ಉತ್ತರ ಪ್ರದೇಶ: ಶಾಮ್ಲಿ ನಗರ ಪಾಲಿಕೆ ಸಭೆಯಲ್ಲಿ ಶಾಸಕ, ಅಧ್ಯಕ್ಷರ ಸಮ್ಮುಖದಲ್ಲೇ ಸದಸ್ಯರ ಗುದ್ದಾಟ
ಬಿಜೆಪಿಯನ್ನು ವ್ಯಂಗ್ಯವಾಡಿದ ಅಖಿಲೇಶ್ ಯಾದವ್
Screengrab:X
ಲಕ್ನೋ: ಉತ್ತರ ಪ್ರದೇಶದ ಶಾಮ್ಲಿ ನಗರ ಪಾಲಿಕೆ ಸಭೆಯಲ್ಲಿ ಸದಸ್ಯರು ಪರಸ್ಪರ ಗುದ್ದಾಡಿಕೊಂಡಿರುವ ವೈರಲ್ ವೀಡಿಯೋ ಕುರಿತಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಿಜೆಪಿಯನ್ನು ವ್ಯಂಗ್ಯವಾಡಿದ್ದಾರೆ.
ಶಾಮ್ಲಿ ನಗರ ಪಾಲಿಕಾ ಮಂಡಳಿ ಸಭೆಯಲ್ಲಿ ಅಧ್ಯಕ್ಷ ಅರವಿಂದ್ ಸಂಗಲ್ ಮತ್ತು ಶಾಸಕ ಪ್ರಸನ್ನ ಚೌಧುರಿ ಅವರ ಉಪಸ್ಥಿತಿಯಲ್ಲಿಯೇ ಈ ಕಾಳಗ ನಡೆದಿದೆ. ನಾಲ್ಕು ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆಗೆ ಕರೆಯಲಾಗಿದ್ದ ಸದಸ್ಯರು ಪರಸ್ಪರ ಗುದ್ದಾಡಿಕೊಂಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಒಬ್ಬರನ್ನೊಬ್ಬರು ನೂಕುತ್ತಾ, ಗುದ್ದಾಡುತ್ತಾ ಸದಸ್ಯರಲ್ಲಿ ಕೆಲವರು ತಮ್ಮನ್ನು ರಕ್ಷಿಸಿಕೊಳ್ಳಲು ಮೇಜನ್ನು ಕೂಡ ಬಳಸಿದ್ದರೆ ಇನ್ನು ಕೆಲವರು ಇನ್ನೊಬ್ಬ ಸದಸ್ಯರತ್ತ ನೆಗೆಯಲು ಕುರ್ಚಿ ಹತ್ತಿದ್ದಾರೆ.
ಈ ವೈರಲ್ ವೀಡಿಯೋ ಶೇರ್ ಮಾಡಿದ ಅಖಿಲೇಶ್ ಯಾದವ್, “ಯಾವುದೇ ಅಭಿವೃದ್ಧಿ ಕೆಲಸ ನಡೆಯದೇ ಇರುವಾಗ ಪರಿಶೀಲನೆ ಸಭೆಯಲ್ಲಿ ಇನ್ನೇನು ನಡೆಯಬಹುದು? ಆ ಕಾರಣ ಪರಸ್ಪರ ಗುದ್ದಾಡಿಕೊಂಡಿದ್ದಾರೆ. ಬಿಜೆಪಿ ಆಡಳಿತದ ಪಾಠ: ಪರಿಶೀಲನಾ ಸಭೆಗೆ ನಿಮ್ಮ ಸ್ವಂತ ಭದ್ರತೆ ಏರ್ಪಾಟಿನೊಂದಿಗೆ ಬನ್ನಿ.” ಎಂದು ಪೋಸ್ಟ್ ಮಾಡಿದ್ದಾರೆ.