ಕಲಬುರಗಿ | ವಿಮಾನ ನಿಲ್ದಾಣಕ್ಕೆ ಶರಣಬಸವೇಶ್ವರರ ಹೆಸರಿಡಲು ಕಾಮರೆಡ್ಡಿ ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಮುಖ ಕೇಂದ್ರ ಸ್ಥಾನವಾದ ಕಲಬುರಗಿಯಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣಕ್ಕೆ ಈ ಭಾಗದ ಶರಣ ಶ್ರೇಷ್ಠ ಮತ್ತು ದಾಸೋಹ ಹಾಗೂ ಕಾಯಕದ ಮೂಲಕ ಪವಾಡ ಮಾಡಿದ ಮಹಾಪುರುಷ ಶರಣಬಸವೇಶ್ವರರ ಹೆಸರು ಇಡಬೇಕು ಎಂದು ಜಿಲ್ಲಾ ರೆಡ್ಡಿ ಸಮಾಜದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಡಾ.ಎಸ್.ಬಿ.ಕಾಮರೆಡ್ಡಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು , 18ನೇ ಶತಮಾನದಲ್ಲಿಈ ಭಾಗದಲ್ಲಿ ದಾಸೋಹ ಪದ್ಧತಿ ಆರಂಭಿಸಿ ಅಸಂಖ್ಯಾತ ಹಸಿದವರಿಗೆ ಅನ್ನ ನೀಡಿದ್ದಾರೆ. ಅಲ್ಲದೆ, ಕಾಯಕ ಪ್ರವೃತ್ತಿಗೆ ಉತ್ತೇಜನ ನೀಡಿದ್ದಾರೆ. ಅಂತಹ ಮಹಾಪುರುಷರ ದೇವಸ್ಥಾನವೂ ಕಲಬುರಗಿಯಲ್ಲಿ ಇದೆ. ಇಲ್ಲಿಗೆ ಪ್ರತಿ ವರ್ಷ ಭಾರತದ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಇಲ್ಲಿನ ಶಿಲ್ಪಕಲೆಯೂ ಅಮೋಘವಾಗಿದೆ. ಇದೊಂದು ಕಲ್ಯಾಣ ಕರ್ನಾಟಕದ ಶ್ರದ್ಧಾಕೇಂದ್ರವಾಗಿದೆ ಎಂದು ವಿವರಿಸಿದ್ದಾರೆ.
ಶರಣಬಸವೇಶ್ವರರ ರಥೋತ್ಸವ ಬಹು ವಿಜೃಂಬಣೆಯಿಂದ ನಡೆಯುತ್ತದೆ. ಲಕ್ಷಾಂತರ ಜನ ಸೇರುತ್ತಾರೆ. ಆದ್ದರಿಂದ ಈ ಭಾಗದ ಆರಾಧ್ಯ ದೈವವೇ ಆಗಿರುವ ಶರಣಬಸವೇಶ್ವರರ ಹೆಸರನ್ನು ವಿಮಾನ ನಿಲ್ಧಾಣಕ್ಕೆ ಇಡಬೇಕು ಎಂದು ಒತ್ತಾಯಿಸಿದ್ದಾರೆ.





