ಇಂಧನ ಬೆಲೆ ಏರಿಕೆ ಖಂಡಿಸಿ ಬೈಕ್ಗೆ ಹಗ್ಗ ಕಟ್ಟಿ ಎಳೆದು ವಿನೂತನ ಪ್ರತಿಭಟನೆ

ರಾಯಚೂರು: ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೇಲಿಂದ ಮೇಲೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದಿಂದ ನಗರದ ಡಾ. ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಬೈಕ್ಗೆ ಹಗ್ಗ ಕಟ್ಟಿ ಎಳೆದು ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐ(ಎಂಎಲ್) ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಪೂಜಾರ್, ಕೇಂದ್ರ ಸರ್ಕಾರ ಮೇ 15ರಿಂದ ಮೇ 25ರ ಒಳಗೆ ಕೇವಲ 11 ದಿನಗಳಲ್ಲಿ ಪೆಟ್ರೋಲ್ 7.38 ರೂಪಾಯಿ ಹಾಗೂ ಡೀಸೆಲ್ 7.52 ರೂಪಾಯಿ ಹಾಗೂ ಸಿಎನ್ಜಿ 6 ರೂಪಾಯಿ ಏರಿಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 99 ಡಾಲರ್ಗಿಂತಲೂ ಕಡಿಮೆಯಿದ್ದರೂ ಪೆಟ್ರೋಲ್ ಶೇ. 42.8ರಷ್ಟು ಮತ್ತು ಡೀಸೆಲ್ ಶೇ. 67.9ರಷ್ಟು ಏರಿಕೆಯಾಗಿದೆ. ಇಂಧನ ಬೆಲೆ ಏರಿಕೆಯು ಸಾರಿಗೆಯಿಂದ ಹಿಡಿದು ಆಹಾರ ಪದಾರ್ಥಗಳವರೆಗೆ ಪ್ರತಿಯೊಂದು ವಲಯದ ಮೇಲೂ ಪ್ರಭಾವ ಬೀರಿದ್ದು, ಮೋದಿ ಸರ್ಕಾರವು ಸಾಮಾನ್ಯ ಜನರು ಮತ್ತು ಮಧ್ಯಮ ವರ್ಗದವರ ಬೆನ್ನೆಲುಬನ್ನು ಮುರಿದಿದೆ ಎಂದು ದೂರಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂಎಲ್) ಲಿಬರೇಶನ್ ತಾಲೂಕು ಕಾರ್ಯದರ್ಶಿ ಅಜೀಜ್ ಜಾಗೂರದಾರ್, ಇಂಧನ, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರ ಜನರು ಎಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಾರೆಂಬ ಆತಂಕದಿಂದ ಕುತಂತ್ರವನ್ನು ಹೆಣೆದಿದೆ. ಐದು ರಾಜ್ಯಗಳ ಚುನಾವಣೆಗೆ ಮುನ್ನ, ಇರಾನ್ ಜೊತೆಗಿನ ಅಮೆರಿಕ-ಇಸ್ರೇಲ್ ಮಿಲಿಟರಿ ಸಂಘರ್ಷವು ದೇಶೀಯ ಇಂಧನ ಪೂರೈಕೆ ಅಥವಾ ಬೆಲೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ದೇಶದಲ್ಲಿ ಸಾಕಷ್ಟು ಇಂಧನ ಸಂಗ್ರಹವಿದೆ ಎಂದು ಕೇಂದ್ರ ಸರ್ಕಾರ ನಾಗರಿಕರಿಗೆ ನೀಡಿದ ಭರವಸೆ ಹಸಿ ಸುಳ್ಳಾಗಿದೆ. ಪೆಟ್ರೋಲ್ ಪಂಪ್ಗಳ ಮುಂದೆ, ಅಡುಗೆ ಅನಿಲ ವಿತರಣಾ ಅಂಗಡಿಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲುತ್ತಿದ್ದು, ಕೇಂದ್ರ ಸರ್ಕಾರದ ಜನದ್ರೋಹಿ ನೀತಿಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಹೊಗೆಮುಕ್ತ ಮನೆಯ ಹೆಸರಿನಲ್ಲಿ ಉಜ್ವಲ ಯೋಜನೆಯನ್ನು ಜಾರಿಗೆ ತಂದು, ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ನಾಲೈದು ನೂರು ರೂಪಾಯಿಗೆ ಸಿಗುತ್ತಿದ್ದ 14.2 ಕೆ.ಜಿ.ಯ ಗ್ಯಾಸ್ ಸಿಲಿಂಡರ್ನ್ನು 933 ರೂಪಾಯಿವರೆಗೆ ಏರಿಸಿ ಹಗಲು ದರೋಡೆಗೆ ನಿಂತಿದೆ. ಬೆಲೆ ಏರಿಕೆಯಿಂದ ಗ್ಯಾಸ್ ಕೊಳ್ಳಲಾಗದ ಮಹಿಳೆಯರು ಪುನಃ ಕಟ್ಟಿಗೆ ಒಲೆಗೆ ಮೊರೆ ಹೋಗುತ್ತಿದ್ದು, ಮತ್ತೆ ಹೊಗೆಯಲ್ಲಿ ದಿನವೂ ಕಣ್ಣೀರು ಹಾಕುತ್ತಿದ್ದಾರೆ. ಇದು ಬಿಜೆಪಿ ಸರ್ಕಾರದ ಗೋಮುಖ ವ್ಯಾಘ್ರ ನೀತಿಗೆ ಜ್ವಲಂತ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರ ಅಚ್ಛೇ ದಿನ್ ಎನ್ನುತ್ತಲೇ ಮಹಿಳೆಯರಿಗೆ (ಬುರೇ ದಿನ್) ಕೆಟ್ಟ ದಿನಗಳನ್ನು ತೋರಿಸಿದೆ. ಈ ಸರ್ಕಾರಕ್ಕೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ, ಕಾರ್ಪೊರೇಟ್ ಬಂಡವಾಳಿಗರ ಏಜೆಂಟ್ರಂತೆ ವರ್ತಿಸುವುದೇ ಸರ್ಕಾರದ ದೈನಂದಿನ ಕಾಯಕವಾಗಿದ್ದು, ಜನರ ಮೇಲೆ ತೆರಿಗೆ ಹೇರುತ್ತಿದೆ ಎಂದರು.
ಸರ್ಕಾರ ಕಾರ್ಪೊರೇಟ್ ತೆರಿಗೆಯನ್ನು ವರ್ಷದಿಂದ ವರ್ಷಕ್ಕೆ ಕಡಿತಗೊಳಿಸುತ್ತಿದೆ. ಆ ಮೂಲಕ ಕೃಷಿ ಸಂಬಂಧಿತ ವಲಯಗಳು, ವಸತಿ, ಸಮಾಜ ಕಲ್ಯಾಣ ಹಾಗೂ ಇತರೆ ಸಂಬಂಧಿತ ಸಬ್ಸಿಡಿಗಳು ಮತ್ತು ಉದ್ಯೋಗ ಸಂಬಂಧಿತ ವಲಯಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಗಳನ್ನು ವರ್ಷದಿಂದ ವರ್ಷಕ್ಕೆ ಭಾರಿ ಪ್ರಮಾಣದಲ್ಲಿ ಕಡಿತಗೊಳಿಸುವ ಮೂಲಕ ಬಡವರಿಗೆ, ಮಧ್ಯಮ ವರ್ಗದವರಿಗೆ ಹೆಚ್ಚು ತೆರಿಗೆ, ಶ್ರೀಮಂತರಿಗೆ ಹಾಗೂ ಕಾರ್ಪೊರೇಟ್ ಕಂಪನಿ ಬಂಡವಾಳಿಗರಿಗೆ ಕಡಿಮೆ ತೆರಿಗೆ ನೀತಿ ಅನುಸರಿಸುವ ಮೂಲಕ ದೇಶದ ನಾಗರಿಕರಿಗೆ ದ್ರೋಹ ಬಗೆದಿದೆ. ಜನರು ಬೀದಿಗಿಳಿದು ಹೋರಾಟ ಮಾಡುವ ಮುನ್ನ ಕೇಂದ್ರ ಸರ್ಕಾರ ಇಂಧನ ಹಾಗೂ ಅಡುಗೆ ಅನಿಲ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕು ಎಂದು ಈ ಮೂಲಕ ಆಗ್ರಹಿಸುತ್ತೇವೆಂದು ಒತ್ತಾಯಿಸುತ್ತೇವೆ.
ಹಕ್ಕೊತ್ತಾಯಗಳು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಸಿಎನ್ಜಿ ಬೆಲೆಯನ್ನು ಕೂಡಲೇ ಇಳಿಕೆ ಮಾಡಬೇಕು. ಜೀವನಾವಶ್ಯಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಕೂಡಲೇ ನಿಯಂತ್ರಣಕ್ಕೆ ತರಬೇಕು. ಪೆಟ್ರೋಲ್-ಡೀಸೆಲ್ ಇಂಧನದ ಬೆಲೆಯನ್ನು ಮುಕ್ತ ಮಾರುಕಟ್ಟೆಗೆ ಬಿಡದೇ ಕೇಂದ್ರ ಸರ್ಕಾರವೇ ನಿರ್ಧರಿಸಿ ನಿಯಂತ್ರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಪೂಜಾರ್, ತಾಲೂಕು ಕಾರ್ಯದರ್ಶಿ ಅಜೀಜ್ ಜಾಗೀರ್ದಾರ್, ಮುಖಂಡರಾದ ಜಿಲಾನಿ ಯರಿಗೇರಾ, ಭೀಮಯ್ಯ, ಮಹೇಂದ್ರ, ಪ್ರಹ್ಲಾದ್, ಜಗದೀಶ್, ಹನೀಫ್ ಅಬಕಾರಿ, ಲಕ್ಷ್ಮಣ, ರಾಮಸ್ವಾಮಿ, ಮಾರಣ್ಣ, ನರಸಿಂಹಲು, ಸಣ್ಣ ನರಸಪ್ಪ, ಎಲ್ಲಪ್ಪ ಇದ್ದರು.






