ಸುರಪುರ | ಅಂಬೇಡ್ಕರ್ ಅವರ ಋಣದಲ್ಲಿ ದೇಶವಿದೆ: ಜ್ಞಾನಪ್ರಕಾಶ ಸ್ವಾಮೀಜಿ

ಸುರಪುರ : ದೇಶದ ಸರ್ವರ ಏಳಿಗೆಗಾಗಿ ಸಂವಿಧಾನ ರಚಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಋಣದಲ್ಲಿ ಈ ದೇಶವಿದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿಮಠದ ಪೀಠಾಧ್ಯಕ್ಷ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಭಾರತೀಯ ಬೌದ್ಧ ಮಹಾಸಭಾ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಅಂಬೇಡ್ಕರ್ ನಗರದ ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ಮತ್ತು ದರ್ಶನ ಭೂಮಿ ಬುದ್ಧ ವಿಹಾರದಲ್ಲಿ ನಡೆದ ಬೌದ್ಧ ಧರ್ಮದ ವಿಧಿ ವಿಧಾನಗಳ ಅಡಿಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವಾಹವಾದ ದಂಪತಿಗಳು ಬೌದ್ಧ ಧಮ್ಮ ಸಂಘದಲ್ಲಿ ಉಳಿದು ಪಂಚಶೀಲ ಪಾಲಿಸಿದರೆ ಉತ್ತಮ ಜೀವನ ಸಾಗಿಸಬಹುದು ಎಂದು ಹೇಳಿದರು.
ಅಂಬೇಡ್ಕರ್ ಅವರನ್ನು ಓದಿದವರು ಉತ್ತಮ ನಾಯಕತ್ವ ಬೆಳೆಸಿಕೊಳ್ಳುತ್ತಾರೆ. ಓದದವರು ಚಮಚರಾಗಿಯೇ ಉಳಿಯುತ್ತಾರೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಅಂಬೇಡ್ಕರ್ ಅವರ ಮೊಮ್ಮಗ ಡಾ.ಭೀಮರಾವ್ ವೈ.ಅಂಬೇಡ್ಕರ್ ಮಾತನಾಡಿ, ಧಮ್ಮದ ಅಡಿಯಲ್ಲಿ ವಿವಾಹವಾಗಿರುವುದು ಸಂತಸದ ಸಂಗತಿ. ಪಂಚಶೀಲ ಪಾಲಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಭಾರತೀಯ ಬೌದ್ಧ ಮಹಾಸಭಾ ಹಾಗೂ ವಿವಿಧ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಅವರು ನೂತನವಾಗಿ ನಿರ್ಮಿಸಲಾಗಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಮೂರ್ತಿ ಲೋಕಾರ್ಪಣೆಗೊಳಿಸಿದರು. ಸಂಗಾನಂದ ಭಂತೇಜಿ ಸಾನಿಧ್ಯ ವಹಿಸಿದ್ದರು. ಹಿರಿಯ ಹೋರಾಟಗಾರ ಮಾನಪ್ಪ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾರತೀಯ ಬೌದ್ಧ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ದರ್ಶನ ಬಿ ಸೋಮಶೇಖರ, ಡಿಎಸ್ಎಸ್ ಕ್ರಾಂತಿಕಾರಿ ಬಣದ ರಾಜ್ಯ ಸಂಚಾಲಕ ಅರ್ಜುನ ಭದ್ರೆ, ಭಾರತೀಯ ಬೌದ್ಧ ಮಹಾಸಭಾದ ಉತ್ತರ ಕರ್ನಾಟಕ ಅಧ್ಯಕ್ಷ ಮನೋಹರ ಮೋರೆ, ಡಿಎಸ್ಎಸ್ ರಾಜ್ಯ ಸಂಚಾಲಕ ಶ್ಯಾಮ ಘಾಟಿಗೆ, ಮುಖಂಡರಾದ ದರ್ಜಿರಾವ್ ಸಾಹು ವಾಘ್ಮೋರೆ, ಸುಧೀರ ಬಾಹು ದಳವಿ, ಹಿರೇಮಾನ್ ಶಾವು ವಾಘ್ಮೋರೆ, ಭೀಮರಾವ ಎಂ ಕ್ರಾಂತಿ ವಾಗೋಲಿ, ಡಿಎಸ್ಎಸ್ ಜಿಲ್ಲಾ ಸಂಚಾಲಕ ಅಪ್ಪಣ್ಣ ಗಾಯಕವಾಡ, ಮರೆಪ್ಪ ಚಟ್ಟರಕರ್, ಚಂದ್ರಶೇಖರ ಹಸನಾಪುರ, ಮಹಾದೇವಪ್ಪ ಬಿಜಾಸಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಮೂರ್ತಿ ಬೊಮ್ಮನಹಳ್ಳಿ ಹಾಗೂ ವಕೀಲ ಮಲ್ಲಿಕಾರ್ಜುನ ತಳ್ಳಳ್ಳಿ ನಿರೂಪಿಸಿ ವಂದಿಸಿದರು.ಮುಖಂಡರಾದ ಬಸವರಾಜ ದೊಡ್ಡಮನಿ, ಮಾನಪ್ಪ ಶೆಳ್ಳಗಿ, ರಾಮಣ್ಣ ಶೆಳ್ಳಗಿ, ಶಿವಶಂಕರ ಬೊಮ್ಮನಹಳ್ಳಿ, ಮಾನಪ್ಪ ಬಿಜಾಸಪುರ, ಶ್ರೀಮಂತ ಚಲುವಾದಿ, ಶರಣು ಹಸನಾಪುರ,ಆರ್.ಎಸ್.ಮಾಲಗತ್ತಿ ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು.
ಅಂಬೇಡ್ಕರ್ ಮೂರ್ತಿ ಅನಾವರಣ ಅಂಗವಾಗಿ ಆಗಮಿಸಿದ್ದ ಅಂಬೇಡ್ಕರ್ ಮೊಮ್ಮಗ ಭೀಮರಾವ್ ವೈ. ಅಂಬೇಡ್ಕರ್ ಇತರೆ ಮುಖಂಡರನ್ನು ಭೀಮ ಸೈನ್ಯ ಪಥಸಂಚಲನ ಮೂಲಕ ಮೆರವಣಿಗೆ ನಡೆಸಿ ಕರೆ ತರಲಾಯಿತು. ನಂತರ ಭೀಮ ಸೈನ್ಯ ವರದಿ ಸಲ್ಲಿಸಲಾಯಿತು.
ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಜನರಲ್ಲಿ ಧಮ್ಮ ಪಂಚಶೀಲ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಆರಂಭಿಸಲಾಗುವುದು.
- ಡಾ.ಭೀಮರಾವ್ ವೈ.ಅಂಬೇಡ್ಕರ್






