ಕಲಬುರಗಿ | ನಿಜ ಶರಣರ ಆದರ್ಶ ಪಾಲಿಸಿ : ಸಾಹಿತಿ ನಾಗಾಬಾಯಿ ಬುಳ್ಳಾ

ಕಲಬುರಗಿ : ವರ್ಷಕ್ಕೊಮ್ಮೆ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಮಾಡಿದರೆ ಸಾಲದು, ಅವರು ತಮ್ಮ ವಚನಗಳ ಮೂಲಕ ಸಾರಿದ ತತ್ವ ಆದರ್ಶಗಳನ್ನು ಅರಿತು ಪಾಲಿಸಬೇಕು ಎಂದು ಹಿರಿಯ ಸಾಹಿತಿ ನಾಗಾಬಾಯಿ ಬುಳ್ಳಾ ಹೇಳಿದರು.
ವಾಡಿ ಪಟ್ಟಣದ ಕೋಲಿ ಸಮಾಜದ ವತಿಯಿಂದ ರವಿವಾರ ಸಾಹೇಬ್ ಫಕ್ಷನ್ ಹಾಲ್ನಲ್ಲಿ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯನವರ 905 ಜಯಂತ್ಯೋತ್ಸವ ಕಾರ್ಯಕ್ರಮದ ಭಾಗವಹಿಸಿ ಮಾತನಾಡಿ, ನಿಮ್ಮನ್ನು ಯಾವ ದೇವರೂ ಉದ್ದಾರ ಮಾಡಲ್ಲ. ಹಾಗಾಗಿ, ಜಗಲಿಯ ಮೇಲಿನ ದೇವರುಗಳನ್ನು ತೆಗೆದು ಬಿಸಾಕಿ ನಿಜ ಶರಣ ಅಂಬಿಗರ ಚೌಡಯ್ಯ ಭಾವಚಿತ್ರವಿಟ್ಟು ಅವರನ್ನು ಅನುಸರಿಸಿ. ಮೂಢನಂಬಿಕೆಗಡ ಕಟ್ಟುಬಿದ್ದು ಸಾಲ-ಸೂಲ ಮಾಡಿ ದೇವರು ಮಾಡುವುದನ್ನು ನಿಲ್ಲಿಸಿ. ನಿಮ್ಮ ಮಕ್ಕಳನ್ನು ದೇವಸ್ಥಾನಕ್ಕೆ ಅಲ್ಲ ಶಾಲೆಗೆ ಕಳಿಸಿ. ಕುರಿ-ಕೋಳಿ ಕಿರು ಮೀನು ತಿಂದವರನ್ನು ಉರೊಳಗೆ ಇಟ್ಟಿದ್ದೀರಿ, ಸತ್ತ ದನ ತಿನ್ನುವವರಿಗೆ ಊರ ಹೊರಗಿಟ್ಟಿದ್ದಿರಿ ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದ ನಿಜ ಶರಣ ನಿಮಗೆ ಆದರ್ಶವಾಗಲಿ ಎಂದರು.
ಹೊನ್ನಾಳದ ವಾಸುದೇವ ಮಹಾಯೋಗಿಗಳು ಸಾನಿಧ್ಯವಹಿಸಿ ಮಾತನಾಡಿ, ಕುರಿ, ಕೋಣ ಕಡಿಯುವುದನ್ನು ಬಿಟ್ಟರೆ ಮಾತ್ರ ಕೋಲಿ ಸಮಾಜಕ್ಕೆ ಭವಿಷ್ಯವಿದೆ, ಇಲ್ಲದಿದ್ದರೆ ನಿಮ್ಮ ಬದುಕು ನಿಂತ ನೀರಾಗುವುದು ಖಚಿತ. ದುಶ್ಚಟಗಳಿಂದ ದೂರವಾಗಿ ಒಳ್ಳೆಯ ಚಿಂತನೆಗಳನ್ನು ಮಾಡಬೇಕು. ಬೆಳಿಗ್ಗೆ ಎದ್ದು ಬರೀ ಸುಳ್ಳನ್ನೇ ಬಿತ್ತರಿಸುವ ಟಿ.ವಿ ನೋಡುವುದು ಪತ್ರಿಕೆಗಳನ್ನು ಓದುವುದನ್ನು ಬಿಟ್ಟು ಶರಣರ ವಚನಗಳನ್ನು ಓದಿ ಎಂದ ಶ್ರೀಗಳು, ನಮ್ಮ ಮಠಗಳು, ಪೀಠಗಳು, ಮಠಾಧೀಶರು ಎಲ್ಲೆಲ್ಲಿದ್ದಾರೆ ಎನ್ನುವುದನ್ನು ಗುರುತಿಸಿ ಉಳಿಸಿ ಬೆಳೆಸುವ ಜವಾಬ್ದಾರಿ ನಿಮ್ಮದಾಗಲಿ ಎಂದರು.
ತೊನಸನಹಳ್ಳಿ ಅಲ್ಲಮಪ್ರಭು ಪೀಠದ ಡಾ.ಮಲ್ಲಣ್ಣಪ್ಪ ಮಹಾಸ್ವಾಮಿಗಳು, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಠೋಕರಿ ಕೋಲಿ ಸಮಾಜದ ಯಾದಗಿರಿ ಜಿಲ್ಲಾಧ್ಯಕ್ಷರಾದ ಉಮೇಶ ಮುದ್ನಾಳ, ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿದರು.
ಹಲಕರ್ಟಿಯ ಶ್ರೀ ಅಭಿನವ ಮುನೀಂದ್ರ ಶಿವಾಚಾರ್ಯರು, ಮಹಲ ರೋಜಾದ ಶ್ರೀ ಮಲ್ಲಿಕಾರ್ಜುನ ಮುತ್ಯಾ ಸಾನಿಧ್ಯ ವಹಿಸಿದ್ದರು.
ಶಹಾಬಾದ ಡಿ.ವೈ.ಎಸ್.ಪಿ ಶಂಕರಗೌಡ ಪಾಟೀಲ, ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ, ಕೋಲಿ ಸಮಾಜದ ಯುವ ಮುಖಂಡ ಶಿವಾನಂದ ಹೊನಗುಂಟ, ಪಿ.ಎಸ್.ಐಗಳಾದ ತಿರುಮಲೇಶ ಕುಂಬಾರ, ಶ್ರೀಶೈಲ ಅಂಬಾಟಿ, ಕರಣಪ್ಪ ಇಸಬಾ, ವೀರಣ್ಣ ಹತ್ತಿಕುಣಿ, ಶರಣಗೌಡ ಮಾಲಿಪಾಟಿಲ, ದೇವಿಂದ್ರ ಪಂಚಾಳ, ಸಿದ್ದಣ್ಣ ಕಲಶಟ್ಟೆ, ಸಂದೀಪ ಕಟ್ಟಿ, ಮಲ್ಲಿಕಾರ್ಜುನ ದಂಡಗುಂಡ, ಶಿವಪ್ಪ ಮುಂಡರಗಿ, ತಾಯಪ್ಪ ಪಬ್ಲಿಸಿಟಿ, ರಾಜು ಕೋಲಿ, ವಿಶ್ವರಾಧ್ಯ ತಳವಾರ, ಮಡಿವಾಳ ಬಿಸನೂರಕರ, ನಾಗರಾಜ ಮುತ್ತಗಿ, ಬಾಬು ಕುಡಿ, ಬಸವರಾಜ ಕೋಲಿ ಇತರರಿದ್ದರು.
ಶಿಕ್ಷಕ ಗುಂಡಪ್ಪ ಭಂಕೂರ ಸ್ವಾಗತಿಸಿದರು. ಡಾ.ಸಾಯಬಣ್ಣ ಗುಡಬಾ ನಿರೂಪಿಸಿ ವಂದಿಸಿದರು.







