ಕಲಬುರಗಿ | ಹೆಣ್ಣು ಹುಟ್ಟಿದ ತಕ್ಷಣ ನಿಷ್ಕಾಳಜಿ, ನಿರ್ಲಕ್ಷಿಸುವುದು ಸೂಕ್ತವಲ್ಲ : ವರ್ಷಾ ಆರ್.ಜಾನೆ

ಕಲಬುರಗಿ: ನಗರದ ಅನ್ನಪೂರ್ಣ ಕ್ರಾಸ್ ಬಳಿ ಇರುವ ಕಲಾ ಮಂಡಳ ಸಭಾಂಗಣದಲ್ಲಿ ಕರ್ನಾಟಕ ಮಹಿಳಾ ಪರ ಜನ ಜಾಗೃತಿ ಸಮಿತಿ ಜಿಲ್ಲಾ ಘಟಕದ ವತಿಯಿಂದ ಮಹಿಳಾ ಸಬಲೀಕರಣ ಹಾಗೂ ಬಾಲ್ಯ ವಿವಾಹ ತಡೆಗಟ್ಟುವ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಮಹಾನಗರ ಪಾಲಿಕೆ ನೂತನ ಮಹಾಪೌರರಾದ ವರ್ಷಾ ಆರ್.ಜಾನೆ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನಮ್ಮ ಭಾರತ ದೇಶದಲ್ಲಿ ಮಹಿಳೆಯರಿಗೆ ಅಗ್ರಗಣ್ಯ ಸ್ಥಾನವನ್ನು ನೀಡಲಾಗಿದೆ. ಹೆಣ್ಣು ಹುಟ್ಟಿದ ತಕ್ಷಣ ನಿಷ್ಕಾಳಜಿ ತೋರಿಸುವುದು, ನಿರ್ಲಕ್ಷಿಸುವುದು ಸೂಕ್ತವಲ್ಲ. ಹೆಣ್ಣು ಮಕ್ಕಳು ಹುಟ್ಟಿದರೆ ಸಂಭ್ರಮಿಸಬೇಕು ಎಂದು ಕರೆ ನೀಡಿದರು.
ಕರ್ನಾಟಕ ಮಹಿಳಾಪರ ಜನಜಾಗೃತಿ ಸಮಿತಿಯ ರಾಜ್ಯಧ್ಯಕ್ಷರಾದ ಜಗದೇವಿ ಹೆಗಡೆ ಅವರು ಮಾತನಾಡಿ, ಕರ್ನಾಟಕ ಮಹಿಳಾಪರ ಜನಜಾಗೃತಿ ಸಮಿತಿಯು ಮಹಿಳೆಯರ ಸಬಲೀಕರಣಕ್ಕಾಗಿ ಹಗಲಿರುಳು ಶ್ರಮಿಸುತ್ತದೆ. ಅದರ ಭಾಗವಾಗಿ ಕಲಬುರಗಿಯಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಪಾಳಾದ ಡಾ.ಗುರುಮೂರ್ತಿ ಶಿವಾಚಾರ್ಯರು ವಹಿಸಿಕೊಂಡಿದ್ದರು. ಶಿಕ್ಷಣ ತಜ್ಞರಾದ ಡಾ.ಜಯಶ್ರೀ ರೆಡ್ಡಿ, ಸಂಘಟನೆಯ ಜಿಲ್ಲಾಧ್ಯಕ್ಷೆ ನೀಲಮ್ಮ ಯಡ್ರಾಮಿ, ಜಿಲ್ಲಾ ಕಾರ್ಯದರ್ಶಿ ಯಲ್ಲಮ್ಮ ಕವಲದಾರ್ ಜೇವರ್ಗಿ, ಜಿಲ್ಲಾ ಉಪಾಧ್ಯಕ್ಷೆ ಸುಶೀಲಾ ಪೂಜಾರಿ, ಶಿಲ್ಪ ಹೆಗಡೆ, ಶಿವುಕುಮಾರ ಅಜಾದಪೂರ, ರಮಾಕಾಂತ ಪೂಜಾರಿ, ಅಬ್ಬುಲ್ ರಹಿಂ ಸೇರಿದಂತೆ ಸಮಿತಿಯ ಸದಸ್ಯರು, ಗಣ್ಯರು ಭಾಗವಹಿಸಿದ್ದರು.







