ಕಲಬುರಗಿ | ಸೆ.19 ರಂದು ʼಕಾರಂತರ ರಂಗನಿನಾದʼ ಕಾರ್ಯಕ್ರಮ : ಸುಜಾತಾ ಜಂಗಮಶೆಟ್ಟಿ

ಕಲಬುರಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಂಗಾಯಣ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ “ಕಾರಂತರ ರಂಗನಿನಾದ” (ರಂಗಭೀಷ್ಮ ಬಿ.ವಿ. ಕಾರಂತರ ಜನ್ಮ ದಿನದ ನೆನಪು) ಕಾರ್ಯಕ್ರಮವನ್ನು ಸೆ.19ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ರಂಗಾಯಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಉಡಿಕೇರಿ ಉದ್ಘಾಟಿಸಲಿದ್ದಾರೆ. ಧಾರವಾಡದ ಗಾಯಕ ಹಾಗೂ ಸಂಗೀತ ಸಂಯೋಜಕರಾದ ರಾಘವ ಕಮ್ಮಾರ ಅವರು ಉಪನ್ಯಾಸ, ಸಂಗೀತ ಪ್ರಾತ್ಯಕ್ಷಿಕೆ ಹಾಗೂ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಕಲಬುರಗಿ ಕರ್ನಾಟಕ ರಂಗಾಯಣದ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಲಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಬಳ್ಳಾರಿ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ ನಾಟಕ ವಿಭಾಗದ ಪ್ರಾಧ್ಯಾಪಕ ಡಾ.ಅಪ್ಪಾಜಿ ಕೃಷ್ಣಾರೆಡ್ಡಿ ಹಾಗೂ ಕಲಬುರಗಿಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದ ಡಾ.ರಮೇಶ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಚಿನ್ಮಯಿ ಇದ್ಲಾಯಿ ಹಾಗೂ ತಂಡದಿಂದ ರಂಗಗೀತೆಗಳ ಗಾಯನ, ಕಪಿಲ್ ಚಕ್ರವರ್ತಿ ಅವರ ನಿರೂಪಣೆ, ಜೊತೆಗೆ ಬಿ.ವಿ.ಕಾರಂತರ ಬದುಕು ಮತ್ತು ಸಾಧನೆಗಳ ಕುರಿತು ಕಾಲೇಜು ಮಟ್ಟದಲ್ಲಿ ಆಯೋಜಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.







