ಕಲಬುರಗಿ| ನೋಟಿಸ್ ನೀಡದೆ ಶರಣಬಸವೇಶ್ವರ ದೇವಸ್ಥಾನದ ಎದುರಿನ ಶೆಡ್ಗಳ ತೆರವು; ಆರೋಪ

ಕಲಬುರಗಿ: ನಗರದಲ್ಲಿರುವ ಶ್ರೀ ಶರಣಬಸವೇಶ್ವರರ ಜಾತ್ರಾ ಮೈದಾನದಲ್ಲಿ ನಿರ್ಮಿಸಿದ್ದ ಶೆಡಗಳನ್ನು ಮಂಗಳವಾರ ಮಹಾನಗರ ಪಾಲಿಕೆಯಿಂದ ತೆರವುಗೊಳಿಸಲಾಗಿದ್ದು, ನೋಟಿಸ್ ನೀಡದೆ ದೇವಸ್ಥಾನದವರ ಅಣತಿಯಂತೆ ಹೆಚ್ಚುವರಿ ಜಾಗವನ್ನು ತೆರವುಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ತೆರವುಗೊಂಡಿದ್ದ ಅಂಗಡಿ ಮಾಲಕ ಪ್ರಕಾಶ್ ಬೆನಕನಳ್ಳಿ, ದೇವಸ್ಥಾನದ ಎದುರಿಗಿರುವ ಜಾಗ ಸರಕಾರಿ ಗೋಮಾಳದ ಜಾಗವಿದ್ದು, ಸುಮಾರು 70 ವರ್ಷಗಳಿಂದ ನಾವು ಅಲ್ಲಿಯೇ ಖಾನಾವಳಿ, ಮತ್ತಿತ್ತರ ಅಂಗಡಿಗಳನ್ನು ಹಾಕಿ ವ್ಯವಹಾರ ಮಾಡುತ್ತಿದ್ದೆವು. ಏಕಾಏಕಿ ನೋಟಿಸ್ ಕೊಡದೆ ಅಂಗಡಿಯ ಶೆಡ್ ಅನ್ನು ತೆರವುಗೊಳಿಸುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಕೋರ್ಟ್ ಹೇಳುವುದಕ್ಕಿಂತ ಮೊದಲೇ ನಾವು ಜಾಗವನ್ನು ಖಾಲಿ ಮಾಡಲು ನಿರ್ಧರಿಸಿದೆವು. ಆದರೆ ಪಾಲಿಕೆಯ ಅಧಿಕಾರಿಗಳು ದೇವಸ್ಥಾನದ ಮುಖ್ಯಸ್ಥರು ಹೇಳಿದಂತೆಯೇ ನಡೆದುಕೊಳ್ಳುತ್ತಿದ್ದಾರೆ. ಹೈಕೋರ್ಟ್ ಆದೇಶದಂತೆ ಲಾಲಗೇರಿ ಕ್ರಾಸ್ ನಿಂದ 72*42 ವ್ಯಾಪ್ತಿಯ ಸ್ಥಳವನ್ನು ತೆರವುಗೊಳಿಸಬೇಕಿತ್ತು. ಆದರೆ ಅದನ್ನ ಮೀರಿ 150*110 ಶೆಡ್ ನ ಹೆಚ್ಚಿನ ಜಾಗವನ್ನು ತೆರವು ಮಾಡಿದ್ದಾರೆ. ಇದು ಉಲ್ಲಂಘನೆಯಾಗುತ್ತದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಅವಿನಾಶ್ ಶಿಂಧೆ, ಹೈಕೋರ್ಟ್ ಆದೇಶ ಪ್ರಕಾರ ಬೇಲಿಫ್ ಮತ್ತು ಪೊಲೀಸ್ ಬಂದೋಬಸ್ತಿನಲ್ಲಿ ಅನಧಿಕೃತ ಕಟ್ಟಡಗಳ ತೆರವು ಮಾಡಲಾಗಿದೆ. ದೇವಸ್ಥಾನ ಹಾಗೂ ಪಾಲಿಕೆಯ ಮಧ್ಯೆ ಹೈಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಒತ್ತುವರಿ ತೆರವು ಕಾರ್ಯಾಚರಣೆ ನಿಮಿತ್ತ ಶರಣಬಸವೇಶ್ವರ ದೇವಸ್ಥಾನದ ಎದುರು ಹಾದುಹೋಗುವ ಮುಖ್ಯ ರಸ್ತೆಯ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.







