ಕಲಬುರಗಿ | ಒತ್ತಡದ ಜೀವನದಿಂದ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದೆ: ಉದಯಕುಮಾರ್ ಚಿಂಚೋಳಿ

ಕಲಬುರಗಿ: ಬದಲಾದ ಜೀವನ ಶೈಲಿ, ಆಹಾರ ಪದ್ಧತಿ ಹಾಗೂ ಒತ್ತಡದ ಜೀವನದಿಂದ ಇಂದು ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ ಅಭಿಪ್ರಾಯ ಪಟ್ಟರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಂ.ಎಸ್ ಇರಾಣಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಯುವಕರು- ಮಧ್ಯ ವಯಸ್ಕರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ. ನಮ್ಮ ದೈನಂದಿನ ಒತ್ತಡದಿಂದ ಹೃದಯದ ಮೇಲೆ ಅತಿಯಾದ ಒತ್ತಡ ಹಾಕುತ್ತೇವೆ. ಇದರಿಂದ ಹೃದಯದ ಸಮಸ್ಯೆಗಳು ಆಗಾಗ ಕಾಡುತ್ತಲೇ ಇರುವುದು. ಆದ್ದರಿಂದ ಯುವಕರು ತಮ್ಮ ಜೀವನ ಶೈಲಿ ಹಾಗೂ ಆಹಾರ ಸೇವನೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದರು.
ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ.ನಮೋಶಿ ಹಾಗೂ ಉಪಾಧ್ಯಕ್ಷರಾದ ರಾಜಾ ಭೀಮಳ್ಳಿ, ಜಂಟಿ ಕಾರ್ಯದರ್ಶಿಗಳಾದ ಡಾ.ಕೈಲಾಸ ಪಾಟೀಲ್ ಹಾಗೂ ಆಸ್ಪತ್ರೆಯ ಸಂಚಾಲಕರು ಹಾಗೂ ಎಲ್ಲ ಆಡಳಿತ ಮಂಡಳಿ ಸದಸ್ಯರು ಹೃದಯದ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಯೋಜನೆ ಹಾಗೂ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲು ಯೋಚಿಸಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜಿನ 18 ಸಿಬ್ಬಂದಿ ಹಾಗೂ 47 ವಿದ್ಯಾರ್ಥಿಗಳಿಗೆ ಸಂಪೂರ್ಣ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ನೀಡಿ ತಜ್ಞ ವೈದ್ಯರಿಂದ ಸಲಹೆ ನೀಡಲಾಯಿತು .
ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ.ಗುರುಲಿಂಗಪ್ಪ ಪಾಟೀಲ್, ರೇಡಿಯೋಲಾಜಿ ಮುಖ್ಯಸ್ಥರಾದ ಡಾ. ಶಿವಾನಂದ ಮೇಳಕುಂದಿ, ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕರಾದ ಡಾ.ಆನಂದ ಗಾರಂಪಳ್ಳಿ, ಕಾಲೇಜಿನ ಪ್ರಾಚಾರ್ಯ ಶಿಲ್ಪಾ ಅಲ್ಲದ, ಮಾಧ್ಯಮ ಸಂಯೋಜಕ ಐ. ಕೆ ಪಾಟೀಲ್ ಕಾಲೇಜಿನ 12 ಅಂಶಗಳ ಸಂಯೋಜಕ ಚಂದ್ರಶೇಖರ ಪಟ್ಟಣಕರ, ಆರೋಗ್ಯ ಯೋಜನೆ ಸಂಚಾಲಕರಾದ ಡಾ.ಪಾಂಡುರಂಗ ಚಿಂಚನಸೂರ, ಆಸ್ಪತ್ರೆಯ ಆರೋಗ್ಯ ಯೋಜನೆ ಸಂಚಾಲಕಿ ಪ್ರೀಯದರ್ಶೀನಿ ಟೆಂಗಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







