ಕಲಬುರಗಿ | ನೀರನ್ನು ಕಾಯಿಸಿ, ಆರಿಸಿ, ಸೋಸಿ ಕುಡಿಯುಲು ಸೂಚನೆ

ಸಾಂದರ್ಭಿಕ ಚಿತ್ರ
ಕಲಬುರಗಿ : ನಗರಕ್ಕೆ ನೀರು ಸರಬರಾಜು ಮಾಡುವ ಜಲಮೂಲ ನದಿಗಳಾದ ಭೀಮಾ ಹಾಗೂ ಬೆಣ್ಣೆತೋರಾ ನದಿಗಳಿಂದ ನಿಂತ ನೀರು ಬರುತ್ತಿರುವ ಕಾರಣ ನೀರನ್ನು ಶುದ್ಧೀಕರಿಸಿ, ಸೂಪರ್ ಕ್ಲೋರಿನೇಶನ್ ಮಾಡಿ ನೀರು ಸರಬರಾಜು ಮಾಡಲಾಗುತ್ತಿದೆ. ಆದಾಗ್ಯೂ ಆರೋಗ್ಯದ ಹಿತದೃಷ್ಠಿಯಿಂದ ನಗರದ ಸಾರ್ವಜನಿಕರು ಕುಡಿಯುವ ನೀರನ್ನು ಕಾಯಿಸಿ, ಆರಿಸಿ ಮತ್ತು ಕುಡಿಯಬೇಕೆಂದು ಕಲಬುರಗಿ ಕೆಯುಡಬ್ಲ್ಯೂಎಸ್ಎಂಪಿ-ಕೆಯುಐಡಿಎಫ್ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ನಗರದ ಸಾರ್ವಜನಿಕರು ತಮ್ಮ ಮನೆಗಳಿಗೆ ತೆಗೆದುಕೊಂಡ ನಳದ ಜೋಡಣೆಗೆ ತೊಟ್ಟಿಯನ್ನು ಕಡ್ಡಾಯವಾಗಿ ಕೂಡಿಸಿಕೊಳ್ಳಬೇಕು. ನಳದ ತಗ್ಗುಗಳನ್ನು ಮುಚ್ಚಬೇಕು. ಏಕೆಂದರೆ ತಗ್ಗುಗಳಲ್ಲಿ ಕಲುಷಿತ ನೀರು ಸಂಗ್ರಹಣೆಯಾಗಿ ಅದೇ ನೀರು ಮತ್ತೆ ನಳದ ತೊಟ್ಟಿಯಲ್ಲಿ ಸೇರುವ ಮೂಲಕ ಮುಂದಿನ ಗ್ರಾಹಕರಿಗೆ ತಲುಪುತ್ತದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುತ್ತದೆ. ಅದೇ ರೀತಿ ನೀರಿನ ತೊಟ್ಟಿ ಅಳವಡಿಸುವುದರಿಂದ ನೀರು ಪೋಲಾಗದಂತೆ ನೋಡಿಕೊಳ್ಳಬಹುದಾಗಿದೆ.
ಗ್ರಾಹಕರು ತಮ್ಮ ನೀರಿನ ಬಿಲ್ಲಿನ ಹೆಸರು, ವಿಳಾಸ, ಮನೆ ನಂಬರ್ ಹಾಗೂ ಮೊಬೈಲ್ ಸಂಖ್ಯೆಗಳನ್ನು ನೋಂದಾಯಿಸಲು, ಬದಲಾಯಿಸಲು ಮತ್ತು ಗೃಹ, ಗೃಹೇತರ, ವಾಣಿಜ್ಯ ನಳ ಸಂಪರ್ಕಗಳ ಬದಲಾವಣೆ ಮಾಡಿಕೊಳ್ಳಲು ಕಲಬುರಗಿ ರಾಜಾಪುರ-ಕುಸನೂರ ರಸ್ತೆಯಲ್ಲಿರುವ ಯೋಜನಾ ಅನುಷ್ಠಾನ ಘಟಕ ನೆಲಮಹಡಿಯಲ್ಲಿರುವ ಜಲ ಭವನ ಕಚೇರಿಗೆ ಅಗತ್ಯ ದಾಖಲಾತಿಗಳೊಂದಿಗೆ ಭೇಟಿ ನೀಡಿ ಸರಿಪಡಿಸಿಕೊಳ್ಳಬೇಕು. ಸಾರ್ವಜನಿಕರು ಕಲಬುರಗಿ ಮಹಾನಗರ ಪಾಲಿಕೆ, ಕೆಯುಐಡಿಎಫ್ಸಿ ಹಾಗೂ ಮೆ.ಎಲ್ ಆಂಡ್ ಟಿ ಲಿಮಿಟೆಡ್ ಇವರೊಂದಿಗೆ ಸಹಕರಿಸಬೇಕು.
ನೀರಿನ ಸಮಸ್ಯೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಗ್ರಾಹಕರ ಸೇವಾ ದೂರವಾಣಿ ಸಂಖ್ಯೆ: +91 1800 425 8247 ಸಿಸಿಸಿ (ಛಿಛಿಛಿ) ಹಾಗೂ 08472-237247 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.







