ಶ್ರೀಲಂಕಾ ವಿರುದ್ಧ ಮೂರನೇ ಏಕದಿನ : ಲಿಟನ್ ದಾಸ್ ರನ್ನು ಕೈಬಿಟ್ಟ ಬಾಂಗ್ಲಾದೇಶ
ಚಿತ್ತಗಾಂಗ್: ಮೊದಲೆರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿ ಕಳಪೆ ಪ್ರದರ್ಶನ ನೀಡಿರುವ ವಿಕೆಟ್ ಕೀಪರ್-ಬ್ಯಾಟರ್ ಲಿಟನ್ ದಾಸ್ರನ್ನು ಶ್ರೀಲಂಕಾ ವಿರುದ್ಧ ಸೋಮವಾರ ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಅಂತರರಾಷ್ಟ್ರೀಯ ಪಂದ್ಯದಿಂದ ಬಾಂಗ್ಲಾದೇಶ ಕೈಬಿಟ್ಟಿದೆ.
ಶ್ರೀಲಂಕಾ ಪ್ರವಾಸದಲ್ಲಿ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಇನ್ನೋರ್ವ ವಿಕೆಟ್ ಕೀಪರ್-ಬ್ಯಾಟರ್ ಜಾಕರ್ ಅಲಿ ಏಕದಿನ ಕ್ರಿಕೆಟ್ ತಂಡದಲ್ಲಿ ಮೊದಲ ಬಾರಿ ಸ್ಥಾನ ಪಡೆದಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ ಲಿಟನ್ ದಾಸ್ ಟಿ20 ಸರಣಿಯ 3 ಪಂದ್ಯಗಳಲ್ಲಿ ಕೇವಲ 44 ರನ್ ಗಳಿಸಿದ್ದಾರೆ.
ಲಿಟನ್ ದಾಸ್ ಅವರು ಇತ್ತೀಚೆಗಿನ ದಿನಗಳಲ್ಲಿ ಸೀಮಿತ ಓವರ್ ಕ್ರಿಕೆಟ್ ನಲ್ಲಿ ನೀಡುತ್ತಿರುವ ಕಳಪೆ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ನಾವು ಈ ಬದಲಾವಣೆ ಮಾಡಿದ್ದೇವೆ. ತಂಡದಲ್ಲಿ ಇಬ್ಬರು ಸಮರ್ಥ ಆರಂಭಿಕ ಆಟಗಾರರು ಇದ್ದಾರೆ ಎಂದು ಮುಖ್ಯ ಆಯ್ಕೆಗಾರ ಅಶ್ರಫ್ ಹುಸೈನ್ ಹೇಳಿದ್ದಾರೆ.
26ರ ವಯಸ್ಸಿನ ಜಾಕರ್ ಅಲಿ ಬಾಂಗ್ಲಾದೇಶ ಪರ ಆಡಿರುವ 6 ಟಿ20 ಪಂದ್ಯಗಳಲ್ಲಿ 55ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
ಸದ್ಯ ಏಕದಿನ ಸರಣಿಯು 1-1ರಿಂದ ಸಮಬಲದಲ್ಲಿದೆ. ಬಾಂಗ್ಲಾದೇಶ ಮೊದಲ ಪಂದ್ಯವನ್ನು 6 ವಿಕೆಟ್ ಗಳಿಂದ ಗೆದ್ದುಕೊಂಡರೆ, ಶ್ರೀಲಂಕಾ ಶುಕ್ರವಾರ 2ನೇ ಪಂದ್ಯವನ್ನು 3 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. ಚಿತ್ತಗಾಂಗ್ ನಲ್ಲಿ ಸೋಮವಾರ ಅಂತಿಮ ಪಂದ್ಯ ನಡೆಯಲಿದೆ.
ಬಾಂಗ್ಲಾದೇಶ ಕ್ರಿಕೆಟ್ ತಂಡ
ನಜ್ಮುಲ್ ಹುಸೈನ್ ಶಾಂಟೊ(ನಾಯಕ), ಅನಮುಲ್ ಹಕ್, ಸೌಮ್ಯ ಸರ್ಕಾರ್, ತಂಝೀದ್ ಹಸನ್ ತಮೀಮ್, ಮುಶ್ಫಿಕರ್ ರಹೀಮ್, ತೌಹಿದ್ ಹೃದಾಯ್,ಮಹ್ಮದುಲ್ಲಾ ರಿಯಾದ್, ಮೆಹಿದಿ ಹಸನ್ ಮಿರಾಝ್, ತೈಜುಲ್ ಇಸ್ಲಾಮ್, ರಿಶದ್ ಹುಸೇನ್, ತಸ್ಕಿನ್ ಅಹ್ಮದ್, ಶರೀಫುಲ್ ಇಸ್ಲಾಂ, ತಂಝಿಮ್ ಹಸನ್ ಸಾಕಿಬ್, ಮುಸ್ತಫಿಝರ್ರಹ್ಮಾನ್, ಜಾಕರ್ ಅಲಿ.







