ರಾತ್ರಿಯಾದರೆ ಬಾರ್, ಬೆಳಗಾದರೆ ಕ್ರಿಕೆಟ್ ಮೈದಾನ

ಹೊಸಪೇಟೆ: ನಗರದ ಹೃದಯಭಾಗದಲ್ಲಿರುವ ಸರಕಾರಿ ಸರ್ದಾರ್ ಪಟೇಲ್ ಹೈಸ್ಕೂಲ್ ರಾತ್ರಿಯಾದರೆ ಬಾರ್, ಬೆಳಗಾದರೆ ಕ್ರಿಕೆಟ್ ಮೈದಾನದಂತೆ ಬಳಕೆಯಾಗುತ್ತಿರುವ ನಿದರ್ಶನಕ್ಕೆ ಸಾಕ್ಷಿಯಾಗುತ್ತಿದೆ.
ಸರ್ದಾರ್ ಪಟೇಲ್ ಹೈಸ್ಕೂಲ್ ಇದೀಗ ಶಿಕ್ಷಣದ ಮಂದಿರಕ್ಕಿಂತಲೂ ಅವ್ಯವಸ್ಥೆಗಳ ಕೇಂದ್ರವಾಗಿದೆ. ಇಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ತರಗತಿಗಳು ನಡೆಯುತ್ತವೆ. ಈ ಶಾಲಾ ಆವರಣದಲ್ಲೇ ಅಂಗನವಾಡಿ ಕೇಂದ್ರವೂ ಕಾರ್ಯನಿರ್ವಹಿಸುತ್ತಿದ್ದು, ನೂರಾರು ಮಕ್ಕಳು ಪ್ರತಿದಿನ ವ್ಯಾಸಂಗ ಮಾಡುತ್ತಾರೆ. ಆದರೆ ಶಾಲೆಯ ದುಸ್ಥಿತಿ ನೋಡಿ ಪಾಲಕರು, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಶಾಲೆಗಳು ಪುನಾರಂಭವಾಗಲು ಕೆಲವೇ ದಿನಗಳು ಬಾಕಿಯಿದ್ದು, ಶಾಲಾ ಆವರಣ ಮಳೆ ನೀರಿನಿಂದಾಗಿ ಕೆಸರಿನ ತಾಣವಾಗಿದೆ. ಶಾಲೆಯ ಕಟ್ಟಡ, ಕುಸಿಯುವ ಸ್ಥಿತಿಯಲ್ಲಿರುವ ಮೇಲ್ಛಾವಣಿ, ಹೊರಗೆ ಕಾಣಿಸುತ್ತಿರುವ ಕಬ್ಬಿಣದ ಸರಳುಗಳು ಮತ್ತು ಒಡೆದ ಕಿಟಕಿಗಳು ಮಕ್ಕಳ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ರಾತ್ರಿಯಾದರೆ ಕುಡುಕರ ಅಡ್ಡೆ: ರಾತ್ರಿ ಶಾಲಾ ಆವರಣ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಕೆಲವರು ಕಾಂಪೌಂಡ್ ಒಳನುಗ್ಗಿ ಮದ್ಯಪಾನ ಮಾಡಿ, ಬಾಟಲಿಗಳನ್ನು ಅಲ್ಲೇ ಎಸೆದು ಹೋಗುತ್ತಿದ್ದಾರೆ. ಬೆಳಗ್ಗೆ ಶಾಲಾ ಸಿಬ್ಬಂದಿ ಹಾಗೂ ಸ್ಥಳೀಯರು ಒಡೆದ ಬಾಟಲಿಗಳನ್ನು ತೆರವುಗೊಳಿಸುವ ಸ್ಥಿತಿ ನಿರ್ಮಾಣವಾಗಿದೆ. ಶಾಲೆ ಅನೈತಿಕ ಚಟುವಟಿಕೆಗಳ ಕೇಂದ್ರವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬೆಳಗ್ಗೆ ಕ್ರಿಕೆಟ್ ಮೈದಾನ: ರಾತ್ರಿ ಕುಡುಕರ ಅಡ್ಡೆಯಾಗುವ ಶಾಲಾ ಆವರಣ ಬೆಳಗ್ಗೆ ಸ್ಥಳೀಯ ಯುವಕರಿಂದಾಗಿ ಕ್ರಿಕೆಟ್ ಮೈದಾನವಾಗುತ್ತದೆ. ಆಟದ ಪರಿಣಾಮವಾಗಿ ಶಾಲೆಯ ಕಿಟಕಿಗಳ ಗಾಜುಗಳು ಒಡೆದು ಹೋಗಿವೆ ಎಂದು ಆರೋಪವಿದೆ.
ಶಾಲಾ ಮೈದಾನವೇ ಕೆಸರಿನ ಕೊಳ: ಮಕ್ಕಳು ಆಟವಾಡಲು ವಿಶಾಲ ಮೈದಾನ ಇದ್ದರೂ ಮಳೆ ನೀರು ಸರಿಯಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದ ಕಾರಣ ಮೈದಾನ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಇದರಿಂದ ಮಕ್ಕಳಿಗೆ ಆಟವಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳು: ಶಾಲೆಯ ಕೆಲವು ಕೊಠಡಿಗಳ ಮೇಲ್ಛಾವಣಿ ಹಾಳಾಗಿದ್ದು, ಅಲ್ಲಲ್ಲಿ ಕಬ್ಬಿಣದ ಸರಳುಗಳು ಹೊರಗೆ ಚಾಚಿಕೊಂಡಿವೆ. ಪ್ಲಾಸ್ಟರ್ ಉದುರಿ ಬಿದ್ದಿರುವುದು ಕಂಡುಬಂದಿದೆ. ಶಾಲೆ ಆರಂಭವಾದ ಬಳಿಕ ಮಕ್ಕಳು ಇದೇ ಕೊಠಡಿಗಳಲ್ಲಿ ಕುಳಿತು ಪಾಠ ಕೇಳಬೇಕಾದ ಅನಿವಾರ್ಯತೆ ಎದುರಾಗಿದೆ.
ಕ್ರಮಕ್ಕೆ ಸಾರ್ವಜನಿಕರ ಒತ್ತಾಯ: ಶಾಲೆ ಪುನರ್ ಆರಂಭಕ್ಕೂ ಮುನ್ನವೇ ಸರಕಾರ ಶಾಲಾ ಸ್ವಚ್ಛತೆ, ಮಳೆ ನೀರು ತೆರವು, ಕಟ್ಟಡ ದುರಸ್ತಿ, ಕಾಂಪೌಂಡ್ ರಿಪೇರಿ, ರಾತ್ರಿ ಪೊಲೀಸ್ ಗಸ್ತು, ಸಿಸಿಟಿವಿ ಅಳವಡಿಕೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಸರಕಾರಿ ಸರ್ದಾರ್ ಪಟೇಲ್ ಶಾಲೆ ದುಸ್ಥಿತಿಗೆ ತಲುಪಿರುವುದು ನೋವಿನ ಸಂಗತಿ. ಈ ಶಾಲೆಯ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಯ ಮೂಲಸೌಕರ್ಯಗಳ ಕೊರತೆಯನ್ನು ಸರಕಾರ ನೀಗಿಸಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡಬೇಕು.
-ಗುಜ್ಜಲ್ ಗಣೇಶ್,
ಕರುನಾಡು ಕಲಿಗಳ ಕ್ರಿಯಾಶೀಲ ಸಮಿತಿ ಉಪಾಧ್ಯಕ್ಷ
ಇತ್ತೀಚೆಗಷ್ಟೇ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಸರಕಾರಿ ಸರ್ದಾರ್ ಪಟೇಲ್ ಶಾಲೆಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಶಾಲೆಯ ಮುಖ್ಯ ಶಿಕ್ಷಕರೊಂದಿಗೆ ಚರ್ಚೆ ನಡೆಸಿ, ಶಾಲಾ ಆವರಣದ ಸ್ವಚ್ಛತೆ, ಮೂಲಸೌಕರ್ಯಗಳ ದುರಸ್ತಿ ಹಾಗೂ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಲಾಗುವುದು.
-ಉಮಾಪತಿ,
ಕ್ಷೇತ್ರ ಶಿಕ್ಷಣಾಧಿಕಾರಿ ಹೊಸಪೇಟೆ






