ಮನಸ್ಸಿನ ತುಡಿತ ಕಲೆಯ ಮೂಲಕ ತಿಳಿಸಬಹುದು: ಡಾ.ನಾಗೇಂದ್ರ ಮಸೂತಿ

ಕಲಬುರಗಿ: ಕಲೆ ಎಂಬುದು ಮಾನವನ ಅಭಿವ್ಯಕ್ತಿಗೆ ಇರುವ ಒಳ್ಳೆಯ ಸಾಧನ. ಕಲೆಯ ಮೂಲಕ ಮನಸ್ಸಿನ ತುಡಿತವನ್ನು ಸಮಾಜಕ್ಕೆ ತಿಳಿಸಬಹುದಾಗಿದೆ ಎಂದು ಹಿರಿಯ ಸಾಹಿತಿ ಡಾ.ನಾಗೇಂದ್ರ ಮಸೂತಿ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕ್ರಿಯಾಶೀಲ ಗೆಳೆಯರ ಬಳಗದ ವತಿಯಿಂದ ನಗರದ ಕನ್ನಡ ಭವನದ ಕಲಾ ಸೌಧದಲ್ಲಿ 47 ಜನ ಚಿತ್ರಕಲಾವಿದರಿಂದ ಎರಡು ದಿನಗಳ ಕಾಲ ಏರ್ಪಡಿಸಿರುವ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಲೆ ಮನುಷ್ಯನ ಬದುಕಿಗೆ ಪೂರಕವಾಗುವುದರ ಜೊತೆಗೆ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾಗಿದೆ. ಹಾಗಾಗಿ ಇಂಥ ಚಿತ್ರಕಲಾ ಪ್ರದರ್ಶನಗಳಿಗೆ ಇನ್ನಷ್ಟು ಅವಕಾಶಗಳು ದೊರಕಬೇಕಿದೆ. ಆಗ ಮತ್ತಷ್ಟು ಕಲಾವಿದರು ಬೆಳಕಿಗೆ ಬರಲು ಸಾಧ್ಯ. ಚಿತ್ರಕಲೆ ಮನುಷ್ಯನ ಕಲ್ಪನೆಯನ್ನು ವಿಸ್ತರಿಸುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಚಿತ್ರಕಲಾ ಪ್ರದರ್ಶನಗಳು ಈ ಸಮಾಜದ ನಿಜವಾದ ಕನ್ನಡಿಯಾಗಿವೆ. ಕಲೆ ಸಮಾಜದ ಆಲೋಚನಾ ಲಹರಿಯನ್ನು ಬದಲಾಯಿಸುವ, ಸಾಂಸ್ಕೃತಿಕ ಮೌಲ್ಯಗಳನ್ನು ಬಿಂಬಿಸುವ ಮತ್ತು ನಾಡಿನ ಜನರಲ್ಲಿ ಸೃಜನಶೀಲತೆಯನ್ನು ಜಾಗೃತಗೊಳಿಸುವ ಪ್ರಬಲ ಮಾಧ್ಯಮವಾಗಿದೆ ಎಂದರು.
ಕನ್ನಡ ಭೂಮಿ ಜಾಗೃತಿ ಸಮಿತಿ ಅಧ್ಯಕ್ಷ ಡಾ. ಲಿಂಗರಾಜ ಸಿರಗಾಪೂರ ಮಾತನಾಡಿ, ಚಿತ್ರಕಲಾವಿದರು ರಚಿಸುವ ಕಲಾಕೃತಿಗಳು ಪ್ರಕೃತಿಯ ಸೌಂದರ್ಯವನ್ನು ಜೀವಂತವಾಗಿರಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯವೂ ಮಾಡುತ್ತದೆ ಎಂದರು.
ನ್ಯಾಯವಾದಿ ಹುಲಿಗೆಪ್ಪಾ ಕನಕಗಿರಿ, ಜಿಲ್ಲಾ ಫೋಟೋಗ್ರಾರ್ಸ್ ಅಸೋಸಿಯಷನ್ ಅಧ್ಯಕ್ಷ ಬಸವರಾಜ ತೋಟದ, ಕಲಾ ಸೌಧ ಸಂಚಾಲಕ ಡಾ.ರೆಹಮಾನ್ ಪಟೇಲ್, ರವಿಕುಮಾರ ಶಹಾಪುರಕರ್ ಮಾತನಾಡಿದರು.
ಈ ವೇಳೆ ಪ್ರಮುಖರಾದ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಧರ್ಮರಾಜ ಜವಳಿ, ಗಣೇಶ ಚಿನ್ನಾಕಾರ, ರಾಜೇಂದ್ರ ಮಾಡಬೂಳ, ಮಹಮ್ಮದ್ ಅಯಾಝುದ್ದಿನ್ ಪಟೇಲ್, ಬಸವರಾಜ ಉಪ್ಪಿನ್, ರಾಜಶೇಖರ ಶಾಮಣ್ಣ, ಡಾ.ಎಸ್.ಎಂ. ನೀಲಾ, ಜ್ಯೋತಿ ಕೋಟನೂರ, ಶ್ವೇತಾ ಪಾಟೀಲ, ಅಮೃತಪ್ಪ ಅಣೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.






