ಕಲಬುರಗಿ | ʼಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿʼ

ಕಲಬುರಗಿ : ರಂಜಾನ್ ಹಬ್ಬ ಮತ್ತು ಶ್ರೀ ಶರಣಬಸವೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರದಾದ್ಯಂತ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕೆಂದು ಪಾಲಿಕೆ ಅಧಿಕಾರಿಗಳಿಗೆ ಕರ್ನಾಟಕ ರೇಷ್ಮೆ ಅಭಿವೃದ್ದಿ ನಿಯಮಿತದ ಅಧ್ಯಕ್ಷೆ ಮತ್ತು ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ ಮತ್ತು ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಸೂಚನೆ ನೀಡಿದರು.
ಶುಕ್ರವಾರ ಇಲ್ಲಿನ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಜಂಟಿಯಾಗಿ ಕಲಬುರಗಿ ಮಹಾನಗರ ಪಾಲಿಕೆ, ಜೆಸ್ಕಾಂ ಹಾಗೂ ಕಲಬುರಗಿ ತಹಶೀಲ್ದಾರ್ ಜೊತೆಗೆ ಸಭೆ ನಡೆಸಿದ ಅವರು, ನೀರಿನ ಸಮಸ್ಯೆ ಕಂಡುಬರುವ ವಾರ್ಡ್ ಗಳ ಪಟ್ಟಿ ಈಗಾಗಲೆ ತಯಾರಿಸಿಕೊಂಡು ಅಗತ್ಯಬಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕೆಂದರು. ಈ ಬಾರಿ ಹೆಚ್ಚಿನ ಬಿಸಿಲಿನ ತಾಪಮಾನದ ಜೊತೆಗೆ ಬಿಸಿಗಾಳಿ ಇರುವ ಸಾಧ್ಯತೆ ಹೆಚ್ಚಿದ್ದು, ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಕೆ ತೆಗೆದುಕೊಳ್ಳಬೇಕು ಎಂದರು.
ಪವಿತ್ರ ರಂಜಾನ್ ಹಬ್ಬ ಮತ್ತು ಮಹಾದಾಸೊಹಿ ಶರಣಬಸವೇಶ್ವರ ಜಾತ್ರೆ ಇರುವುದರಿಂದ ನಗರದಾದ್ಯಂದ ವಿದ್ಯುತ್ ವ್ಯತ್ಯಯವಾಗದಂತೆ ಜೆಸ್ಕಾಂನವರು ನೋಡಿಕೊಳ್ಳಬೇಕು. ನಗರದೆಲ್ಲಡೆ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳಬೇಕೆಂದರು.
ಸಭೆಯಲ್ಲಿ ಕಲಬುರಗಿ ತಹಶೀಲ್ದಾರ್ ಕೆ.ಆನಂದಶೀಲ, ತಾಲೂಕು ಪಂಚಾಯತ್ ಇ.ಓ. ಸೈಯದ್ ಪಟೇಲ್, ಪಾಲಿಕೆ ಇಇಗಳಾದ ಪುರುಷೋತ್ತಮ, ದತ್ತಾತ್ರೇಯ, ವಲಯ ಆಯುಕ್ತರಾದ ರಮೇಶ ಪಟ್ಟೆದಾರ, ಪ್ರದೀಪ ಕುಮಾರ, ಮುಜಾಮಿಲ್, ಪರಿಸರ ಇಂಜಿನೀಯರ್ ಬಾಬುರಾವ, ಕೆ.ಯು.ಐ.ಡಿ.ಎಫ್.ಸಿ ಇ.ಇ. ಕೆ.ಎಸ್.ಪಾಟೀಲ, ಎ.ಇ.ಇ. ಶಿವಕುಮಾರ, ಜೆಸ್ಕಾಂ ಇ.ಇ ವೀರಭದ್ರಪ್ಪ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಜಗದೇವಪ್ಪ ಸೇರಿದಂತೆ ಅನೇಕ ಅಧಿಕಾರಿಗಳಿದ್ದರು.







