ಕಲಬುರಗಿ | ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿ ಮಾಡಿ: ನಾಗರಾಜ ಶೇಗಜಿ ಒತ್ತಾಯ

ಕಲಬುರಗಿ| ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿ ಮಾಡಿ: ನಾಗರಾಜ ಶೇಗಜಿ ಒತ್ತಾಯ
ಕಲಬುರಗಿ: ಆಳಂದ ತಾಲ್ಲೂಕಿನ ಕಬ್ಬು ಬೆಳೆಗಾರರು ಇತ್ತೀಚಿನ ಅತಿವೃಷ್ಟಿಯಿಂದ ಭಾರೀ ಸಂಕಷ್ಟದಲ್ಲಿದ್ದಾರೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸುರಿದ ಅತಿವೃಷ್ಟಿಯಿಂದ 3,588 ಹೆಕ್ಟೇರ್ ಕಬ್ಬು ಬೆಳೆ ಹಾನಿಗೊಂಡು, 10,000ಕ್ಕೂ ಹೆಚ್ಚು ಕುಟುಂಬಗಳು ಸಾಲದ ಬಲೆಗೆ ಸಿಲುಕಿಕೊಂಡಿವೆ ಎಂದು ಆಳಂದ ಮಂಡಲ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಾಗರಾಜ ಶೇಗಜಿ ಧಂಗಾಪೂರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಪರಿಸ್ಥಿತಿಯಲ್ಲಿ ಭೂಸನೂರದ ಎನ್ಎಸ್ಎಲ್ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಜೀವನಕ್ಕೆ ಆಶಾಕಿರಣವಾಗಿದೆ. ಆದರೆ ರೈತರ ಬೆವರಿನ ಬೆಲೆ ಕಾಣದೆ ಕಾರ್ಖಾನೆ ಪ್ರತಿ ಟನ್ ಕಬ್ಬಿಗೆ ನ್ಯಾಯಸಮ್ಮತ ದರ ನೀಡದಿರುವುದು ತುಂಬಾ ವಿಷಾದನೀಯ. ರೈತರ ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹3,500 ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶೇ.10.25 ಇಳುವರಿ ಆಧಾರದ ಮೇಲೆ ₹3,550 ಎಫ್ಆರ್ಪಿ ನಿಗದಿ ಮಾಡಿದೆ. ಆದರೆ ಕರ್ನಾಟಕದಲ್ಲಿ ಸರಾಸರಿ ಇಳುವರಿ ಶೇ.9.5 ಮಾತ್ರ ಇದರ ಆಧಾರದ ಮೇಲೆ ಎಫ್ಆರ್ಪಿ ಪರಿಷ್ಕರಣೆ ಮಾಡಿದಾಗ ಮಾತ್ರ ರೈತನಿಗೆ ಲಾಭ ಸಿಗುತ್ತದೆ. ಕರ್ನಾಟಕ ಕಬ್ಬು ನಿಯಂತ್ರಣ ಮಂಡಳಿಯು ಈ ಪರಿಷ್ಕರಣೆಗೆ ತಕ್ಷಣ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಈಗಾಗಲೇ ನವೆಂಬರ್ 1ರಿಂದ ಕಬ್ಬು ನುರಿಯುವ ಹಂಗಾಮು ಆರಂಭಗೊಂಡಿದ್ದು, ಸೋಲಾಪುರದ ಸಿದ್ದೇಶ್ವರ, ಲೋಕಮಂಗಲ, ಸಿದ್ದನಾಥ, ಜೈನ್ ಸಕ್ಕರೆ ಕಾರ್ಖಾನೆಗಳು ರೈತರಿಗೆ ₹3,500ಕ್ಕೂ ಹೆಚ್ಚು ದರ ನೀಡುತ್ತಿವೆ. ಸಾಗಣೆ ವೆಚ್ಚ ಪಡೆಯದೇ ನೇರವಾಗಿ ಕಬ್ಬು ಖರೀದಿಸುತ್ತಿವೆ. ಇದರಿಂದ ಅಫಜಲಪುರ ಮತ್ತು ಆಳಂದ ತಾಲ್ಲೂಕಿನ ಕಬ್ಬು ಮಹಾರಾಷ್ಟ್ರಕ್ಕೆ ಸಾಗುತ್ತಿದೆ.
ಇದರ ಪರಿಣಾಮ ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ತೆರಿಗೆ ನಷ್ಟವಾಗುತ್ತಿದೆ ಮತ್ತು ಸ್ಥಳೀಯ ಕಾರ್ಖಾನೆಗಳು ಪೈಪೋಟಿಯಲ್ಲಿ ಹಿನ್ನಡೆಯುತ್ತಿವೆ. ಆಳಂದ ತಾಲ್ಲೂಕಿನಲ್ಲಿ ಕಳೆದ ಕೆಲ ದಶಕಗಳಲ್ಲಿ ಸುರಿದ ಅತ್ಯಧಿಕ ಮಳೆಯಿಂದಾಗಿ 1,279 ಹೆಕ್ಟೇರ್ ಕಬ್ಬು ಮತ್ತು 2.9 ಲಕ್ಷ ಹೆಕ್ಟೇರ್ ಇತರ ಬೆಳೆಗಳು ಹಾನಿಗೊಂಡು ₹500 ಕೋಟಿ ರೂಪಾಯಿಗಳಷ್ಟು ಆರ್ಥಿಕ ನಷ್ಟ ಉಂಟಾಗಿದೆ. ಈ ಪರಿಸ್ಥಿತಿಯಲ್ಲಿ ರೈತನ ಕಣ್ಣೀರು ಒರೆಸುವ ಕೆಲಸ ಸರ್ಕಾರದ ಕರ್ತವ್ಯವಾಗಬೇಕಿದೆ ಎಂದು ಹೇಳಿದ್ದಾರೆ.
ಎನ್ಎಸ್ಎಲ್ ಕಾರ್ಖಾನೆಯು ತಕ್ಷಣ ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿ ಮಾಡಬೇಕು. ಶೇ.9.5 ಇಳುವರಿ ಆಧಾರದಲ್ಲಿ ಎಫ್ಆರ್ಪಿ ಪರಿಷ್ಕರಿಸಬೇಕು. ಮಳೆ ನಷ್ಟಕ್ಕೆ ರೈತರಿಗೆ ಕನಿಷ್ಠ ₹25,000 ಪ್ರತಿ ಎಕರೆ ಪರಿಹಾರ ನೀಡಬೇಕು. ಕಬ್ಬು ನಿಯಂತ್ರಣ ಮಂಡಳಿಯಲ್ಲಿನ ಹಿತಾಸಕ್ತಿಗಳನ್ನು ತೊಡೆದು, ಪಾರದರ್ಶಕ ನೀತಿ ತರಬೇಕು. ರೈತನ ಬೆವರು ಈ ದೇಶದ ನಾಡಿ ಅವನಿಗೆ ನ್ಯಾಯ ಸಿಗದೆ ಇದ್ದರೆ, ಆಳಂದದ ರೈತರ ಕಣ್ಣೀರಿನ ಶಾಪ ರಾಜ್ಯ ಸರ್ಕಾರಕ್ಕೆ ಹಾಗೂ ಪಟ್ಟಭದ್ರ ಹಿತಾಸಕ್ತಿಗಳಿಗೆ ತಟ್ಟದೇ ಇರುವದಿಲ್ಲ. ಆದ್ದರಿಂದ ರಾಜ್ಯ ಸರ್ಕಾರವು ತಕ್ಷಣ ರೈತರ ಧ್ವನಿಗೆ ಸ್ಪಂದಿಸಲಿ ಇಲ್ಲವಾದಲ್ಲಿ ಮಾಜಿ ಶಾಸಕರಾದ ಸುಭಾಷ್ ಆರ್. ಗುತ್ತೇದಾರ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಹರ್ಷಾ ಎಸ್ ಗುತ್ತೇದಾರ ಹಾಗೂ ಬಿಜೆಪಿ ಆಳಂದ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ ನೇತೃತ್ವದಲ್ಲಿ ರೈತರೊಂದಿಗೆ ಬೃಹತ್ ಹೋರಾಟ ಹಮ್ಮಿಕೊಂಡು ರೈತರ ಪಾಲಿನ ಹಕ್ಕಿಗಾಗಿ ಬೀದಿಗಿಳಿಯಲಿದ್ದೇವೆ ಎಂದು ಎಚ್ಚರಿಸಿದ್ದಾರೆ.







