ಕಲಬುರಗಿ| ದೌರ್ಜನ್ಯ ತಡೆಗೆ ಕಾನೂನು ಅರಿವು ಅಗತ್ಯ: ಪ್ರೇಮಾ ಮೋದಿ

ಕಲಬುರಗಿ: ಮಹಿಳಾ ದೌರ್ಜನ್ಯಗಳು ತಡೆಗಟ್ಟಲು ಗ್ರಾಮೀಣ ಭಾಗದ ಮಹಿಳೆಯರು, ಯುವಕ, ಯುವತಿಯರಿಗೆ ಮಹಿಳಾಪರ ಕಾನೂನುಗಳ ಅರಿವು ನೀಡುವುದು ಅಗತ್ಯವಾಗಿದೆ ಎಂದು ಕಲಬುರಗಿಯ ಸಖೀ ಮಹಿಳಾ ಕೇಂದ್ರದ ಕಾನೂನು ಸಲಹೆಗಾರ್ತಿ ಪ್ರೇಮಾ ಮೋದಿ ತಿಳಿಸಿದರು.
ಆಳಂದ ಪಟ್ಟಣದ ಸಂಬುದ್ಧ ಪದವಿ ಕಾಲೇಜಿನಲ್ಲಿ ಆಳಂದದ ಸಾಂತ್ವನ ಮಹಿಳಾ ಕೇಂದ್ರ, ಕಲಬುರಗಿಯ ಸಖೀ ಮಹಿಳಾ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ ಮಹಿಳಾ ದೌರ್ಜನ್ಯ ತಡೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳ ಜಾಸ್ತಿ ವರದಿಯಾಗುತ್ತಿರುವುದು ಕಳವಳಕಾರಿ, ಮಹಿಳೆಯರು ವಿಶೇಷವಾಗಿ ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ನಮ್ಮ ಕುಟುಂಬ, ಶಾಲೆ ವ್ಯವಸ್ಥೆ ಕಾಳಜಿವಹಿಸಿದರೂ ಕೂಡ ಮೋಸದಿಂದ ಅತ್ಯಾಚಾರ, ದೌರ್ಜನ್ಯ ಎಸಗಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಖೀ, ಸಾಂತ್ವನ ಹಾಗೂ ಮಹಿಳಾ ಸಹಾಯವಾಣಿಗಳ ನೆರವು ಪಡೆದುಕೊಳ್ಳಲು ತಿಳಿಸಿದರು.
ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಪಾರ್ವತಿ ಜಿಡ್ಡಿಮನಿ ಮಾತನಾಡಿ, ಆಳಂದಲ್ಲಿನ ಸಾಂತ್ವನ ಕೇಂದ್ರಕ್ಕೆ 8 ಸಾವಿರ ಮಹಿಳಾ ದೌರ್ಜನ್ಯದ ದೂರುಗಳು ಬಂದಿವೆ, ನೊಂದ ಹಾಗೂ ಅಸಹಾಯಕ ಹೆಣ್ಣುಮಕ್ಕಳಿಗೆ ಅಗತ್ಯ ನೆರವು ಈ ಕೇಂದ್ರ ನೀಡಲಿದೆ, ವಿಶೇಷವಾಗಿ ಆಸಿಡ್ ದಾಳಿಗೆ ತುತ್ತಾದ ಸಂತ್ರಸ್ತ ಮಹಿಳೆಗೆ ಮಾಸಿಕವಾಗಿ 10 ಸಾವಿರ ನೆರವು ಸಿಗಲಿದೆ ಎಂದರು.
ಈ ವೇಳೆ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ್, ಪ್ರಾಂಶುಪಾಲ ಸಂಜಯ ಪಾಟೀಲ್, ಪ್ರಾಧ್ಯಾಪಕಿ ಮಹಾದೇವಿ ಡಿ.ಪಾಟೀಲ್, ಮಹಾದೇವಿ ಮುನ್ನೋಳ್ಳಿ, ಶ್ರೀದೇವಿ ಸುತಾರ, ವಿಜಯಲಕ್ಷ್ಮಿ, ಪಟ್ನೆ, ಆಯೇಷಾ ಸಿದ್ಧಕ್ಕಿ, ಬಾಬುರಾವ ಚಿಕಣಿ, ಜಗದೀಶ ಮುಲಗೆ, ಇಕ್ಬಾಲ್ ಖಾನ್, ಭೀಮಾಶಂಕರ ಅತನೂರೆ, ಸುಕಮುನಿ ಪಾಟೀಲ್ ಉಪಸ್ಥಿತರಿದ್ದರು. ಶ್ರೀದೇವಿ ಜಕಾಪುರೆ ನಿರೂಪಿಸಿದರು. ಸುರೇಶ ಪಾಟೀಲ್ ಸ್ವಾಗತಿಸಿದರು. ಸವಿತಾ ಜೂಜಾರ ವಂದಿಸಿದರು.







