ಆಲಮಟ್ಟಿ: ಅರಣ್ಯ ವಿಭಾಗದಿಂದ 2.85 ಲಕ್ಷ ಸಸಿಗಳ ವಿತರಣೆ

ಆಲಮಟ್ಟಿ: ಪರಿಸರ ಸಂರಕ್ಷಣೆ ಹಾಗೂ ರೈತರ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೆಬಿಜೆಎನ್ಎಲ್ ಅರಣ್ಯ ವಿಭಾಗವು ಈ ವರ್ಷ ಸುಮಾರು 2.85ಲಕ್ಷ ವಿವಿಧ ಜಾತಿಯ ಸಸಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲು ಸಿದ್ಧತೆ ನಡೆಸಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಮೂರು ವರ್ಷಗಳ ಬಳಿಕ ಸಸಿ ಉತ್ಪಾದನೆ ಪುನರಾರಂಭವಾಗಿದ್ದು, ರೈತರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದ್ದಾರೆ.
ಈ ಬಾರಿ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಉತ್ತಮ ಗುಣಮಟ್ಟದ ಸಸಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಿದ್ಧಪಡಿಸಲಾಗಿದ್ದು, ರೈತರು, ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೆ ವಿತರಣೆ ಮಾಡಲಾಗುತ್ತದೆ. ತೇಗ, ಹೊನ್ನೆ, ಬೇವು, ನೇರಳೆ, ಮಾವು, ಸೀತಾಫಲ, ನೆಲ್ಲಿಕಾಯಿ ಸೇರಿದಂತೆ ನೆರಳು, ಹಣ್ಣು ಹಾಗೂ ಮೌಲ್ಯಯುತ ಮರಗಳ ಸಸಿಗಳನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಅರಣ್ಯ ಪ್ರದೇಶಗಳ ವಿಸ್ತರಣೆ, ಭೂಮಿಯ ಫಲವತ್ತತೆ ಹೆಚ್ಚಳ, ಮಳೆ ಪ್ರಮಾಣ ಸುಧಾರಣೆ ಹಾಗೂ ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಸಸಿ ನೆಡುವ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸುತ್ತದೆ. ಕೃಷಿ ಜಮೀನಿನ ಬದುವಿನಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ಸಸಿ ನೆಡುವುದರಿಂದ ರೈತರು ಭವಿಷ್ಯದಲ್ಲಿ ಹೆಚ್ಚುವರಿ ಆದಾಯ ಗಳಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರಕಾರದ ಹಸಿರು ಕರ್ನಾಟಕ ಅಭಿಯಾನಕ್ಕೆ ಪೂರಕವಾಗಿ ಈ ಯೋಜನೆ ಜಾರಿಯಾಗುತ್ತಿದ್ದು, ಗ್ರಾಮ ಪಂಚಾಯತ್ಗಳು, ಶಾಲಾ-ಕಾಲೇಜುಗಳು ಹಾಗೂ ಸಾರ್ವ
ಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಸಿ ನೆಡುವುದು ಅತ್ಯುತ್ತಮ ಸಮಯವಾಗಿದ್ದು, ಆಸಕ್ತರು ಸಮೀಪದ ಅರಣ್ಯ ಕಚೇರಿ ಅಥವಾ ನರ್ಸರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಅನುದಾನದ ಕೊರತೆಯಿಂದ ಸಸಿ ಉತ್ಪಾದನೆ ಸ್ಥಗಿತಗೊಂಡಿತ್ತು. ಇದೀಗ 2025-26ನೇ ಸಾಲಿನಲ್ಲಿ ಅನುದಾನ ಬಿಡುಗಡೆಯಾದ ಹಿನ್ನೆಲೆ
ಎಎಲ್ಬಿಸಿ, ಎಂಡಿಎಫ್ ಹಾಗೂ ಡ್ಯಾಂಸೈಟ್ ನರ್ಸರಿಗಳಲ್ಲಿ ಒಟ್ಟು 2.80 ಲಕ್ಷಕ್ಕೂ ಅಧಿಕ ಸಸಿಗಳನ್ನು ಬೆಳೆಸಲಾಗಿದೆ. ಫಲಧಾರಕ, ಅರಣ್ಯ, ವಾಣಿಜ್ಯ, ಔಷಧೀಯ ಹಾಗೂ ಅಲಂಕಾರಿಕ ಸೇರಿದಂತೆ ವಿವಿಧ ಜಾತಿಯ ಸಸಿಗಳು ಲಭ್ಯವಾಗಲಿವೆ.
ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರೈತರು ಹಾಗೂ ಪರಿಸರಾಸಕ್ತರು ಸಸಿ ವಿತರಣೆಯ ದಿನಾಂಕ ಘೋಷಣೆಗೆ ಕಾಯುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಸಸಿಗಳ ಲಭ್ಯತೆ ಇರದ ಕಾರಣ ಈ ಬಾರಿ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಈ ಬಾರಿ ದೊರೆತ ಅನುದಾನದಡಿ ಒಟ್ಟು 2.80 ಲಕ್ಷ ಸಸಿಗಳನ್ನು ತಯಾರಿಸಲಾಗಿದೆ. ಸಸಿಗಳ ದರ ಹಾಗೂ ವಿತರಣಾ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಶೀಘ್ರದಲ್ಲೇ ಮಾಹಿತಿ ಪ್ರಕಟಿಸಲಾಗುವುದು.
-ಮಹೇಶ ಪಾಟೀಲ,
ಆರ್ಎಫ್ಒ ಅರಣ್ಯ ವಿಭಾಗ, ಕೆಬಿಜೆಎನ್ಎಲ್ ಆಲಮಟ್ಟಿ ಕೆಬಿಜೆಎನ್ಎಲ್ ಆಲಮಟ್ಟಿ






