ಎಸೆಸೆಲ್ಸಿ, ದ್ವಿತೀಯ ಪಿಯುಸಿ ತೇರ್ಗಡೆಗೆ ಶೇ.33ಕ್ಕೆ ಅಂಕ ನಿಗದಿ ಸ್ವಾಗತಾರ್ಹ : ಶಶೀಲ್ ಜಿ.ನಮೋಶಿ

ಕಲಬುರಗಿ: ರಾಜ್ಯ ಸರಕಾರ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತೇರ್ಗಡೆಯಾಗಲು ಬೇಕಿರುವ ಕನಿಷ್ಠ ಅಂಕವನ್ನು ಶೇ.33ಕ್ಕೆ ಅಂಕ ನಿಗದಿ ಮಾಡಿರುವ ಕ್ರಮ ಸ್ವಾಗತಾರ್ಹ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕರ್ನಾಟಕ ರಾಜ್ಯ ಪಠ್ಯಕ್ರಮದಲ್ಲಿ( ಎಸೆಸೆಲ್ಸಿ ಮತ್ತು ಪಿಯುಸಿ) ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಗಂಭೀರ ಅನ್ಯಾಯದ ವಿರುದ್ಧ ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳು, ಶಿಕ್ಷಣತಜ್ಞರು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಪ್ರತಿಭಟನೆ, ಸಾರ್ವಜನಿಕ ಒತ್ತಡ ಮತ್ತು ಶಿಕ್ಷಣ ಇಲಾಖೆಯ ಆಂತರಿಕ ಪರಿಶೀಲನೆಯ ನಂತರ ಸರಕಾರ ಹೊಸ ನಿಯಮ ಜಾರಿಗೆ ತಂದಿದ್ದು, ಇವು ಸಮಾನತೆ ತರಲಿವೆ ಎಂದರು.
ಶೇ.35 ಪಾಸಿಂಗ್ ವ್ಯವಸ್ಥೆ ಕಠಿಣ ಮಾನದಂಡವಾಗಿತ್ತು. ವಿದ್ಯಾರ್ಥಿಗಳು ಬಾಹ್ಯ ಪರೀಕ್ಷೆಯಲ್ಲಿ 28 ಅಂಕ ಕಡ್ಡಾಯವಾಗಿ ತೆಗೆದುಕೊಳ್ಳಬೇಕಾಗಿತ್ತು. 2-3 ಅಂಕ ಕಡಿಮೆ ಬಂದರೂ ಅನುತ್ತೀರ್ಣರಾಗಬೇಕಿತ್ತು. ಆದರೆ ಸಿಬಿಎಸ್ಇ-ಐಎಸಿಎಸ್ಇ ವಿದ್ಯಾರ್ಥಿಗಳು ರಾಜ್ಯ ಪಠ್ಯಕ್ಕಿಂತ ಕಡಿಮೆ(ಶೇ.33 ಅಂಕ) ಪಾಸ್ ಆಗುವುದು ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತಿತ್ತು. ಸಿಬಿಎಸ್ಇ ವಿದ್ಯಾರ್ಥಿ 18 ಆಂತರಿಕ ಅಂಕ, 15 ಬಾಹ್ಯ ಅಂಕ ಸೇರಿ 33 ಅಂಕ ತೆಗೆದುಕೊಂಡರೆ ಪಾಸು. ಆದರೆ, ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿ ಬಾಹ್ಯ 26 ಮತ್ತು ಆಂತರಿಕ 7 ಅಂಕಗಳೊಂದಿಗೆ ಒಟ್ಟು 33 ಅಂಕ ಗಳಿಸಿದರೂ ಅನುತ್ತೀರ್ಣ ಆಗಬೇಕಿತ್ತು. ಇದರಿಂದ 6-7 ಲಕ್ಷ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬೇಕಿತ್ತು. ಹಲವು ವಿದ್ಯಾರ್ಥಿಗಳು ಮಾನಸಿಕವಾಗಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಿತ್ತು ಎಂದು ಹೇಳಿದರು.
ಕೇರಳ ರಾಜ್ಯದಲ್ಲಿ ಶೇ.30ಅಂಕ ಪಡೆದು ಪಾಸಾಗುವ ಅವಕಾಶವಿದ್ದು, ಆ ರಾಜ್ಯದಿಂದ ವಲಸಿಗರು ನಮ್ಮ ರಾಜ್ಯಕ್ಕೆ ಬಂದು ಕೆಲಸದ ಅವಕಾಶದಲ್ಲಿ ಮೇಲುಗೈ ಸಾಧಿಸುತ್ತ ನಮ್ಮ ರಾಜ್ಯದ ಮಕ್ಕಳು ನಮ್ಮ ರಾಜ್ಯದಲ್ಲಿ ಅವರ ಕೈಕೆಳಗೆ ಕಡಿಮೆ ಸಂಬಳಕ್ಕೆ ಕೆಲಸ ಮಾಡುವಂತಾಗುತ್ತಿತ್ತು ಎಂದರು.
ಪ್ರಮಾಣಪತ್ರ ಸಲ್ಲಿಸುವುದರಿಂದ ವಿನಾಯಿತಿ ನೀಡಿ :
2025-26ನೇ ಸಾಲಿಗೆ ಖಾಸಗಿ ಅನುದಾನಿತ, ಅನುದಾನರಹಿತ ಶಾಲೆಗಳ ಮಾನ್ಯತೆ ಮತ್ತು ಮಾನ್ಯತೆ ನವೀಕರಣವನ್ನು ಆನ್ನೈಲ್ ಮೂಲಕ ಮಾಡಿಕೊಳ್ಳುವ ಬಗ್ಗೆ ಸರಕಾರ ಸುತ್ತೋಲೆ ಹೊರಡಿಸಿದೆ. ನವೀಕರಣಕ್ಕಾಗಿ ಶಾಲಾ ಆಡಳಿತ ಮಂಡಳಿಗಳು ಸಲ್ಲಿಸಬೇಕಾದ ದಾಖಲೆಗಳ ಪಟ್ಟಿಯಲ್ಲಿ ಕಟ್ಟಡ ಸುರಕ್ಷತಾ ಪ್ರಮಾಣಪತ್ರ ಹಾಗೂ ಕಟ್ಟಡ ಅಗ್ನಿ ಸುರಕ್ಷತಾ ಸಮಾಪನಾ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಅಪ್ಲೋಡ್ ಮಾಡಲು ಸೂಚಿಸಲಾಗಿದೆ ಎಂದು ಎಂದು ಎಂಎಲ್ಸಿ ಶಶೀಲ್ ನಮೋಶಿ ಹೇಳಿದರು.







