡರೆ ಪೊಲೀಸರಿಗೆ ಭಯ ಅದಕ್ಕೆ ಅವರ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎಂದರು.
ಕೇಂದ್ರೀಯ ವಿವಿ ಆವರಣದಲ್ಲಿ ಎರಡು ಹಳೆಯ ಗೋರಿಗಳಿವೆ. ಅನಧಿಕೃತವಾಗಿ ಹೊಸ ಗೋರಿಗಳಿದ್ದರೆ ತೆರವು ಮಾಡಲು ಆಗ್ರಹಿಸಿದ್ದೆ. ಇಲ್ಲದಿದ್ದರೆ ನಾವೇ ಅದನ್ನು ಕರ ಸೇವೆ ಮೂಲಕ ತೆರವುಗೊಳಿಸುವುದಾಗಿ ಹೇಳಿದ್ದೇವೆ. ಇದೇ ನೆಪದಲ್ಲಿ ಕೋಮುಭಾವನೆಗೆ ಧಕ್ಕೆ ಎನ್ನುವ ಆರೋಪ ಮುಂದಿಟ್ಟುಕೊಂಡು ನನ್ನ ವಿರುದ್ಧ ನರೋಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಇದರ ಬಗ್ಗೆ ಕೇಂದ್ರೀಯ ವಿವಿ ಕುಲಪತಿಯವರು ಮಾತನಾಡಿ, ಒಂದೇ ಗೋರಿ ಇದ್ದು, ಅದಕ್ಕೆ ವಿದ್ಯುತ್ ಕಡಿತ ಮಾಡಲಾಗಿದೆ, ತೆರವಿಗೆ ಸೂಚಿಸಿದ್ದೇನೆ ಎಂದಿದ್ದಾರೆ. ಅವರ ವಿರುದ್ಧ ಯಾಕೆ ಇನ್ನೂ ಪೊಲೀಸರು ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನೆ ಮಾಡಿದರು.
ವಿವಿ ಆವರಣದಲ್ಲಿ ನೂರಾರು ವರ್ಷಗಳ ಹಿಂದಿನ ಗೋರಿಗಳಿವೆ ಎಂದು ಪೊಲೀಸರು ಅಲ್ಲಿನ ಗೋರಿಗಳ ಪರ ವಕಾಲತ್ತು ವಹಿಸುತ್ತಿದ್ದಾರೆ. ಶಿಕ್ಷಣ ಕೇಂದ್ರದಲ್ಲಿ ಯಾವುದೇ ಧಾರ್ಮಿಕ ಕುರುಹು, ಮೂರ್ತಿಗಳು ಇದ್ದರೂ ತೆರವು ಮಾಡಿಸಬೇಕು, ಇದು ಸುಪ್ರೀಂ ಕೋರ್ಟ್ ಆದೇಶವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಗನಬಸವ ಶಿವಾಚಾರ್ಯರು, ರಾಕೇಶ ಜಮಾದಾರ, ಮಲಕಣ್ಣ ಹಿರೇಪೂಜರಿ, ರವಿ ಸೇರಿದಂತೆ ಮತ್ತಿತರರು ಇದ್ದರು.







