ದೇವೇಗೌಡರಿಗೆ ರಾಜ್ಯಸಭಾ ಸ್ಥಾನ ತಪ್ಪಿಸಿದ್ದು ಯಾರು?

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತೊಮ್ಮೆ ರಾಜ್ಯಸಭೆಗೆ ಹೋಗಬೇಕು ಎಂದು ತುಂಬಾ ಪ್ರಯತ್ನ ಪಟ್ಟಿದ್ದರು. ಎಚ್.ಡಿ. ಕುಮಾರಸ್ವಾಮಿ ಕೂಡ ಸಾಥ್ ಕೊಟ್ಟಿದ್ದರು. ಈ ಅಪ್ಪ-ಮಗನಿಗೆ ಅವಕಾಶ ತಪ್ಪಿಸಬೇಕೆಂದು ಬಿಜೆಪಿಯ ಅಪ್ಪ-ಮಗ ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ ಇನ್ನೂ ಜಾಸ್ತಿ ಶ್ರಮಪಟ್ಟಿದ್ದರು. ಅದಕ್ಕಾಗಿ ಡಿ.ವಿ. ಸದಾನಂದಗೌಡ ಮತ್ತು ಸುಮಲತಾ ಹೆಸರನ್ನು ತೇಲಿಬಿಟ್ಟಿದ್ದರು. ಆದರೆ ಅಂತಿಮವಾಗಿ ಗೆದ್ದದ್ದು ಮೊದಲ ಅಪ್ಪ-ಮಗನ ಜೋಡಿಯೂ ಅಲ್ಲ, ಎರಡನೇ ಅಪ್ಪ-ಮಗನ ಜೋಡಿಯೂ ಅಲ್ಲ. ಅದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವುದೇ ಕ್ಷಣದಲ್ಲಿ ಮೈತ್ರಿಯನ್ನು ಬದಲಿಸಬಹುದು, ಅವರಿಗೆ ಅಧಿಕಾರವೇ ಮುಖ್ಯ, ಅವರು ನಂಬಿಕೆಗೆ ಅರ್ಹರಲ್ಲ ಎನ್ನುವುದು ಯಡಿಯೂರಪ್ಪ ಮತ್ತು ವಿಜಯೇಂದ್ರ ಅಭಿಪ್ರಾಯ. ಹಾಗಾಗಿ ಅವರಿಗೆ ಮೊದಲಿಂದಲೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗುವುದು ಇಷ್ಟ ಇರಲಿಲ್ಲ. ಅದರಿಂದಾಗಿ ವಿರೋಧ ಮಾಡುತ್ತಿದ್ದರು. ದೇವೇಗೌಡ ರಾಜ್ಯಸಭೆಗೆ ಹೋದರೆ ಪಕ್ಷದ ಒಳಗೆ ‘ನಮ್ಮದೇನು ನಡೆಯುವುದಿಲ್ಲ’ ಎನ್ನುವ ಸಂದೇಶ ರವಾನೆಯಾಗುತ್ತದೆ ಎನ್ನುವ ಕಾರಣಕ್ಕೆ ರಾಜ್ಯಸಭೆ ವಿಷಯದಲ್ಲಿ ಗಂಭೀರವಾಗಿ ವಿರೋಧಿಸಿದ್ದರು.
ಯಡಿಯೂರಪ್ಪ ಮತ್ತು ವಿಜಯೇಂದ್ರ ಜೋಡಿ ತೀವ್ರವಾಗಿ ವಿರೋಧಿಸುತ್ತಿದೆ ಎಂದು ಗೊತ್ತಾದದ್ದೇ ತಡ ದೇವೇಗೌಡ ಮೊದಲಿಗಿಂತ ಹೆಚ್ಚು ಸಕ್ರಿಯರಾದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಿರ್ಮಿಸಲಾಗಿದ್ದ ‘ಶ್ರೀ ಗುರು ಭೈರವೈಕ್ಯ ಮಂದಿರ’ದ ಉದ್ಘಾಟನೆಗೆ ಮೋದಿಯನ್ನು ಕರೆತಂದರು. ಮಠ ಮತ್ತು ಸಮುದಾಯದ ಮೂಲಕ ಮೋದಿಯವರ ಮೇಲೆ ಪರೋಕ್ಷವಾಗಿ ಒತ್ತಡ ಹೇರುವುದು ದೇವೇಗೌಡರ ತಂತ್ರಗಾರಿಕೆಯಾಗಿತ್ತು.
ಹೀಗೆ ತೆರೆಯ ಹಿಂದೆ ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ವಿಜಯೇಂದ್ರ ಇಡುತ್ತಿದ್ದ ಒಂದೊಂದು ನಡೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಪ್ರಹ್ಲಾದ್ ಜೋಶಿ ಸಂದರ್ಭ ನೋಡಿ ತಮ್ಮ ಆಟವನ್ನು ಆಡಿದ್ದಾರೆ. ಒಂದೇ ಕಲ್ಲಿನಲ್ಲಿ ಎರಡೂ ಕುಟುಂಬಕ್ಕೆ ಗುರಿಯಿಟ್ಟಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಕುಮಾರಸ್ವಾಮಿ ಬಗೆಗೆ ಇದ್ದ ಹಳೆಯ ಸೇಡನ್ನು ಅಥವಾ ಸಿಟ್ಟನ್ನು ತೀರಿಸಿಕೊಂಡಿದ್ದಾರೆ.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಇನ್ನೇನು ಪ್ರಹ್ಲಾದ್ ಜೋಶಿ ಮುಖ್ಯಮಂತ್ರಿ ಆಗಿಯೇ ಬಿಡುತ್ತಾರೆ ಎನ್ನುವ ರೀತಿಯಲ್ಲಿ ಚರ್ಚೆಯಾಗುತ್ತಿತ್ತು. ಅದಕ್ಕೆ ಪೂರಕವಾಗಿ ಹಿಂದಿನ ಕೇಂದ್ರ ಸರಕಾರದಲ್ಲಿ ಪ್ರಹ್ಲಾದ್ ಜೋಶಿ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದುದರಿಂದ ನಿರಂತರವಾಗಿ ಮೋದಿ ಮತ್ತು ಅಮಿತ್ ಶಾ ಜೊತೆ ಸಂಪರ್ಕದಲ್ಲಿದ್ದರು. ಆದ್ದರಿಂದ ಪ್ರಹ್ಲಾದ್ ಜೋಶಿ ಅವರನ್ನು ಮೋದಿ ಮತ್ತು ಅಮಿತ್ ಶಾ ಜೋಡಿಯ ನೀಲಿಗಣ್ಣಿನ ಹುಡುಗ ಎಂದು ಹೇಳಲಾಗುತ್ತಿತ್ತು.
ಇನ್ನೊಂದೆಡೆ ಆಗ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿರಲಿಲ್ಲ. ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಕೈಜೋಡಿಸಬಹುದು ಎಂಬ ಸುಳಿವು ಕೂಡ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಮುಸ್ಲಿಮ್ ಮತಗಳ ಕಾರಣಕ್ಕೆ ಜೆಡಿಎಸ್ ತಾನು ಬಿಜೆಪಿ ಸಹವಾಸ ಮಾಡುವುದಿಲ್ಲ ಎಂದು ಬಿಂಬಿಸಿಕೊಳ್ಳುವ ಉಮೇದಿನಲ್ಲಿತ್ತು. ಕುಮಾರಸ್ವಾಮಿ ಬಿಜೆಪಿ ಬಗ್ಗೆ ಕಟುವಾದ ಮಾತುಗಳನ್ನಾಡುತ್ತಿದ್ದರು. ‘‘ಮರಾಠಿ ಪೇಶ್ವೆಗಳ ಡಿಎನ್ಎ ಇರುವ ವ್ಯಕ್ತಿಯನ್ನು ಕರ್ನಾಟಕಕ್ಕೆ ಮುಖ್ಯಮಂತ್ರಿ ಮಾಡಲು ಬಿಜೆಪಿ ಮತ್ತು ಆರೆಸ್ಸೆಸ್ ಹೊರಟಿವೆ’’ ಎಂದು ಟೀಕಿಸಿದ್ದರು. ಬಳಿಕ ಲಿಂಗಾಯತ ನಾಯಕನನ್ನು ಕೆಳಗಿಳಿಸಿ ಬ್ರಾಹ್ಮಣರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟುವ ಪ್ರಯತ್ನವಾಗುತ್ತಿರಬಹುದು ಎನ್ನುವ ಚರ್ಚೆ ಶುರುವಾಗಿತ್ತು. ಇದರಿಂದ ಒಂದು ಹಂತದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಎಂದುಕೊಂಡಿದ್ದ ಬಿಜೆಪಿ ಹೈಕಮಾಂಡ್ ತನ್ನ ನಿರ್ಧಾರವನ್ನು ಬದಲಿಸಿತ್ತು. ಪ್ರಹ್ಲಾದ್ ಜೋಶಿ ಮುಖ್ಯಮಂತ್ರಿಯಾಗಲು ಇದ್ದ ಸಣ್ಣ ಅವಕಾಶ ಕೂಡ ಕೈತಪ್ಪಿತ್ತು.
ಈ ಹಿನ್ನೆಲೆಯಲ್ಲಿ ಎಚ್.ಡಿ. ದೇವೇಗೌಡ ರಾಜ್ಯಸಭೆಗೆ ಹೋಗುವುದನ್ನು ತಪ್ಪಿಸುವ ಮೂಲಕ ಪ್ರಹ್ಲಾದ್ ಜೋಶಿ ಹಳೆಯ ಸೇಡನ್ನು ತೀರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಹುಬ್ಬಳ್ಳಿ ಮೂಲದ ತಮ್ಮ ಆಪ್ತ ಪ್ರೊ. ಎಂ. ನಾಗರಾಜ್ ಅವರನ್ನು ರಾಜ್ಯಸಭೆಗೆ ಕಳುಹಿಸುವ ಮೂಲಕ ಯಡಿಯೂರಪ್ಪ ಮತ್ತು ವಿಜಯೇಂದ್ರಗೆ ‘ನನ್ನ ಮುಂದೆ ನಿಮ್ಮ ಆಟ ನಡೆಯುವುದಿಲ್ಲ’ ಎನ್ನುವ ಸಂದೇಶವನ್ನು ಕೊಟ್ಟಿದ್ದಾರೆ.
ದೇವೇಗೌಡ ಬದಲು ಡಿ.ವಿ. ಸದಾನಂದಗೌಡರನ್ನು ರಾಜ್ಯಸಭೆಗೆ ಕಳುಹಿಸಬೇಕೆಂದು ಯಡಿಯೂರಪ್ಪ ಮತ್ತು ವಿಜಯೇಂದ್ರ ತೀವ್ರ ಪ್ರಯತ್ನ ನಡೆಸಿದ್ದರು. ದೇವೇಗೌಡರಿಗೆ ತಪ್ಪಿಸಿದ ಅಪಕೀರ್ತಿಯನ್ನು ಒಕ್ಕಲಿಗ ಸಮುದಾಯದ ಸದಾನಂದಗೌಡರಿಗೆ ಅವಕಾಶ ಕಲ್ಪಿಸುವ ಮೂಲಕ ತೊಳೆದುಕೊಳ್ಳಬಹುದು ಎನ್ನುವ ಲೆಕ್ಕಾಚಾರ ಹಾಕಿದ್ದರು. ಆದರೆ ಸಂದರ್ಭ ನೋಡಿ ದಾಳ ಉರುಳಿಸಿದ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ನಲ್ಲಿ ಹಿಂದುಳಿದ ವರ್ಗದ ಅಗ್ರ ನಾಯಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿರುವುದರಿಂದ ಕುರುಬ ಸಮುದಾಯದ ಪ್ರೊ. ಎಂ. ನಾಗರಾಜ್ ಹೆಸರು ಹೇಳುವ ಮೂಲಕ ಆಟವನ್ನು ಗೆದ್ದುಕೊಂಡಿದ್ದಾರೆ. ಒಟ್ಟಿನಲ್ಲಿ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭವಾಗಿದೆ.
ಒಬಿಸಿ ರಾಜಕಾರಣ ಶುರು!
ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಆಯ್ಕೆ ಮಾಡಲು ಇದೇ ಜೂನ್ 18ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಸುಲಭವಾಗಿ ನಾಲ್ಕು ಸ್ಥಾನಗಳನ್ನು ಗೆಲ್ಲಬಹುದು. ಆ ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್ ಹಿಂದುಳಿದ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟಿದೆ. ಆ ಪೈಕಿ ಒಂದನ್ನು ಹಿಂದುಳಿದವರಲ್ಲೇ ಮುಂದುವರಿದಿರುವ ಮತ್ತು ಅತಿ ಹೆಚ್ಚು ಸಂಖ್ಯೆಯಲ್ಲಿರುವ ಕುರುಬ (ಮಳವಳ್ಳಿ ಶಿವಣ್ಣ) ಸಮುದಾಯಕ್ಕೆ ನೀಡಿದೆ. ಇನ್ನೊಂದನ್ನು ಹಿಂದುಳಿದವರ ಪೈಕಿ ಎರಡನೇ ಅತಿ ದೊಡ್ಡ ಜಾತಿಯಾದ ಈಡಿಗ/ಬಿಲ್ಲವ (ಬಿ.ಕೆ. ಹರಿಪ್ರಸಾದ್) ಸಮುದಾಯಕ್ಕೆ ನೀಡಿದೆ. ಮತ್ತೊಂದನ್ನು ಹಿಂದುಳಿದವರ ಪೈಕಿ ತುಂಬಾ ದೊಡ್ಡದೂ ಅಲ್ಲ, ತುಂಬಾ ಚಿಕ್ಕದೂ ಅಲ್ಲ ಎನ್ನುವಂತಿರುವ ಕೋಲಿ (ತಿಪ್ಪಣ್ಣ ಕಮಕನೂರು) ಸಮುದಾಯಕ್ಕೆ ಕೊಟ್ಟಿದೆ. ಮಗದೊಂದನ್ನು ತೀರಾ ಹಿಂದುಳಿದಿರುವ, ಸಂಖ್ಯೆಯ ವಿಷಯದಲ್ಲೂ ಅತ್ಯಂತ ಕಡಿಮೆ ಇರುವ, ಕಾರ್ಯಕರ್ತನ ಕೋಟಾ ಎಂದೇ ಪರಿಗಣಿಸಬಹುದಾದ ಪಿ.ವಿ. ಮೋಹನ್ ಅವರಿಗೆ ನೀಡಿದೆ.
ಎಲ್ಲಕ್ಕಿಂತಲೂ ಮುಖ್ಯವಾಗಿ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿಯ ಸಾರಥ್ಯವನ್ನು ನೀಡಿದೆ. ಇವೆಲ್ಲವನ್ನು ಕಾಂಗ್ರೆಸ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಕಾರಣಕ್ಕೆ ಮಾಡಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.
ಬಿಜೆಪಿ ಕೂಡ ರಾಜ್ಯಸಭೆಗೆ ಕುರುಬರಿಗೆ ಟಿಕೆಟ್ ಕೊಟ್ಟಿರುವುದು ಮಾತ್ರವಲ್ಲದೆ ವಿಧಾನ ಪರಿಷತ್ ಚುನಾವಣೆಗೆ ಮಡಿವಾಳ ಸಮುದಾಯದ ರಘು ಕೌಟಿಲ್ಯಗೆ ಅವಕಾಶ ಕೊಟ್ಟಿದೆ. ಇದು ಕೂಡ ಸಿದ್ದರಾಮಯ್ಯ ನಿರ್ಗಮನದ ಫಲಶ್ರುತಿಯಾಗಿದೆ. ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಬದಲಾವಣೆಯಾದ ಬೆನ್ನಲ್ಲೇ ಬಿಜೆಪಿಯೂ ನಾಯಕತ್ವದ ಬದಲಾವಣೆ ಬಗ್ಗೆ ಆಲೋಚಿಸುತ್ತಿದೆ. ಬಿಜೆಪಿಯ ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷಗಳ ಸ್ಥಾನಗಳಿಗೆ ಹೊಸಬರು ಬರಬಹುದು. ಎರಡು ಸ್ಥಾನಗಳ ಪೈಕಿ ಒಂದಕ್ಕೆ ಹಿಂದುಳಿದ ಜಾತಿಯ ನಾಯಕನನ್ನು ತರಬಹುದು. ಉತ್ತರ ಕರ್ನಾಟಕವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪಕ್ಷದ ಅಧ್ಯಕ್ಷ ಸ್ಥಾನವನ್ನು ಲಿಂಗಾಯತರಿಗೇ ನೀಡಬಹುದು. ಅದು ಹಾಲಿ ಅಧ್ಯಕ್ಷ ವಿಜಯೇಂದ್ರ ಆಗಬಹುದು ಅಥವಾ ಮತ್ತೊಬ್ಬ ಲಿಂಗಾಯತ ಆಗಬಹುದು. ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಹಿಂದುಳಿದ ಜಾತಿಯ ಸುನೀಲ್ ಕುಮಾರ್ ಹೆಸರನ್ನು ಪರಿಗಣಿಸಬಹುದು ಎನ್ನುವ ಮಾತುಗಳು ಕೇಳಿಬರುತ್ತಿದೆ. ಒಟ್ಟಿನಲ್ಲಿ ಮುಂದುವರಿದ ಸಮುದಾಯದವರೇ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಹಾಗೂ ಪ್ರಮುಖ ಪಕ್ಷಗಳ ರಾಜ್ಯಾಧ್ಯಕ್ಷರೂ ಆಗಿರುವ ಸಂದರ್ಭದಲ್ಲಿ ಪರೋಕ್ಷವಾಗಿ ಹಿಂದುಳಿದ ಜಾತಿಗಳ ರಾಜಕಾರಣ ಕೂಡ ಶುರುವಾಗಿದೆ.
ಗಮನಸೆಳೆದ ಹರಿಪ್ರಸಾದ್ ಲೈಬ್ರರಿ!
ಬಿ.ಕೆ. ಹರಿಪ್ರಸಾದ್ ತುಂಬಾ ಓದುವ ನಾಯಕ. ರಾಜಕಾರಣದ ತಮ್ಮ ಬಹುತೇಕ ಸಮಯವನ್ನು ರಾಷ್ಟ್ರ ರಾಜಕೀಯದಲ್ಲೇ ಕಳೆದಿದ್ದಾರೆ. 19 ರಾಜ್ಯಗಳಲ್ಲಿ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಅವರು ವಿಮಾನದಲ್ಲಿ ಹಾರಾಟ ಮಾಡಿದ್ದೇ ಜಾಸ್ತಿ. ವಿಮಾನ ಹಾರಾಟದ ವೇಳೆ ಅವರ ಜೊತೆಗಿದ್ದದ್ದು ಪುಸ್ತಕಗಳು. ಅದನ್ನು ಹೊರತುಪಡಿಸಿಯೂ ಬಿಡುವಾದಾಗಲೆಲ್ಲಾ ಪುಸ್ತಕ ಕೈಗೆತ್ತಿಕೊಳ್ಳುವಂಥ ನಾಯಕ. ಅವರು ಬಿಜೆಪಿ, ಆರೆಸ್ಸೆಸ್, ಸಂಘ ಪರಿವಾರದ ಹುನ್ನಾರಗಳ ಬಗ್ಗೆ ತುಂಬಾ ನಿಖರವಾಗಿ ಮಾತನಾಡುವ ಬೆರಳೆಣಿಕೆಯಷ್ಟು ನಾಯಕರ ಪೈಕಿ ಕೂಡ ಒಬ್ಬರು. ಅವರಿಗೆ ಹಿರಿಯರೊಬ್ಬರು ಒಂದಷ್ಟು ಪುಸ್ತಕಗಳ ಪಟ್ಟಿ ಮಾಡಿ, ಇವುಗಳನ್ನು ಓದಿ, ಆಗ ಇನ್ನಷ್ಟು ಖಚಿತವಾಗಿ ಮಾತನಾಡಬಹುದು ಎಂದು ಸಲಹೆ ನೀಡಿದ್ದರಂತೆ. ಆ ಪಟ್ಟಿಯನ್ನು ನೋಡಿದ ಹರಿಪ್ರಸಾದ್, ಇನ್ನೊಂದೆರಡು ಪುಸ್ತಕಗಳ ಹೆಸರು ಸೇರಿಸಿ ಇವೆಲ್ಲವನ್ನೂ ಓದಿದ್ದೇನೆ ಎಂದು ಹೇಳಿದ್ದರಂತೆ. ಅಷ್ಟರ ಮಟ್ಟಿಗೆ ಅವರು ಪುಸ್ತಕ ಪ್ರಿಯ. ಅವರ ಮನೆಯಲ್ಲೇ ಒಂದು ದೊಡ್ಡ ಗ್ರಂಥಾಲಯ ಇದೆ.
ಈಗ ಕೆಪಿಸಿಸಿ ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಅಭಿನಂದಿಸಲು ಅವರ ಮನೆಗೆ ಬಹಳ ಜನ ಬರುತ್ತಿದ್ದಾರೆ. ಅವರೆಲ್ಲರೂ ಹರಿಪ್ರಸಾದ್ ಅವರ ಲೈಬ್ರರಿ ಮತ್ತು ಪುಸ್ತಕ ಪ್ರೀತಿಯನ್ನು ಕಂಡು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಓದುವ ಹವ್ಯಾಸ ಇರುವ ರಾಜಕಾರಣಿಗಳ ಸಂಖ್ಯೆ ತುಂಬಾನೇ ಕಡಿಮೆ ಇರುವುದರಿಂದ ಹರಿಪ್ರಸಾದ್ ಅವರ ಗ್ರಂಥಾಲಯ ಕಂಡು ಆಶ್ಚರ್ಯವಾಗುವುದು ಸಹಜತಾನೇ?
------ಆಫ್ ದಿ ರೆಕಾರ್ಡ್!------
ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಸಾಹಿತಿಗಳಿಗೆ ಆಹ್ವಾನ ನೀಡಲಾಗುತ್ತದೆ. ಸಾಹಿತಿಗಳು ಎಂದರೆ ನಾಡಿನ ಸಾಕ್ಷಿಪ್ರಜ್ಞೆಗಳು ಎಂದು. ಆದರೆ ಮೊನ್ನೆಯ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ತುಂಬಿ ಕೊಂಡಿದ್ದರು, ಸಾಹಿತಿಗಳು ಮಾತ್ರ ಕಾಣಲಿಲ್ಲ.






