ಕಲಬುರಗಿ | ಯುವಜನರು ಸಾಮಾಜಿಕ ಬದಲಾವಣೆಯ ಶಕ್ತಿಯಾಗಬೇಕು: ನಾಗೇಂದ್ರಪ್ಪ ಅವರಾದಿ

ಕಲಬುರಗಿ: ಯುವಜನರು ಸಮಾಜದಲ್ಲಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ನಿರಂತರವಾಗಿ ಓದುವ ಹವ್ಯಾಸದೊಂದಿಗೆ ಸಂಘಟನಾ ಶಕ್ತಿಯನ್ನು ಅರಿತು ಸಾಮಾಜಿಕ ಬದಲಾವಣೆಯತ್ತ ಚಿಂತನೆ ಮಾಡಬೇಕೆಂದು ಶಿಕ್ಷಣಾಧಿಕಾರಿ ನಾಗೇಂದ್ರಪ್ಪ ಅವರಾದಿ ಕರೆ ನೀಡಿದರು.
ಕಲಬುರಗಿಯ ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಖ ಗ್ರಂಥಾಲಯದಲ್ಲಿ ಇಂದು ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (DYFI) ನ ಜಿಲ್ಲಾ 11ನೇ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ತಮ್ಮ ಸಂಘಟನಾ ಜೀವನದ ನೆನಪುಗಳನ್ನು ಹಂಚಿಕೊಂಡ ಅವರು, ನಿರುದ್ಯೋಗಿ ಯುವಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು.
“ಕರ್ನಾಟಕದಲ್ಲಿ ಈಗ 2.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ, ಆದರೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸದೆ ನಮ್ಮ ಯುವಕರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಮುಂದಿನ ಎಲ್ಲಾ ನೇಮಕಾತಿ ಅಧಿಸೂಚನೆಗಳಲ್ಲಿ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಬೇಕೆಂದು ಶ್ರೀಮಂತ ಬಿರಾದಾರ ಸರಕಾರಕ್ಕೆ ಆಗ್ರಹಿಸಿದರು.
ಸಂಘಟನೆಯ ರಾಜ್ಯ ಅಧ್ಯಕ್ಷರಾದ ಲವಿತ್ರ ವಸ್ತ್ರದ ಮಾತನಾಡಿ, ಯುವಜನರು ಸಂಘಟನೆಯ ಧ್ಯೇಯ ಉದ್ದೇಶದೊಂದಿಗೆ ದೇಶದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸಮಸ್ಯೆಗಳನ್ನು ಅರಿತು ಸಂಘಟನೆ ಕಟ್ಟಲು ಮುಂದಾಗಬೇಕೆಂದು ಎಂದರು.
ಇತ್ತೀಚಿನ ದಿನಗಳಲ್ಲಿ ಯುವಜನರು ಸಮಾಜಮುಖಿ ಕೆಲಸಗಳಿಂದ ದೂರವಾಗಿ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. DYFI ಯಂತಹ ಸಂಘಟನೆಗಳ ಮೂಲಕ ಉತ್ತಮ ಸಮಾಜ ಕಟ್ಟುವ ಕೆಲಸ ಸಾದ್ಯ ಎಂದು ಸಲ್ಮಾನ್ ಖಾನ್ ದೇವಂತಗಿ ಹೇಳಿದರು.
ಪ್ರಮೋದ್ ಪಾಂಚಾಳ್ ಸಂಚಾಲಕ, ಶಾಂತಕುಮಾರ್ ಗುಡುಬಾ ಸಹ ಸಂಚಾಲಕ, ಅತೀತ್ ಸರೋಡೆ, ಸಾನಿಯಾ, ಮಲ್ಲಿಕಾರ್ಜುನ್ ಶೃಂಗೇರಿ ಸೇರಿ, 6 ಜನ ನೂತನ ಸಮಿತಿಯ ಸದಸ್ಯರನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.
ಪ್ರಮೋದ್ ಪಾಂಚಾಲ ಕಾರ್ಯಕ್ರಮ ನಿರೂಪಿಸಿದ್ದರು. ಮಲ್ಲಿಕಾರ್ಜುನ್ ಶೃಂಗೇರಿ ಸ್ವಾಗತಿಸಿದರು. ಗಿಡ್ಡಮ್ಮ ವಂದಿಸಿದರು. ಮೇಘ ಚಿಚಕೋಟಿ ಕ್ರಾಂತಿ ಗೀತೆ ಹಾಡಿ ಸಮಾವೇಶಕ್ಕೆ ಉತ್ಸಾಹ ತುಂಬಿದ್ದರು.







