ಕಲಬುರಗಿ | ಸಂವಿಧಾನ ಪ್ರತಿಯೊಬ್ಬರಿಗೂ ಗೌರವಯುತ ಬದುಕುವ ಹಕ್ಕು ನೀಡಿದೆ : ನ್ಯಾ.ದಿನೇಶ್ ಮಹೇಶ್ವರಿ

ಕಲಬುರಗಿ : ಭಾರತೀಯ ಸಂವಿಧಾನ ಪ್ರತಿಯೊಬ್ಬರಿಗೂ ಗೌರವದಿಂದ ಬದುಕುವ ಹಕ್ಕು ನೀಡಿದೆ. ಕಾನೂನು ಪದವಿ ನಂತರ ವಿದ್ಯಾರ್ಥಿಗಳು ವೃತ್ತಿಪರತೆ ಮೈಗೂಡಿಸಿಕೊಳ್ಳಬೇಕು ಎಂದು ಭಾರತೀಯ ಕಾನೂನು ಆಯೋಗದ ಅಧ್ಯಕ್ಷರು, ಸುಪ್ರೀಂ ಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹೇಳಿದರು.
ನಗರದ ಲಾಹೋಟಿ ನಗರದ ಶೇಠ್ ಶಂಕರಲಾಲ್ ಕಾನೂನು ಕಾಲೇಜಿಗೆ 65 ವರ್ಷ ತುಂಬಿದ ಪ್ರಯುಕ್ತ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ 'ಜ್ಞಾನದ ಮುತ್ತುಗಳು' ವಿಶೇಷ ಉಪನ್ಯಾಸ ಹಾಗೂ ಕಾನೂನು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜ ನಿರೀಕ್ಷಿಸುವ ಜವಾಬ್ದಾರಿಯುತ ವಕೀಲರಾಗಿ ಹೊರಹೊಮ್ಮಬೇಕು, ಕಾನೂನು ವೃತ್ತಿಗೆ ಅವಶ್ಯಕವಾಗಿರುವ ಕೌಶಲ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾಜಕ್ಕೆ ಉತ್ತಮವಾದದ್ದನ್ನು ಮಾಡಬೇಕು ಎಂದರು. ಈ ಕಾಲೇಜಿಗೆ ಭೇಟಿ ನೀಡಿದ್ದಕ್ಕೆ ಸಂತೋಷವಾಗಿದೆ. ಈ ಕಾಲೇಜಿನ ಹಳೆಯ ವಿದ್ಯಾರ್ಥಿ ನ್ಯಾ.ಶಿವರಾಜ ಪಾಟೀಲರು ನನ್ನ ಗುರು ಮತ್ತು ಮಾರ್ಗದರ್ಶಕರಾಗಿದ್ದರು. ಈ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ, ಎಚ್ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ.ನಮೋಶಿ ಮಾತನಾಡಿ, ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಎರಡು ದಶಕ ನ್ಯಾಯಮೂರ್ತಿಗಳಾಗಿ ಕೆಲಸ ಮಾಡಿದ್ದಾರೆ. ಇಡಬ್ಲ್ಯೂಎಸ್ನಂತ ಮಹತ್ವದ ತೀರ್ವುಗಳನ್ನು ನೀಡಿದ್ದಾರೆ. ಇಡಬ್ಲ್ಯೂಎಸ್ ಸಮರ್ಪಕ ಜಾರಿಗೆ ಆಗ್ರಹಿಸಿ ನಾನೂ ವಿಧಾನ ಪರಿಷತ್ನಲ್ಲಿ ಧ್ವನಿ ಎತ್ತಿದ್ದೆ ಎಂದು ಹೇಳಿದರು.
ನ್ಯಾ.ದಿನೇಶ್ ಮಹೇಶ್ವರಿ ಅವರ ಪತ್ನಿ ಸುಮನ್ ಮಹೇಶ್ವರಿ, ಅನೀಲ್ ಕುಮಾರ್ ಎಸ್.ಮರಗೋಳ, ನಾಗಣ್ಣ ಘಂಟಿ, ಅಮಿತ್ಕುಮಾರ್ ದೇಶವಾಂಡೆ, ಪ್ರಾಧ್ಯಾಪಕ ನರೇಂದ್ರ ಬಡಶೇಷಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







