ಅನಘಾ ತಾಂಬೋಳಿಗೆ ‘ಕಾಯಕರತ್ನ’, ಡಾ. ಪುಷ್ಪ ದ್ರಾವಿಡ್ಗೆ ‘ಕಲ್ಯಾಣರತ್ನ’ ಪ್ರಶಸ್ತಿ ಘೋಷಣೆ

ಅನಘ ತಂಬೋಳಿ / ಪುಷ್ಪ ದ್ರಾವಿಡ್
ಕಲಬುರಗಿ: ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತಿನಿಂದ ಪ್ರತಿವರ್ಷ ನೀಡಲಾಗುವ ಡಾ. ರಾಜೇಂದ್ರ ಪಡತುರೇ ಪ್ರಾಯೋಜಿತ ‘ಮರಾಠಿ ಭಾಷಾ ಕಾಯಕರತ್ನ’ ಪ್ರಶಸ್ತಿಗೆ ಇಬ್ಬರು ಮಹಿಳಾ ಸಾಧಕರನ್ನು ಆಯ್ಕೆಮಾಡಲಾಗಿದೆ ಎಂದು ರಾಜ್ಯದ ಮರಾಠಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಮಹಾಮಂಡಳದ ಉಪಾಧ್ಯಕ್ಷ ಗುರುಯ್ಯ ಆರ್. ಸ್ವಾಮಿ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು ಮಹಾರಾಷ್ಟ್ರದ ಹೊಸ ಮುಂಬೈನ ಖ್ಯಾತ ಲೇಖಕಿ ಹಾಗೂ ಕವಯತ್ರಿ ಅನಘಾ ತಾಂಬೋಳಿ ಅವರಿಗೆ ಹಾಗೂ ಮರಾಠಿ ಭಾಷಾ ಕಲ್ಯಾಣರತ್ನ ಪ್ರಶಸ್ತಿಗೆ ಬೆಂಗಳೂರಿನ ಖ್ಯಾತ ಕಲಾವಿದೆ, ಶಿಲ್ಪಕಾರ, ಹಾಗೂ ವಾಸ್ತುತಜ್ಞ ಡಾ. ಪುಷ್ಪ ಡ್ರಾವಿಡ್ ಅವರು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಆಳಂದ ಪಟ್ಟಣದಲ್ಲಿ ಮಾತನಾಡಿದ ಅವರು, ಮಾರ್ಚ್ 2ರಂದು ಕಲಬುರಗಿಯ ಐಡಿಯಲ್ ಪೈನಾರ್ಟ್ ಕಾಲೇಜಿನಲ್ಲಿ ಬೆಳಗಿನ 10.30ಗಂಟೆಗೆ "ಮರಾಠಿ ಭಾಷಾ ದಿನ" ಆಚರಣೆಯಲ್ಲಿ ಈ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಾ. ದೇವಿದಾಸ್ ಫುಲಾರಿ ಅವರ "ರಾತ್ರ ಭರಾತ್ ಆಹೆ" ಎಂಬ ಮರಾಠಿ ಕಾವ್ಯ ಸಂಕಲನದ ಡಾ. ಸಂಧ್ಯಾ ರಾಜನ್ ಅವರು ಕನ್ನಡಕ್ಕೆ ಭಾಷಾಂತರಿಸಿದ ಇರಳು ಅರಳಿದೆ" ಹಾಗೂ "ಕಾಜ್ವಾಂಚಿ ದಿವೆ" ಎಂಬ ಮತ್ತೊಂದು ಮರಾಠಿ ಗ್ರಂಥದ ಬಿಡುಗಡೆ ನಡೆಯಲಿದೆ ಎಂದರು.
ಈ ಸಮಾರಂಭವನ್ನು ಆಳಂದ ಶಾಸಕ ಬಿ.ಆರ್. ಪಾಟೀಲ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಾರುತಿರಾವ್ ಮುಳೆ, ಐಡಿಯಲ್ ಸಂಸ್ಥೆಯ ಕಾರ್ಯದರ್ಶಿ ಡಾ. ವಿ.ಜಿ ಅಂದಾನಿ, ಡಾ. ದಿನಕರ ಮೋರೆ, ಡಾ. ಎನ್.ಜಿ. ಘನಾತೆ, ಕನ್ನಡ ಸಾಹಿತ್ಯಿ ಆರ್.ಕೆ. ಹುಡಗಿ, ಡಾ. ರಾಜೇಂದ್ರ ಪಡತುರೇ, ಪ್ರಾ. ದೇವಿದಾಸ್ ಫುಲಾರಿ (ನಾಂದೇಡ್), ಇಸಾಪ್ ಪ್ರಕಾಶನದ ದತ್ತಾ ಡಾಂಗೆ, ಬಿಚಿ ಪ್ರಕಾಶನದ ಉಲ್ಲಾಸ್ ರೈಸಮ್, ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೇಗುಲತಿಪ್ಪಿ ಪಾಲ್ಗೊಳ್ಳುವರು.
ಅಲ್ಲದೆ, ಬಹುಭಾಷಾ ಕವಿ ಸಮ್ಮೇಳನ ಹಮ್ಮಿಕೊಂಡಿದ್ದು, ಈ ವೇಳೆ ಮರಾಠಿ, ಕನ್ನಡ, ಉರ್ದು, ಹಿಂದಿ, ತುಳು, ತಮಿಳು ಮೊದಲಾದ ಭಾಷೆಗಳ ಕವಿಗಳು ಭಾಗವಹಿಸುವ ಬಹುಭಾಷಾ ಕವಿ ಸಮ್ಮೇಳನವನ್ನು ಸಹ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪರಿಷತ್ತಿನ ಕಾರ್ಯದರ್ಶಿ ಪ್ರಭಾಕರ್ ಸಲಗರೇ, ಪ್ರಾಧ್ಯಾಪಕ ವಿಜಯಕುಮಾರ ಚೌಧರಿ, ಮಿಲಿಂದ ಉಮಾಳಕರ, ಪ್ರಮೋದ ಶಾ, ರವೀಂದ್ರ ಪಾಟೀಲ್ ಆಳಂಗಾ ಸೇರಿದಂತೆ ಇತರರು ಉಪಸ್ಥಿತರಿದ್ದರು.