ಭದ್ರಾವತಿ| ಬಿಜೆಪಿ ನಾಯಕನ ವಿರುದ್ಧ ಅತ್ಯಾಚಾರ ಆರೋಪ; ಪ್ರಕರಣ ದಾಖಲು

ಆರೋಪಿ ಭರತ್ ಬಿ.ಎಸ್
ಶಿವಮೊಗ್ಗ: ಭದ್ರಾವತಿಯ ಬಿಜೆಪಿ ಯುವ ಮೋರ್ಚಾ ಮುಖಂಡನ ವಿರುದ್ಧ ಅತ್ಯಾಚಾರ ಮತ್ತು ಬೆದರಿಕೆ ಆರೋಪ ಕೇಳಿಬಂದಿದೆ.
ವಕೀಲನೂ ಆಗಿರುವ ಆರೋಪಿ ಭರತ್ ಬಿ.ಎಸ್ ಎಂಬಾತ 23 ವರ್ಷದ ಮಹಿಳೆಯ ಬಳಿ ಪತಿಯ ಸ್ನೇಹಿತನೆಂದು ಪರಿಚಯಿಸಿಕೊಂಡು, ಇನ್ಸ್ಟಾಗ್ರಾಮ್ನಲ್ಲಿ ಪರಿಚಯ ಮಾಡಿಕೊಂಡಿದ್ದ. ಅಲ್ಲದೇ ದಿನಸಿ ಅಂಗಡಿಗೆ ಬಂದು ಅಲ್ಲಿಯೂ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಕಳೆದ ಎ.11 ರಂದು ಸ್ನೇಹಿತ ಭರತ್ ಮನೆಗೆ ಬರುತ್ತಾನೆ, ಆತನಿಗೆ ಹಣ ನೀಡು ಎಂದು ಸಂತ್ರಸ್ತೆಯ ಪತಿ ಹೇಳಿದ್ದ. ಪತಿ ಸೂಚನೆಯಂತೆ ಹಣ ನೀಡಲು ಮುಂದಾದಾಗ, ಆರೋಪಿಯು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ. ಯಾರಿಗಾದರೂ ಹೇಳಿದರೆ ಮಾನಹಾನಿ ಮಾಡುವುದಾಗಿ ಹೇಳಿ ಪ್ರಾಣ ಬೆದರಿಕೆ ಹಾಕಿದ್ದ. ಬಳಿಕ ಹಣದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದ. ಎ.25 ರಂದು ಮತ್ತೆ ಅಂಗಡಿಗೆ ಬಂದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದ ಎಂದು ಆರೋಪಿಸಲಾಗಿದೆ.
ಮಹಿಳೆಯ ಪತಿ ಮೊಬೈಲ್ ನೋಡುವಾಗ ಇನ್ಸ್ಟಾಗ್ರಾಮ್ ಬ್ಲಾಕ್ ಆಗಿದ್ದನ್ನು ನೋಡಿ, ಪ್ರಶ್ನಿಸಿದಾಗ ಮಹಿಳೆ ಸತ್ಯ ಬಿಚ್ಚಿಟ್ಟಿದ್ದರು.
ಅತ್ಯಾಚಾರ ಎಸಗಿದ ಆರೋಪಿ ವಿರುದ್ಧ ದಂಪತಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




