ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರಿಗಿಲ್ಲ ನೆರಳು, ನೀರಿನ ವ್ಯವಸ್ಥೆ

ರಾಯಚೂರು: ಜಿಲ್ಲೆಯಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಬಿಸಿಲಿಗೆ ತತ್ತರಿಸಿದ್ದು ಕನಿಷ್ಠ ಸೌಲಭ್ಯ ಸಿಗದೆ ಪರದಾಡುವಂತಾಗಿದೆ. ತೀವ್ರ ಬಿಸಿಲಿನ ತಾಪಮಾನದಿಂದ ಬೀದಿಬದಿ ವ್ಯಾಪಾರಿಗಳು, ಆಟೋ ಚಾಲಕರು, ಕೃಷಿ, ಗಿಗ್ ಮತ್ತು ಡೆಲಿವರಿ ಕಾರ್ಮಿಕರು, ಪೌರಕಾರ್ಮಿಕರು ಸೇರಿದಂತೆ ಹೊರಾಂಗಣದಲ್ಲಿ ದುಡಿಯುವ ಸಾವಿರಾರು ಕಾರ್ಮಿಕರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಕಟ್ಟಡ ಕಾರ್ಮಿಕರಿಗಿಲ್ಲ ಕನಿಷ್ಠ ಸೌಕರ್ಯ: ದೈಹಿಕ ಶ್ರಮದ ಆಧಾರವಾದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಅಸಂಘಟಿತ ವಲಯ ಕಾರ್ಮಿಕರಿಗೆ ಬಿಸಿಲು ಹೊಟ್ಟೆಯ ಮೇಲೆ ಬರೆ ಎಳೆದಿದೆ. ಬಹುತೇಕ ಕಟ್ಟಡ ಕಾರ್ಮಿಕರು ಹೊರಾಂಗಣದಲ್ಲಿ ಕೆಲಸ ಮಾಡುತ್ತಾರೆ. ಖಾಸಗಿ ಕಟ್ಟಡ ನಿರ್ಮಾಣ ಮಾಡುವಾಗ ಕೆಲವು ಕಡೆಗಳಲ್ಲಿ ಕಾರ್ಮಿಕರಿಗೆ ಶುದ್ಧ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ವಿಶ್ರಾಂತಿಯಿಲ್ಲದೇ ಅನಾಗರಿಕರಂತೆ ದುಡಿಸಿಕೊಳ್ಳಲಾಗುತ್ತಿದೆ ಎಂದು ಕಾರ್ಮಿಕರು ಅಳಲು ತೋಡುತ್ತಾರೆ.
ರಾಯಚೂರು ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪಮಾನ ಗರಿಷ್ಠ 46 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಕಾರಣ ಸರಕಾರಿ ಕಚೇರಿ ಅವಧಿಯನ್ನು ಬೆಳಿಗ್ಗೆ 8ರಿಂದ ಮಧ್ಯಾಹ್ನ 1:30ರವರೆಗೆ ಮಾಡಲಾಗಿದೆ. ಆದರೆ ಕಾರ್ಮಿಕರಿಗೆ ಇದು ಅನ್ವಯವಿಲ್ಲ. ರಾಯಚೂರು ಹಾಗೂ ಸಿಂಧನೂರಿನ ನರೇಗಾ ಕಾರ್ಮಿಕರಿಬ್ಬರು ಬಿಸಿಲಿಗೆ ಸಾವನ್ನಪ್ಪಿದ್ದು, ಅನೇಕರು ಆತಂಕಕ್ಕೆ ಸಿಲುಕಿ ಕೆಲಸಕ್ಕೆ ಹೋಗಲು ಹಿಂಜರಿಯುತ್ತಿದ್ದಾರೆ.
ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಕುಡಿಯುವ ನೀರು, ನೆರಳು, ಮಜ್ಜಿಗೆ, ಅಸ್ವಸ್ಥರಾದ ಕಾರ್ಮಿಕರಿಗೆ ವೇತನ ಸಹಿತ ರಜೆ, ಭತ್ಯೆ ಹಾಗೂ ಪರಿಹಾರ ಘೋಷಿಸಲಾಗಿದೆ. ಬೆಂಗಳೂರಿಗೆ ಹೋಲಿಸಿದರೆ ರಾಯಚೂರು ಜಿಲ್ಲೆಯಲ್ಲಿ ಅತ್ಯಧಿಕ ತಾಪಮಾನ ದಾಖಲಾಗುತ್ತದೆ. ಆದರೂ ಇದ್ಯಾವುದೇ ಸೌಲಭ್ಯ ಇಲ್ಲಿನ ಕಾರ್ಮಿಕರಿಗೆ ಕಲ್ಪಿಸಿಲ್ಲ. ಕಾರ್ಮಿಕರು ಬೆಳಿಗ್ಗೆ 10ರಿಂದ ಸಂಜೆ 5:30 ಕೆಲವೆಡೆ 6 ಗಂಟೆಯವರೆಗೆ ಹೆಚ್ಚುವರಿ ಅವಧಿ ದುಡಿಸಿಕೊಳ್ಳುತ್ತಿದ್ದರೂ ಹೆಚ್ಚುವರಿ ಕೂಲಿ ಹಣ ನೀಡದೇ ವಂಚಿಸಲಾಗುತ್ತಿದೆ ಎಂಬ ಆರೋಪವೂ ಇದೆ.
ಕಾರ್ಮಿಕರ ಆರೋಗ್ಯ ಮತ್ತು ಜೀವ ರಕ್ಷಣೆಗಾಗಿ ಕಾರ್ಮಿಕ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ತೀವ್ರ ಬಿಸಿಲಿನಿಂದ ಹೀಟ್ಸ್ಟ್ರೋಕ್, ನಿರ್ಜಲೀಕರಣ, ತಲೆ ಸುತ್ತು, ಮೂರ್ಛೆ, ಚರ್ಮದ ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ತೊಂದರೆಗಳು ಎದುರಿಸುತ್ತಿದ್ದರೂ ಕಾರ್ಮಿಕ ಇಲಾಖೆಯಿಂದ ಕನಿಷ್ಠ ಆರೋಗ್ಯ ತಪಾಸಣೆಯೂ ಮಾಡಿಲ್ಲ ಎಂದು ಕಾರ್ಮಿಕರು ಹೇಳುತ್ತಿದ್ದಾರೆ.
ಬಿಸಿಲಿನ ಝಳಕ್ಕೆ ತತ್ತರಿಸಿದ ಕಟ್ಟಡ ಕಾರ್ಮಿಕರಿಗೆ ಬೆಳಿಗ್ಗೆ 6.30ರಿಂದ ಮಧ್ಯಾಹ್ನ 2.30ರವರೆಗೆ ಮಾತ್ರ ಕೆಲಸದ ಸಮಯ ನಿಗದಿಪಡಿಸಬೇಕು ಎಂಬ ಕಾರ್ಮಿಕರ ಕೂಗು ಇನ್ನೂ ಇಲಾಖೆಯ ಅಧಿಕಾರಿಗಳ ಕಿವಿಗೆ ಬಿದ್ದಂತಿಲ್ಲ. ಕಾರ್ಮಿಕರ ಸಮಸ್ಯೆಯ ಕುರಿತು ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ ಪೂಜಾರಿ ಅವರಿಗೆ ಅನೇಕ ಬಾರಿ ಕರೆ ಮಾಡಿದರೂ ಸರಿಯಾದ ಸ್ಪಂದನೆ ಲಭ್ಯವಾಗಿಲ್ಲ.
ಮಹಾನಗರ ಪಾಲಿಕೆಯ ಗಣತಿ ಕಾರ್ಮಿಕರಿಗೆ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಓಆರ್ಎಸ್ ನೀಡಿದ್ದು ಸುದ್ದಿಯಾಗಿತ್ತು. ಅದರಂತೆ ಕಟ್ಟಡ ಕಾರ್ಮಿಕರಿಗೆ ಓಆರ್ಎಸ್, ಮಜ್ಜಿಗೆ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ತಲೆಗೆ ಟೋಪಿ, ಕೆಲಸ ಮಾಡುವ ಸ್ಥಳಗಳಲ್ಲಿ ಛತ್ರಿ ಅಳವಡಿಸಬೇಕಿತ್ತು. ಆದರೆ, ಇದ್ಯಾವುದೇ ಕೆಲಸ ಮಾಡಿಲ್ಲ, ಮುಖ್ಯವಾಗಿ ಜಿಲ್ಲಾಧಿಕಾರಿಯೇ ನೈಸರ್ಗಿಕ ವಿಪತ್ತು ನಿರ್ವಹಣೆ ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ. ಹಿಂದಿನ ಜಿಲ್ಲಾಧಿಕಾರಿ ಕಾರ್ಮಿಕರ ಸಭೆ ನಡೆಸಿದರೂ ಕಟ್ಟಡ ನಿರ್ಮಾಣ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ ಜಿಲ್ಲೆಯ ಹಲವೆಡೆ 40 ವರ್ಷಕ್ಕೂ ಮೇಲ್ಪಟ್ಟ ಅನೇಕ ಕಟ್ಟಡ ಕಾರ್ಮಿಕರು ಕೆಲಸ ಮಾಡುತ್ತಿದ್ದು ಬಿಸಿಲಿನ ತಾಪಮಾನದಿಂದ ಅಸ್ವಸ್ಥರಾಗಿ ಕೆಲಸ ಬಿಟ್ಟು ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಅಂಥವರಿಗೆ ಕಾರ್ಮಿಕ ಇಲಾಖೆಯಿಂದ ಬೇಸಿಗೆ ಭತ್ಯೆ ಅಥವಾ ಪರಿಹಾರ ನೀಡಬೇಕು ಎಂದು ಕಾರ್ಮಿಕ ಮುಖಂಡರೊಬ್ಬರು ಮನವಿ ಮಾಡಿದ್ದಾರೆ.
ಕಟ್ಟಡ ಕಾರ್ಮಿಕರಿಗೆ ವಿವಾಹ ಪ್ರೋತ್ಸಾಹ ಧನ, ಸುರಕ್ಷಿತ ಕಿಟ್ ಕೂಡಿಸಲಾಗಿದೆ. ಬೇಸಿಗೆಯ ಹಿನ್ನೆಲೆಯಲ್ಲಿ ಕೆಲವೆಡೆ 1 ಗಂಟೆಯೊಳಗೆ ಕೆಲಸ ಬಂದ್ ಮಾಡಲಾಗಿದೆ. ಕೆಲವು ಕಟ್ಟಡ ಮಾಲಿಕರು ಸಮಯ ಬದಲಾವಣೆ ಮಾಡಿಲ್ಲ,ಮಾಲಿಕರು ಕಾರ್ಮಿಕರಿಗೆ ನೆರಳು, ಶುದ್ಧ ನೀರು, ಶೌಚಾಲಯ ವ್ಯವಸ್ಥೆ ಮಾಡಬೇಕು.
< ಶಬ್ಬೀರ್ ಪಾಶ,
ಕಟ್ಟಡ ಕಾರ್ಮಿಕರ ಸಂಘ (ಸಿಐಟಿಯು ಸಂಯೋಜಿತ)
ರಾಜ್ಯ ಕಾರ್ಯದರ್ಶಿ






