ರಾಯಚೂರು | ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ

ರಾಯಚೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಹಾಗೂ ಕಾಲೇಜು ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿ ಜಯಂತಿ ಭಾವಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುತ್ಥಳಿಯನ್ನು ತಳಿರು ತೋರಣ ಮತ್ತು ವಿದ್ಯುದೀಪಗಳಿಂದ ಅಲಂಕರಿಸಲಾಯಿತು. ಬೆಳಿಗ್ಗೆ 8 ಗಂಟೆಗೆ ನಬೀಬೇಗ, ಮಹಾಲಕ್ಷ್ಮಿ ವಿಜಯಕುಮಾರ, ಸುಧಾಕರ ಹಾಗೂ ಮಹಮ್ಮದ್ ಅನ್ವರ್ ಮಾಡಗಿರಿ ಸೇರಿದಂತೆ ಕಲಾವಿದರ ತಂಡ ಗಾಂಧೀಜಿಯವರ ಪ್ರಿಯಗೀತೆಗಳನ್ನು ಪ್ರಸ್ತುತಪಡಿಸಿ ಭಕ್ತಿಭಾವ ಮೂಡಿಸಿದರು.
ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ ದೀಪ ಬೆಳಗಿಸಿ ಚಾಲನೆ ನೀಡಿದರು. ಬಳಿಕ ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ, ಐಎಎಸ್ ಪ್ರೊಬೇಷನರಿ ಅಧಿಕಾರಿ ಪುರುರಾಜ್ ಸಿಂಗ್ ಸೋಲಂಕಿ, ಅಪರ ಜಿಲ್ಲಾಧಿಕಾರಿ ಶಿವಾನಂದ, ತಹಸೀಲ್ದಾರ ಸುರೇಶ್ ವರ್ಮಾ, ಉಪ ಆಯುಕ್ತೆ ಸಂತೋಷರಾಣಿ ಎಂ. ಸೇರಿದಂತೆ ಅನೇಕ ಗಣ್ಯರು ಗಾಂಧೀಜಿಯವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಲಕ್ಷ್ಮೀದೇವಿ, ಸುನಿತಾ, ನಾಗೇಶ್ವರಿ, ಸಯ್ಯದ್ ಖಾದ್ರಿ ಕೆ.ಇ. ಮತ್ತು ಕುಮಾರ ವಿದ್ಯಾಸಾಗರ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಿದರು.
ಜಿಲ್ಲಾಧಿಕಾರಿ ನಿತೀಶ್ ಕೆ. ಮಾತನಾಡಿ, “ನನ್ನ ಜೀವನವೇ ನನ್ನ ಸಂದೇಶ” ಎಂಬ ಗಾಂಧೀಜಿಯವರ ತತ್ವವನ್ನು ನೆನಪಿಸಿಕೊಂಡು ಅವರು, ಅತ್ಯಂತ ಸರಳ ಜೀವನ ನಡೆಸಿ ಜಗತ್ತಿಗೆ ಮಹತ್ವದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಂದೇಶ ನೀಡಿದರ ಕುರಿತು ಪ್ರಸ್ತಾಪಿಸಿದರು. ಚಿಂತಕ-ವಿಮರ್ಶಕ ಪರಮೇಶ್ವರಪ್ಪ ಸಾಲಿಮಠ ಅವರು ಉಪನ್ಯಾಸ ನೀಡಿದರು.
ಪ್ರಬಂಧ ಸ್ಪರ್ಧಾ ಬಹುಮಾನ ವಿತರಣೆ :
ವಾರ್ತಾ ಇಲಾಖೆಯಿಂದ ಆಯೋಜಿಸಲಾದ ‘ಬಾಪೂಜಿ ಪ್ರಬಂಧ ಸ್ಪರ್ಧೆ’ ಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾರತ ಸೇವಾದಳದ ವಿದ್ಯಾಸಾಗರ, ಸ್ಕೌಟ್ಸ್ ಮತ್ತು ಗೈಡ್ಸ್ನ ಆರ್.ಎಚ್.ಸಾಗರ, ಬಿಸಿಎಂ ಅಧಿಕಾರಿ ಸುನೀತಾ ಘಟಕಾಂಬಳೆ, ಮಹಾನಗರ ಪಾಲಿಕೆಯ ಕೃಷ್ಣ ಕಟ್ಟಿಮನಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿ ಡಾ.ದಂಡಪ್ಪ ಬಿರಾದಾರ ಹಾಗೂ ಅನೇಕರು ಉಪಸ್ಥಿತರಿದ್ದರು.
ವಾರ್ತಾ ಇಲಾಖೆಯ ಸಹಾಯಕ ಗವಿಸಿದ್ದಪ್ಪ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.







