ಕೊಟ್ಟೂರು: ಸಕಾಲಕ್ಕೆ ಮಳೆಯಿಂದ ಗರಿಗೆದರಿದ ಕೃಷಿ ಚಟುವಟಿಕೆಗಳು

ತಾಲೂಕಿನಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಸಮರ್ಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆ ರೈತರಲ್ಲಿ ಮಂದಹಾಸ ಮೂಡಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯ ಅನುಕೂಲದಿಂದ ಕೃಷಿ ಚಟುವಟಿಕೆಗಳು ತಾಲೂಕಾದ್ಯಂತ ಚುರುಕುಗೊಂಡಿದೆ.
ತಾಲೂಕಿನಲ್ಲಿ ಒಟ್ಟು 38,523 ಹೆಕ್ಟೇರ್ ಕೃಷಿ ಭೂಮಿಯಿದ್ದು, ಇದರಲ್ಲಿ 32,800 ಹೆಕ್ಟೇರ್ ಪ್ರದೇಶದಲ್ಲಿ ಈ ವರ್ಷದ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ.
ಪ್ರಮುಖವಾಗಿ ಜೋಳ 570 ಹೆಕ್ಟೇರ್, ಮೆಕ್ಕೆಜೋಳ 28,298 ಹೆಕ್ಟೇರ್, ಸೂರ್ಯಕಾಂತಿ 550 ಹೆಕ್ಟೇರ್, ಶೇಂಗಾ 1,680 ಹೆಕ್ಟೇರ್, ರಾಗಿ 2,345 ಹೆಕ್ಟೇರ್, ನವಣೆ 122 ಹೆಕ್ಟೇರ್ ಹಾಗೂ ಹತ್ತಿ 30 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಶ್ಯಾಮಸುಂದರ್ ತಿಳಿಸಿದ್ದಾರೆ.
ಈ ವರ್ಷ ಜೋಳ ಬಿತ್ತನೆಗೆ ಅನುಕೂಲಕರ ಮಳೆಯಾಗಿರುವುದರಿಂದ ಬಹುತೇಕ ರೈತರು ಈಗಾಗಲೇ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ ವಾರದಿಂದ ಸುರಿಯುತ್ತಿರುವ ಮಳೆಯಿಂದ ಕೆರೆಗಳು, ಹಳ್ಳಗಳು ಮತ್ತು ಗೋಕುಂಟೆಗಳು ನೀರಿನಿಂದ ತುಂಬುತ್ತಿದ್ದು, ಭೂಗರ್ಭ ಜಲಮಟ್ಟವೂ ಹೆಚ್ಚಳ ಕಂಡಿದೆ.
ರೈತರಿಗೆ ಅಗತ್ಯವಾದ ಬೀಜ ಮತ್ತು ರಸಗೊಬ್ಬರಗಳು ಕೃಷಿ ಕೇಂದ್ರಗಳಲ್ಲಿ ಲಭ್ಯವಿದ್ದು, ವಿತರಣೆ ಕಾರ್ಯವನ್ನು ಸುಗಮವಾಗಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸಗೊಬ್ಬರ ಅಂಗಡಿಗಳ ಮಾಲಕರಿಗೂ ಕೃತಕ ಅಭಾವ ಸೃಷ್ಟಿಸದಂತೆ ಹಾಗೂ ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ಸೂಚನೆ ನೀಡಲಾಗಿದೆ.
ಈ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯ ಲಕ್ಷಣಗಳು ಕಂಡುಬರುತ್ತಿರುವುದರಿಂದ ಈ ವರ್ಷ ಉತ್ತಮ ಬೆಳೆ ಲಭಿಸುವ ನಿರೀಕ್ಷೆ ಇದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
ಈ ಭಾರೀ ಉತ್ತಮ ಮಳೆಯಾಗುವಲಕ್ಷಣ ಕಾಣುತ್ತಿರುವುದರಿಂದ ಈವರ್ಷ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದೇವೆ.
-ಪಿ.ಎಂ.ವೀರಭದ್ರಯ್ಯ
ಹಾರಕಾನಾಳು ಗ್ರಾಮದ ರೈತ ಹಾರಕಾನಾಳು ಗ್ರಾಮದ ರೈತ






