ಜನರಿಗೆ ಕೊಟ್ಟಿರುವ ಭರವಸೆಗಳನ್ನು ಈಡೇರಿಸುವಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ವಿಫಲ: ದತ್ತಾತ್ರೇಯ ಪಾಟೀಲ್ ಆರೋಪ

ಕಲಬುರಗಿ : ಚುನಾವಣೆಗಿಂತ ಮೊದಲು ಜನರಿಗೆ ಕೊಟ್ಟಿರುವ ಭರವಸೆಗಳನ್ನು ಈಡೇರಿಸುವಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರಾಗಿ ಎರಡೂವರೆ ವರ್ಷಗಳು ಆಗುತ್ತಾ ಬಂದಿದೆ. ತಮ್ಮದೇ ಸರಕಾರವಿದ್ದರೂ ದಕ್ಷಿಣ ಮತಕ್ಷೇತ್ರದ ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ, ಬದಲಾಗಿ ನಮ್ಮ ಅಧಿಕಾರದಲ್ಲಿ ತಂದಿರುವ ಕಾಮಗಾರಿಗಳನ್ನೇ ತಾವು ಮಾಡುತ್ತಿರುವುದಾಗಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದರು.
ಕೆಲಸದ ಬಗ್ಗೆ ಪ್ರಶ್ನಿಸಿದರೆ ಶಾಸಕರು ವೈಯಕ್ತಿಕವಾಗಿ ತೆಗೆದುಕೊಂಡು ಏನೆನ್ನೋ ಮಾತನಾಡುತ್ತಾರೆ. ತಾವು ಹಿರಿಯ ನಾಯಕರೆಂದು ಹೇಳಿಕೊಳ್ಳುತ್ತಿರುವ ಅವರು, ಉಚ್ಛಾಟಿತ ಕಾಂಗ್ರೆಸ್ ಮುಖಂಡ ಲಿಂಗರಾಜ ಕಣ್ಣಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರು ಸಿಬಿಐಗೆ ವಹಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದ್ದರು. ಈಗ ಎರಡು ವಾರಗಳೇ ಕಳೆದಿವೆ, ಆ ಪತ್ರ ಕಳುಹಿಸಿದ್ದಾರಾ? ಆ ಪತ್ರ ಎಲ್ಲಿದೆ ನಾನಂತೂ ನೋಡೇ ಇಲ್ಲ, ಮಾಧ್ಯಮದವರಿಗೆ ಸಿಕ್ಕಿದೆಯಾ? ಎಂದು ಪ್ರಶ್ನಿಸಿದರು.
ಎಂಎಲ್ಸಿ ಆಗಿ ಅಲ್ಲಮಪ್ರಭು ಅವರು ಬಹಳಷ್ಟು ಕೆಲಸ ಮಾಡಿದ್ದರೆ. ಅವರು ಎರಡನೇ ಬಾರಿ ಎಂಎಲ್ಸಿಯಾಗಿ ಯಾಕೆ ಆಯ್ಕೆಯಾಗಿಲ್ಲ. ನನ್ನ ವಿರುದ್ಧವೂ ಸ್ಪರ್ಧಿಸಿ ಸೋತಿದ್ದರು. ಸೋಲು ಗೆಲುವು ಎಲ್ಲರಿಗೂ ಇದ್ದಿದ್ದೆ. ಆದರೆ ಶಾಸಕರು ಗೆದ್ದು 2 ವರ್ಷ ಮುಗಿದರೂ ಅಭಿವೃದ್ಧಿ ಕಾಮಗಾರಿಗಳ ಕುರಿತು ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯ ಎಂದು ಹೇಳಿದರು.







