ಕಲಬುರಗಿ | ಬಿಜೆಪಿ ಶಾಸಕ ಅವಿನಾಶ್ ಜಾಧವ್ ಕಾಣೆಯಾಗಿದ್ದಾರೆ ಎಂದು ಪೋಸ್ಟರ್ ಅಂಟಿಸಿದ ರೈತರು

ಕಲಬುರಗಿ : ಚಿಂಚೋಳಿ ಮತಕ್ಷೇತ್ರದ ಮತದಾರರಿಂದ ಚುನಾಯಿತರಾದ ಬಿಜೆಪಿ ಶಾಸಕ ಡಾ.ಅವಿನಾಶ್ ಜಾಧವ್ ಅವರು ಕ್ಷೇತ್ರದ ಜನರ ಸಮಸ್ಯೆ ಆಲಿಸದೆ ಮತಕ್ಷೇತ್ರದಿಂದ ಕಾಣೆಯಾಗಿದ್ದಾರೆ ಎಂದು ಕಾಳಗಿ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ಶಾಸಕ ಡಾ.ಅವಿನಾಶ್ ಜಾಧವ್ ಅವರ ಭಾವಚಿತ್ರ ಇರುವ ಪೋಸ್ಟರ್ ಅಂಟಿಸಿ ತಾಲೂಕು ರೈತ ಸೇನೆ ಹಾಗೂ ರೈತ ಸಂಘದ ತಾಲೂಕಾಧ್ಯಕ್ಷ ವೀರಣ್ಣ ಗಂಗಾಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಂಚೋಳಿ ಮತಕ್ಷೇತ್ರದಲ್ಲಿ ಜನರು ಕುಡಿಯುವ ನೀರಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿರುವ ಶಾಸಕ ಡಾ.ಅವಿನಾಶ್ ಜಾಧವ್ ಮತಕ್ಷೇತ್ರವನ್ನೇ ಮರೆತುಬಿಟ್ಟಿದ್ದಾರೆ ಎಂದು ಕಿಡಿಕಾರಿದರು.
ಕಾಳಗಿ ತಾಲೂಕು ಕೇಂದ್ರ ರಚನೆಯಾಗಿ ಸುಮಾರು ಏಳು ವರ್ಷಗಳೇ ಕಳೆಯುತ್ತಿದ್ದರೂ ತಾಲೂಕು ಕಚೇರಿಗಳನ್ನು ತರುವಲ್ಲಿ ವಿಫಲರಾಗಿದ್ದಾರೆ. ಅಧಿವೇಶನದಲ್ಲಿ ಕಮಲಾಪೂರ, ಶಹಬಾದ್ ನೂತನ ತಾಲೂಕಿಗೆ 100ಹಾಸಿಗೆ ಆಸ್ಪತ್ರೆ ಮೇಲ್ದರ್ಜೆಗೆ ಅನುದಾನ ನೀಡಲಾಗಿದೆ. ಆದರೆ ಕಾಳಗಿ ತಾಲೂಕಿಗೆ ಅನ್ಯಾಯವಾದರೂ, ಒಮ್ಮೆಯೂ ಕೂಡ ಧ್ವನಿ ಎತ್ತಲ್ಲಿಲ್ಲ, ಪ್ರತಿಭಟಿಸಲಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಮತಕ್ಷೇತ್ರದ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತರಬೇಕೆಂದರೇ ಶಾಸಕರು ಕೈಗೆ ಸಿಗುವುದಿಲ್ಲ. ಪೋನ್ ಮಾಡಿದರೆ ಸಂಪರ್ಕಕ್ಕೆ ಸಿಗಲ್ಲ, ಕಚೇರಿಗೆ ಹಾಗೂ ಕಲಬುರಗಿ ಮನೆಗೂ ಹೋದರು ಅಲ್ಲಿಯೂ ಸಿಗುವುದಿಲ್ಲ. ಇದರಿಂದ ಬೇಸತ್ತು ಶಾಸಕ ಡಾ.ಅವಿನಾಶ್ ಜಾಧವ್ ಕಾಣೆಯಾಗಿದ್ದಾರೆ ಎಂದು ಅವರ ಭಾವಚಿತ್ರ ಇವರು ಪೋಸ್ಟರ್ ಅಂಟಿಸಿ ಆಕ್ರೋಶ ಹೋರಹಾಕುತ್ತಿದ್ದೆವೆ ಎಂದು ಹೇಳಿದ್ದಾರೆ.
ಕರ್ನಾಟಕ ಪ್ರಾಂಥ ರೈತ ಸಂಘ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ರಟಕಲ್ ಗ್ರಾಮಸ್ಥರ ಮತದಾರರಿಂದಲೇ ಗೆಲುವು ಸಾಧಿಸಿದ ಶಾಸಕ ಡಾ.ಅವಿನಾಶ್ ಜಾಧವ್ ಉಂಡ ಮನೆಗೆ ದ್ರೋಹ ಬಗೆದಂತೆ ರಟಕಲ್ ಗ್ರಾಮಕ್ಕೆ ಅನ್ಯಾಯ ಮಾಡಿದ್ದಾರೆ. ರಟಕಲ್ ಜಿಪಂ ಕ್ಷೇತ್ರ, ಎಸೆಸೆಲ್ಸಿ ಪರೀಕ್ಷಾ ಕೇಂದ್ರ, ಹೋಬಳಿ ಕೇಂದ್ರಗಳು ಕೈ ತಪ್ಪಿ ಹೋದರು ಧ್ವನಿ ಎತ್ತಲಿಲ್ಲ. ಮತಕ್ಷೇತ್ರದಲ್ಲಿ ಬೆಳೆಹಾನಿಯಿಂದ ರೈತರು ಸಮಸ್ಯೆಯಲ್ಲಿದ್ದು, ರೈತರ ಆತ್ಮಹತ್ಯೆ ನಡೆಯುತ್ತಿದ್ದರೂ ರೈತರಿಗೆ ಸಾಂತ್ವನ ಹೇಳುವ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.







