ಕಲಬುರಗಿ | ಆನೆಕಾಲು ರೋಗ ಮುಕ್ತ ಸಮಾಜಕ್ಕಾಗಿ ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿ : ಚಾಮರಾಜ ದೊಡಮನಿ

ಕಲಬುರಗಿ : ಆನೆಕಾಲು ರೋಗ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕೆಂದು ಆರೋಗ್ಯ ಇಲಾಖೆಯ ಕೀಟಶಾಸ್ತ್ರಜ್ಞರಾದ ಚಾಮರಾಜ ದೊಡಮನಿ ಅವರು ಕರೆ ನೀಡಿದರು.
ನಗರದ ಎಂಎಸ್.ಐ ಪದವಿ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್. ಘಟಕ ಆಯೋಜಿಸಿರುವ ಆನೆಕಾಲು ರೋಗ ಮುಕ್ತ ಸಮಾಜಕ್ಕಾಗಿ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆನೆಕಾಲು ರೋಗವು ಒಂದು ಭಯಾನಕ ರೋಗವಾಗಿದ್ದು, ಮನುಷ್ಯನಿಗೆ ಇಳಿಮುಖ ಅಂಗಾಂಗಗಳಲ್ಲಿ ಊತ ಕಾಣಿಸಿಕೊಂಡರೆ ಅದನ್ನು ಕಡಿಮೆ ಮಾಡಿಕೊಳ್ಳಲು ಸಾದ್ಯವಾಗುವುದಿಲ್ಲ ಹಾಗೂ ಅದಕ್ಕೆ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳದೆ ಇದ್ದರೆ ಮುಂದಿನ ಪೀಳಿಗೆಗೂ ಹರಡಿಸಿದಂತಾಗುತ್ತದೆ ಎಂದು ಎಚ್ಚರಿಸಿದರು.
ಸುಗಮವಾಗಿ ಬದುಕು ಸಾಗಿಸುವುದು ದುಸ್ತರವಾಗುತ್ತದೆ. ಹೀಗಾಗಿ ಇಲಾಖೆ ವರ್ಷಕ್ಕೆ ಒಂದು ಬಾರಿ ನೀಡುವ ಡಿಇಸಿ, ಐವರ್ ಮೆಕ್ಟಿನ್ ಮತ್ತು ಅಲ್ಬೆಂಡೆಜೋಲ್ ಮಾತ್ರೆಯನ್ನು ತೆಗೆದುಕೊಳ್ಳುವುದರ ಮೂಲಕ ರೋಗವನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಇಲಾಖೆ, ಶಾಲೆ ಕಾಲೇಜು, ಸಂಘ ಸಂಸ್ಥೆಗಳು, ಗಣನೀಯವಾದಂತಹ ಭಾಗವಹಿಸುವಿಕೆ ಹಾಗೂ ಸಹಕಾರ ನೀಡುವುವಿಕೆಯಿಂದ ಕಲಬುರಗಿ ಜಿಲ್ಲೆಯನ್ನು ಆನೆಕಾಲು ರೋಗ ಮುಕ್ತವಾಗಿಸಲು ಸಾದ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ನೀಲಕಂಠ ವಾಲಿ ಮಾತನಾಡಿ, ಪಾರಂಪಾರಿಕವಾಗಿ ದೇಶದ ಸಂಪ್ರದಾಯದ ಪ್ರಕಾರ ಮನೆಯ ಒಳಗೆ ಹಾಗೂ ಸ್ವಚ್ಛತೆಯನ್ನು ಕಾಪಾಡಿ ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿರ್ಮೂಲನೆ ಮಾಡಬಹುದು ಎಂದು ಎಂದು ಹೇಳಿದರು.
ಕಾರ್ಯಕ್ರಮವನ್ನು ಡಾ.ಪ್ರಾಣೇಶ್ ನಡೆಸಿಕೊಟ್ಟರು, ಡಾ.ಮೈತ್ರಾದೇವಿ ಹಳೆಮನಿ ಅವರು ಅತಿಥಿಗಳನ್ನು ಪರಿಚಯಿಸಿದರು. ಡಾ.ಶಂಕರೆಪ್ಪ ವಂದಿಸಿದರು. ಇಲಾಖೆಯ ಶರಣ ಬಸಪ್ಪ ಬಿರಾದಾರ, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.







