ಕಲಬುರಗಿ | ಪತ್ರಕರ್ತರು ವಸ್ತುನಿಷ್ಠ ವರದಿಗೆ ಆದ್ಯತೆ ನೀಡಬೇಕು: ಕುಲಪತಿ ಪ್ರೊ.ಬಾಬಣ್ಣ ಹೂವಿನಬಾವಿ

ಕಲಬುರಗಿ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಿರತರಾದ ಪತ್ರಕರ್ತರು ಮೇಲೆ ಹೆಚ್ಚು ಜವಾಬ್ದಾರಿಯಿದೆ. ಸಮಾಜದ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಸಂದರ್ಭದಲ್ಲಿ ವಸ್ತುನಿಷ್ಠ ವರದಿಗೆ ಆದ್ಯತೆ ನೀಡಬೇಕು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮಹತ್ವದ ಕೆಲಸವನ್ನು ಪತ್ರಿಕಾರಂಗ ನಿರ್ವಹಿಸುತ್ತಿರುವ ಕಾರಣದಿಂದ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯಲಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಾಬಣ್ಣ ಹೂವಿನಬಾವಿ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಸಂಶೋಧನಾ ವಿಭಾಗದಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಂವಹನ ಮೂಲಾಂಶಗಳು ಮತ್ತು ಸುದ್ದಿಶೈಲಿಯ ಸೂತ್ರದನ್ವಯ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಸಮಾಜದ ಸಮಸ್ಯೆಗಳನ್ನು ಗುರುತಿಸಿ ನಿವಾರಿಸುವ ದೂರದೃಷ್ಟಿ ಚಿಂತನೆ ಮತ್ತು ಘಟನೆಯ ಸತ್ಯಾಸತ್ಯೆಯ ಮೇಲೆ ಬೆಳಕು ಚೆಲ್ಲಬೇಕು ಎಂದ ಅವರು, ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ವೃತ್ತಿನಿರತ ಪತ್ರಕರ್ತರಿಗೆ ಶುಭಾಶಯಗಳನ್ನು ತಿಳಿಸಿದರು.
ಪ್ರಭಾರ ಕುಲಸಚಿವ ಪ್ರೊ. ಚಂದ್ರಕಾಂತ ಎಂ.ಯಾತನೂರ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹಾಗೂ ಎಸ್.ಎಸ್.ಡಿಜಿಟಲ್ ಕೇಬಲ್ ಟಿವಿ ಮುಖ್ಯಸ್ಥ ಭವಾನಿಸಿಂಗ್, ಮೌಲ್ಯಮಾಪನ ಕುಲಸಚಿವ ಡಾ.ಎನ್. ಜಿ. ಕಣ್ಣೂರು, ವಿತ್ತಾಧಿಕಾರಿ ಜಯಾಂಬಿಕ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜನಾಧಿಕಾರಿ ಡಾ.ಸುರೇಶ್ ಜಂಗೆ, ಡಾ.ಅಶೋಕ ಶರಣಪ್ಪಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ.ಕೆ.ಎಂ.ಕುಮಾರಸ್ವಾಮಿ, ಡಾ.ರಾಜಕುಮಾರ ದಣ್ಣೂರು, ಡಾ.ವೆಂಕಟೇಶ್ ನರಸಪ್ಪ, ಡಾ.ತೀರ್ಥಕುಮಾರ ಡಾ.ಸಾಯಿಬಣ್ಣಾ ಗುಡುಬಾ, ಡಾ.ಸರದಾರ ರಾಯಪ್ಪ, ಬಹುಮಾಧ್ಯಮ ಕೇಂದ್ರದ ಸಿಬ್ಬಂದಿ ಶರಣು ನಾವಿ, ಸಿದ್ದಾರ್ಥ ದೊಡ್ಡಮನಿ, ಶಿಕ್ಷಕೇತರ ಸಿಬ್ಬಂದಿ ಅಯ್ಯಣ್ಣ ಬಡಿಗೇರ್ ಸೇರಿದಂತೆ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಮಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







