‘ನೂತನ ಕೈಗಾರಿಕಾ ನೀತಿ 2025-30’ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್
► 5 ವರ್ಷದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ ಗುರಿ ► ಖಾಸಗಿ ಕೈಗಾರಿಕಾ ಪಾರ್ಕ್ ಅಭಿವೃದ್ಧಿಗೂ ಅವಕಾಶ

ಬೆಂಗಳೂರು : ರಾಜ್ಯ ಸರಕಾರವು ಮುಂದಿನ ಐದು ವರ್ಷಗಳ (2025-30) ಉದ್ಯಮ ಬೆಳವಣಿಗೆಗೆ ರೂಪಿಸಿರುವ ನೂತನ ಕೈಗಾರಿಕಾ ನೀತಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಅನಾವರಣಗೊಳಿಸಿದರು.
ಹೊಸ ನೀತಿಯು ಇನ್ನು ಐದು ವರ್ಷಗಳಲ್ಲಿ ರಾಜ್ಯಕ್ಕೆ 7.50 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಆಕರ್ಷಿಸುವ, 20 ಲಕ್ಷ ಉದ್ಯೋಗ ಸೃಷ್ಟಿಸುವ ಮತ್ತು ಸನ್-ರೈಸ್ ವಲಯದಲ್ಲಿ ರಾಜ್ಯವನ್ನು ಇಡೀ ದೇಶಕ್ಕೆ ಪ್ರಥಮ ಸ್ಥಾನದಲ್ಲಿ ಪ್ರತಿಷ್ಠಾಪಿಸುವ ಹೆಗ್ಗುರಿಗಳನ್ನು ಹೊಂದಿದೆ. ಇದನ್ನೆಲ್ಲ ಸಾಧಿಸಲು ಬೆಂಗಳೂರಿನ ಆಚೆಗೆ ಹಾಗೂ ಹಿಂದುಳಿದ ಮತ್ತು ಅತೀ ಹಿಂದುಳಿದ ಜಿಲ್ಲೆ, ತಾಲೂಕುಗಳಿಗೆ ಆದ್ಯತೆ ಕೊಡಲಾಗಿದೆ. ಇದಕ್ಕಾಗಿ ಕೈಗಾರಿಕಾ ಬೆಳವಣಿಗೆ ಆಧರಿಸಿ ಪ್ರದೇಶವಾರು ಪ್ರೋತ್ಸಾಹಕ ಭತ್ತೆಗಳನ್ನು ನೀಡಲಾಗುವುದು ಎಂದು ಹೊಸ ನೀತಿಯಲ್ಲಿ ತಿಳಿಸಲಾಗಿದೆ.
ಹೊಸ ನೀತಿಯಲ್ಲಿರುವ ಅಂಶಗಳನ್ನು ವಿವರಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಈ ನೀತಿಯಲ್ಲಿ ನಂಜುಂಡಪ್ಪ ವರದಿ ಆಧರಿಸಿ ಕೈಗಾರಿಕಾ ಬೆಳವಣಿಗೆಯಲ್ಲಿ ಹಿಂದುಳಿದಿರುವ ಜಿಲ್ಲೆ, ತಾಲೂಕುಗಳನ್ನು ಝೋನ್-1 ಮತ್ತು 2ರಡಿ ತರಲಾಗಿದ್ದು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು `ಝೋನ್-3’ ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.
ಉದ್ಯಮಗಳ ಸಾಮರ್ಥ್ಯ ಮತ್ತು ಬೆಳವಣಿಗೆ ನಿಚ್ಚಳತೆಗೆ ಅನುಗುಣವಾಗಿ ವಲಯಗಳನ್ನಾಗಿ ಮಾಡಿದ್ದು, ರಾಜ್ಯದ ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗಸೃಷ್ಟಿಗೆ ಆದ್ಯತೆ ಇರುವಂತೆ ಎಚ್ಚರ ವಹಿಸಲಾಗಿದೆ. ಹೈಟೆಕ್ ತಯಾರಿಕೆ ವಲಯದಲ್ಲಿ ರಾಜ್ಯವನ್ನು ದೇಶದಲ್ಲೇ ಪ್ರಥಮ ಸ್ಥಾನಕ್ಕೆ ಏರುವಂತೆ ಮಾಡಲಾಗುವುದು. ಜೊತೆಗೆ ಸುಸ್ಥಿರ, ಪರಿಸರಸ್ನೇಹಿ, ಸಮತೋಲಿತ ಮತ್ತು ಎಲ್ಲರನ್ನೂ ಒಳಗೊಳ್ಳಲಿರುವ ಪ್ರಾದೇಶಿಕ ಬೆಳವಣಿಗೆಯನ್ನು ಉತ್ತೇಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕೈಗಾರಿಕಾ ಕ್ಷೇತ್ರದಲ್ಲಿ ಖಾಸಗಿ ಮತ್ತು ಸರಕಾರಿ ಸಹಭಾಗಿತ್ವದ ಮೂಲಕ ವಿಶ್ವ ದರ್ಜೆಯ ಮೂಲಸೌಕರ್ಯ ಅಭಿವೃದ್ಧಿ ಪಡಿಸುವಂತಹ ವ್ಯವಸ್ಥೆ ಮುಂದೆ ಬರಲಿದೆ. ಭಾರೀ ಹೂಡಿಕೆ ಇರುವ ಕೈಗಾರಿಕಾ ಯೋಜನಗೆಳ ವ್ಯಾಪ್ತಿಯಲ್ಲಿ ಡಾರ್ಮಿಟರಿ ಮತ್ತು ವಸತಿ ವ್ಯವಸ್ಥೆಗೆ ಸರಕಾರ ಕೈಜೋಡಿಸಲಿದೆ ಎಂದು ಎಂ.ಬಿ.ಪಾಟೀಲ್ ವಿವರಿಸಿದ್ದಾರೆ.
ಸಂಶೋಧನೆ ಮತ್ತು ಎಂಎಸ್ಎಂಇಗೆ ಗಮನ: ನೂತನ ಕೈಗಾರಿಕಾ ನೀತಿಯಲ್ಲಿ ಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ, ನಾವೀನ್ಯತೆಯ ಅಭಿವೃದ್ಧಿಗೆ ಕ್ವಿನ್ ಸಿಟಿಯನ್ನು ಅಭಿವೃದ್ಧಿ ಪಡಿಸಲಾಗುವುದು. ಕೆಐಎಡಿಬಿ ಮೂಲಕ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಶೇ.30ರಷ್ಟು ಜಾಗವನ್ನು ಮೀಸಲಿಟ್ಟು, ತಂತ್ರಜ್ಞಾನದ ಉನ್ನತೀಕರಣ, ಕೌಶಲ್ಯಾಭಿವೃದ್ಧಿ, ಉತ್ಕೃಷ್ಟತಾ ಪುರಸ್ಕಾರ, ಕ್ಲಸ್ಟರ್ಸ್ ಅಭಿವೃದ್ಧಿ, ಆಕರ್ಷಕ ಪ್ರೋತ್ಸಾಹನ ಭತ್ತೆ ಮತ್ತು ರಿಯಾಯಿತಿಗಳಿಗೆ ಗಮನ ಹರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕೆಲವು ಪ್ರದೇಶಗಳನ್ನು `ವಿಶೇಷ ಹೂಡಿಕೆ ಪ್ರದೇಶ’ ಆಗಿ ಘೋಷಿಸಿ, ಉದ್ಯಮಗಳ ಆರ್ ಅಂಡ್ ಡಿ ವಿಭಾಗ ಮತ್ತು ಉತ್ಪಾದನಾ ಘಟಕಗಳು ಒಂದೇ ಕಡೆ ಇರುವುದನ್ನು ಉತ್ತೇಜಿಸಲಾಗುವುದು. ಹೂಡಿಕೆದಾರರು ತಮ್ಮ ಕೇಪೆಕ್ಸ್ ಸಬ್ಸಿಡಿ ಅಥವಾ ಉತ್ಪಾದನೆ ಆಧರಿತ ಪ್ರೋತ್ಸಾಹನ ಭತ್ತೆ ನಡುವೆ ತಮಗೆ ಯಾವುದು ಅನುಕೂಲವೋ ಅದನ್ನು ಆರಿಸಿಕೊಳ್ಳಲು ಅವಕಾಶ ಇರಲಿದೆ ಎಂದು ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದಾರೆ.
ಖಾಸಗಿ ಕೈಗಾರಿಕಾ ಪ್ರದೇಶಗಳಿಗೂ ಅವಕಾಶ: ನೂತನ ಕೈಗಾರಿಕಾ ನೀತಿಯಡಿಯಲ್ಲಿ ಖಾಸಗಿ ಕೈಗಾರಿಕಾ ಪ್ರದೇಶಾಭಿವೃದ್ಧಿಗೂ ಅವಕಾಶ ಇರಲಿದೆ. ಇದರಂತೆ ಸಮಗ್ರ ಕೈಗಾರಿಕಾ ಪಾರ್ಕ್, ವಲಯವಾರು ಪಾರ್ಕ್, ಲಾಜಿಸ್ಟಿಕ್ಸ್ ಪಾರ್ಕ್ ಇತ್ಯಾದಿಗಳ ಅಭಿವೃದ್ಧಿ ಮಾಡಲಾಗುವುದು. ಜತೆಗೆ ಕೈಗಾರಿಕಾ ಪ್ರದೇಶಗಳ ಗರಿಷ್ಠ ಪ್ರಯೋಜನ ಪಡೆದುಕೊಳ್ಳಲು ಈಗಿರುವ ನಿರ್ಬಂಧಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶ ಎರಡರಲ್ಲೂ ತೆಗೆದು ಹಾಕಲಾಗುವುದು. ಜತೆಗೆ ನೇರ ಉದ್ಯೋಗ ಸೃಷ್ಟಿಗೆ ನೀತಿಯು ಒತ್ತು ಕೊಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದುಳಿದ ಜಿಲ್ಲೆ-ತಾಲೂಕಿಗೆ ರಿಯಾಯಿತಿ: ಕೈಗಾರಿಕಾ ಬೆಳವಣಿಗೆಯಲ್ಲಿ ಹಿಂದುಳಿದಿರುವ ಜಿಲ್ಲೆ, ತಾಲೂಕುಗಳಲ್ಲಿ ಹೂಡಿಕೆ ಮಾಡಿ, ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗುವ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ನೂತನ ಕೈಗಾರಿಕಾ ನೀತಿಯಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಅವುಗಳೆಂದರೆ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಶೇ.10ರಿಂದ 30ರಷ್ಟು ಕ್ಯಾಪಿಟಲ್ ಸಬ್ಸಿಡಿ, ಮುದ್ರಾಂಕ ಮತ್ತು ನೋಂದಣಿ ಶುಲ್ಕ ವಿನಾಯಿತಿ, ಭೂ ಪರಿವರ್ತನೆ ಶುಲ್ಕ ವಾಪಸ್, ಎಂಎಸ್ಎಂಇಗಳಿಗೆ ವಿದ್ಯುತ್ ಬಿಲ್ ಮೇಲಿನ ತೆರಿಗೆಯಿಂದ ವಿನಾಯಿತಿ, ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳಿಗೆ ವಿದ್ಯುತ್ ಸಬ್ಸಿಡಿ, ಮಳೆ ನೀರು ಸಂಸ್ಕರಣೆ ಮತ್ತು ತ್ಯಾಜ್ಯ ನೀರು ಮರುಪೂರಣಕ್ಕೆ ಪ್ರೋತ್ಸಾಹನ ಭತ್ತೆ, ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪನೆಗೆ ಪ್ರೋತ್ಸಾಹನ ಭತ್ತೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮೆಗಾ ಯೋಜನೆಗಳಿಗೆ ಸಿಗುವ ಸೌಲಭ್ಯ: ಪಿಎಲ್ಐ ಅಥವಾ ವಿಎಫ್ಎನ ಶೇ.10ರಿಂದ 25ರಷ್ಟು ಬಂಡವಾಳ ವೆಚ್ಚ ಸಬ್ಸಿಡಿ, ನಂಜುಂಡಪ್ಪ ವರದಿಯಲ್ಲಿ ಗುರುತಿಸಿರುವ ಹಿಂದುಳಿದ ಮತ್ತು ಅತೀ ಹಿಂದುಳಿದ ತಾಲೂಕುಗಳಲ್ಲಿನ ಹೂಡಿಕೆಗೆ ಕ್ರಮವಾಗಿ ಶೇ.3 ಮತ್ತು ಶೇ.5ರಷ್ಟು ಹೆಚ್ಚುವರಿ ಸಬ್ಸಿಡಿ, ಖಾಸಗಿ ಕೈಗಾರಿಕಾ ಪಾರ್ಕ್ ಅಭಿವೃದ್ಧಿಗೆ ಪ್ರೋ ತ್ಸಾಹನ ಭತ್ತೆ ಮತ್ತು ರಿಯಾಯಿತಿ, ಉದ್ಯೋಗಸೃಷ್ಟಿ ಮತ್ತು ಮಹಿಳಾ ಉದ್ಯೋಗಿಗಳ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಸಬ್ಸಿಡಿ, ಆರ್ ಅಂಡ್ ಡಿ ಜತೆಗೆ ಉತ್ಪಾದನಾ ಘಟಕ ಸ್ಥಾಪನೆಗೆ ಉತ್ತೇಜನ, ಮುದ್ರಾಂಕ ಮತ್ತು ನೋಂದಣಿ ಶುಲ್ಕದಿಂದ ವಿನಾಯಿತಿ ಹಾಗೂ ಭೂ ಪರಿವರ್ತನೆ ಶುಲ್ಕ ವಾಪಸ್ ಎಂದು ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದಾರೆ.







