ಕಾರ್ಯದೊಂದಿಗೆ ಕಲಿತು ಬೆಳೆದವರು ಕಾರಂತರು: ವಿಜಯಶಂಕರ್

ಕಾರ್ಕಳ, ಅ.14: ಡಾ.ಶಿವರಾಮ ಕಾರಂತರು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ದಾರಿ. ಬುದ್ಧ ಮತ್ತು ಗಾಂಧೀಜಿಯಂತೆ ಪ್ರಯೋಗಗಳ ಮೂಲಕ ಕಲಿತು ವ್ಯಕ್ತಿತ್ವವನ್ನು ರೂಪಿಸಿಕೊಂಡವರು ಕಾರಂತರು. ಯುವ ಜನರ ವ್ಯಕ್ತಿತ್ವ ಬೆಳವಣಿ ಗೆಗೆ ಕಾರಂತರ ದಾರಿ ಮಾದರಿಯಾಗಿದೆ ಎಂದು ವಿಮರ್ಶಕ ಡಾ.ಎಸ್.ಆರ್.ವಿಜಯಶಂಕರ್ ಹೇಳಿದ್ದಾರೆ.
ಕಾರ್ಕಳ ಯಕ್ಷ ರಂಗಾಯಣ ಮತ್ತು ಡಾ.ಶಿವರಾಮ ಕಾರಂತ ಟ್ರಸ್ಟಿನ ಸಹಯೋಗದಲ್ಲಿ ಅ.11ರಂದು ಕಾರ್ಕಳದ ಕೋಟಿ ಚೆನ್ನಯ್ಯ ಥೀಂ ಪಾರ್ಕ್ನ ಆವರಣದಲ್ಲಿ ನಡೆದ ಕಾರಂತ ಉಪನ್ಯಾಸ ಮತ್ತು ಕಾರಂತ ರಂಗ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಟ್ರಸ್ಟಿನ ಉದ್ದೇಶಗಳನ್ನು ವಿವರಿಸಿದರು. ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಚರ್ಚೆ ಕಾರ್ಯಕ್ರಮ ನಡೆಯಿತು. ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಚಂದ್ರನಾಥ್ ಬಜೆಗೋಳಿ ಸ್ವಾಗತಿಸಿ, ವಂದಿಸಿದರು. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಿರ್ದಿಂಗತ ತಂಡದ ಕಾರಂತರ ಕಾದಂಬರಿ ಆಧಾರಿತ ಮೈಮನಗಳ ಸುಳಿಯಲ್ಲಿ ನಾಟಕ ಪ್ರದರ್ಶನ ನಡೆಯಿತು.







