ಕಲಬುರಗಿ | ಶಾಸಕ ಡಾ.ಅವಿನಾಶ್ ಜಾಧವ್ ಅವರ ತೇಜೋವಧೆಗಾಗಿ ಸುಳ್ಳು ಆರೋಪ : ಚೆಂಗಟಿ

ಕಲಬುರಗಿ : 'ಚಿಂಚೋಳಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶಾಸಕ ಡಾ.ಅವಿನಾಶ್ ಜಾಧವ್ ಅವರನ್ನು ಯಾವುದೋ ದುರುದ್ದೇಶದಿಂದ ಸುಳ್ಳು ಆರೋಪ ಮಾಡುವ ಮೂಲಕ ತೇಜೋವಧೆ ಮಾಡುವುದು ಸರಿಯಲ್ಲ' ಎಂದು ಚಿಂಚೋಳಿ ಬಿಜೆಪಿ ಮಂಡಲ ಅಧ್ಯಕ್ಷ ವಿಜಯಕುಮಾರ್ ಚೆಂಗಟಿ ಹೇಳಿದರು.
ಕಾಳಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಶಾಸಕ ಡಾ.ಅವಿನಾಶ್ ಜಾಧವ್ ಅವರು ಮತಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ, ಅಭಿವೃದ್ಧಿಗಾಗಿ ಸದಾ ಚಿಂತನೆ ಮಾಡುತ್ತಿದ್ದಾರೆ. ಅವರು ಅಧಿವೇಶನದಲ್ಲಿರುವ ಸಮಯದಲ್ಲಿ ಚಿಂಚೋಳಿ ಶಾಸಕರು ಕಾಣೆಯಾಗಿದ್ದಾರೆ ಎಂದು ಪೋಸ್ಟರ್ ಅಂಟಿಸುವವರಿಗೆ ಸಾಮಾನ್ಯ ಜ್ಞಾನ ಇರಬೇಕು ಎಂದು ತೀಕ್ಷ್ಣವಾಗಿ ಕುಟುಕಿದರು.
ಏನೇ ಸಮಸ್ಯೆ ಇದ್ದರು ಶಾಸಕರ ಬಳಿ ಬಂದು ಬಗೆಹರಿಸಿಕೊಳ್ಳಬೇಕು ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಳಗಿ ತಾಲೂಕು ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಪ್ರಶಾಂತ ಕದಮ, ಮುಖಂಡರಾದ ಸುಂದರ ಡಿ ಸಾಗರ, ಸುನೀಲ್ ರಾಜಾಪೂರ, ಗಣೇಶ್ ಸಿಂಗಶೆಟ್ಟಿ, ಬಲರಾಮ ವಲ್ಲ್ಯಾಪುರೆ, ರಾಜು ಶಿಳ್ಳಿನ್, ರೇವಣಸಿದ್ಧ ಕುಡ್ಡಳ್ಳಿ ರಾಜಾಪೂರ, ಆನಂದರೆಡ್ಡಿ ರಾಜಾಪೂರ, ಸಂತೋಷ ಚಿನ್ನಾ ರಾಠೋಡ ಇದ್ದರು.





