ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ವಂಚನೆ: ಪ್ರಕರಣ ದಾಖಲು

ಉಡುಪಿ, ಮೇ 24: ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಟ್ಟೂರಿನ ಎನ್.ಆರ್.ಪದ್ಮನಾಭ ಉಪಾಧ್ಯ ಎಂಬವರಿಗೆ ಆಶ್ಲೆ ಕರ್ನೇಲಿಯೋ ಎಂಬವರು 2025ರ ಫೆ.12ರಂದು ಯು.ಕೆ. ದೇಶದಲ್ಲಿ ಹೌಸ್ ಕೀಪಿಂಗ್ ಸೂಪವೈಸರ್ ಉದ್ಯೋಗ ಮಾಡಿಕೊಡುವುದಾಗಿ ತಿಳಿಸಿದ್ದರು. ನಂತರ ತನ್ನ ಸಹಾಯಕಿ ಸವಿತಾ ಅವರ ಮೊಬೈಲ್ ಸಂಖ್ಯೆಯನ್ನು ನೀಡಿದ್ದರು.
ಅದರಂತೆ ಪದ್ಮನಾಭ, ಸವಿತಾ ಅವರನ್ನು ಸಂಪರ್ಕಿಸಿದಾಗ, ಯು.ಕೆ. ವೀಸಾ ಪ್ರಕ್ರಿಯೆಗಾಗಿ 2,00,000ರೂ. ಶುಲ್ಕ ಪಾವತಿಸುವಂತೆ ತಿಳಿಸಿದ್ದು, ಮಾ.19ರಂದು ಆ ಹಣವನ್ನು ಪಾವತಿಸಿದ್ದರು. ಬಳಿಕ ಆಶ್ಲೆ, ಸವಿತಾ, ಪ್ರಕೃತಿ ಮತ್ತು ಪ್ರಶಾಂತ್ ಎಂಬವರು ಸೇರಿ ಮೆಡಿಕಲ್ ಪರೀಕ್ಷೆ, ವೀಸಾ ಸ್ಟಾಂಪಿಂಗ್ ಹಾಗೂ ಎಂಬಸಿ ಪ್ರೊಸೆಸಿಂಗ್ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು 6,23,000ರೂ. ಹಣ ಹಾಗೂ ಪಾಸ್ಪೋರ್ಟ್ ಪಡೆದುಕೊಂಡಿದ್ದರು.
ನಂತರ ಆರೋಪಿಗಳು ತಮ್ಮ ವೀಸಾ ತಿರಸ್ಕೃತವಾಗಿದೆ ಎಂದು ಹೇಳಿ ಹಣ ಹಾಗೂ ಪಾಸ್ಪೋರ್ಟ್ ವಾಪಾಸ್ಸು ನೀಡುವುದಾಗಿ ತಿಳಿಸಿದ್ದರೂ, ಬಳಿಕ ಫೋನ್ ಸಂಪರ್ಕ ಕಡಿತಗೊಳಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿ ವಂಚನೆ ಎಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.




