ಯಾದಗಿರಿ | ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೋಲಿ ಸಮಾಜದಿಂದ ಪ್ರತಿಭಟನೆ

ಯಾದಗಿರಿ: ಕೋಲಿ, ಕಬ್ಬಲಿಗ, ಕಬ್ಬೇರ, ಬೆಸ್ತ, ಅಂಬಿಗ ಸೇರಿದಂತೆಯೇ ಇನ್ನುಳಿದ ಉಪಜಾತಿಗಳನ್ನು ಎಸ್ಟಿ ಜಾತಿಗೆ ಸೇರಿಸಬೇಕೆಂಬ ಬೇಡಿಕೆ ಒಳಗೊಂಡಂತೆ ವಿವಿಧ ಏಳು ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾ ಕೋಲಿ - ಕಬ್ಬಲಿಗ ಸಮಾಜದಿಂದ ಸೋಮವಾರ ನಗರದಲ್ಲಿ ಭಾರಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬೆಳಗ್ಗೆ ಡಿಗ್ರಿ ಕಾಲೇಜು ಬಳಿ ಜಮಾಯಿಸಿದ ಕೋಲಿ ಸಮಾಜದ ಸಾವಿರಾರು ಜನರು ಸಮಾಜದ ಧರ್ಮಗುರುಗಳ, ಹಿರಿಯ ನೇತೃತ್ವದಲ್ಲಿ ದೊಡ್ಡಮಟ್ಟದ ಪಾದಯಾತ್ರೆ ಮೂಲಕ ರಸ್ತೆಯುದ್ದಕ್ಕೂ ಅಂಬಿಗರ ಚೌಡಯ್ಯ ಹೆಸರಿನ ಜೈಘೋಷಗಳನ್ನು ಮೊಳಗಿಸುತ್ತ ನೇತಾಜಿ ಸರ್ಕಲ್ ಗೆ ಬಂದು ಜಮಾಗೊಂಡರು.
ಕಲಬುರಗಿ, ಯಾದಗಿರಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳಿಂದ ನೂರಾರು ವಾಹನಗಳಲ್ಲಿ ಆಗಮಿಸಿದ ಕೋಲಿ ಸಮಾಜದ ಸಾವಿರಾರು ಪ್ರತಿಭಟನಕಾರರು ಸರ್ಕಲ್ ಬಳಿ ಸುತ್ತುವರೆದು, ಬೇಡಿಕೆಗಳಿಗೆ ಆಗ್ರಹಿಸಿ ನಿರಂತರ ಘೋಷಣೆಗಳುನ್ನು ಕೂಗಿದರು.
ಬೇಡಿಕೆಗಳು :
ನಿಜಶರಣ ಅಂಬಿಗರ ಚೌಡಯ್ಯ ಅವರನ್ನು ಮತ್ತು ಕೋಲಿ ಸಮಾಜವನ್ನು ಅವಮಾನಿಸಿದವನ್ನು ಗಡಿಪಾರು ಮಾಡಬೇಕು. ಕೋಲಿ, ಕಬ್ಬಲಿಗ ಸಮಾಜ ಮತ್ತು ಪರ್ಯಾಯ ಪದಗಳನ್ನು ಎಸ್ಟಿ ಜಾತಿಗೆ ಸೇರಿಸಬೇಕು.
ಕಲಬುರಗಿ ಹೈಕೋರ್ಟ್ ಪೀಠದ ಆದೇಶದಂತೆಯೇ ನಾಯ್ಕ್, ವಾಲ್ಮೀಕಿ, ಬೇಡ, ಬೇಡರ ಜಾತಿಗಳನ್ನು ಅನುಸೂಚಿತ ಬುಡಕಟ್ಟು ಪಟ್ಟಿಯಿಂದ ಈ ಕೂಡಲೇ ಕೈಬೀಡಬೇಕು.
ಜಾತಿಗಳ ನಡುವೆ ಜಗಳ ಹಚ್ಚಿ ಸಮಾಜದಲ್ಲಿ ಶಾಂತಿ ಕದಡುತ್ತಿರುವ ಶ್ರವಣಕುಮಾರ ಔರಾದಿ ಹಾಗೂ ಮರೆಪ್ಪ ನಾಯಕ್ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
ಕೋಲಿ ಸಮಾಜದ ಸರ್ಕಾರಿ ನೌಕರರ ಮೇಲೆ ನಿರಂತರ ದಬ್ಬಾಳಿಕೆ ನಡೆಸುತ್ತಿರುವವರ ಮೇಲೆ ಕ್ರಮ ಆಗಬೇಕೆಂಬ ಪ್ರಮುಖ ಬೇಡಿಕೆಗಳಿಗೆ ಕೋಲಿ ಸಮಾಜದ ಮುಖಂಡರು ಆಗ್ರಹಿಸಿದರು.
ಮನವಿ ಪಡೆಯಲು ಸ್ಥಳಕ್ಕೆ ಆಗಮಿಸಿದ ಡಿಸಿ, ಎಸ್ ಪಿ :
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿಸಿ ಹರ್ಷಲ್ ಭೋಯರ್, ಎಸ್ ಪಿ ಪ್ರಥ್ಚಿಕ್ ಶಂಕರ್ ಅವರು ವೇದಿಕೆ ಗೆ ಆಗಮಿಸಿ, ಧರ್ಮಗುರುಗಳ, ಮುಖಂಡರಿಂದ ಮನವಿ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಡಿಸಿ ಅವರು, ಈ ಬೇಡಿಕೆಗಳ ಮನವಿ ಕೂಡಲೇ ಸರ್ಕಾರಕ್ಕೆ ಕಳುಹಿಸಲಾಗುವುದೆಂದು ಭರವಸೆ ನೀಡಿದರು. ಪ್ರತಿಭಟನಾನಿರತ ಕೆಲವರು ಸಮಾಜದ ಗುರುಗಳಿಗೆ ಅವಮಾನಿಸಿದವರನ್ನು ಕೂಡಲೇ ಬಂಧಿಸುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂಬ ಘೋಷಣೆ ಕೂಗಿದಾಗ ಎಸ್ ಪಿ ಮತ್ತು ಡಿಸಿ ಅವರು ಕ್ರಮದ ಭರವಸೆ ನೀಡಿದ ನಂತರ ಶಾಂತರಾದರು.
ಈ ವೇಳೆ ಸಮಾಜದ ಗುರುಗಳಾದ ತೋನಸನಹಳ್ಳಿ ಶ್ರೀಗಳು, ನಿಜಶರಣ ಅಂಬಿಗರ ಚೌಡಯ್ಯ ಪೀಠದ ಗುರುಗಳು ಹಾಗೂ ಮಾಜಿ ಸಚಿವ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಬಾಬುರಾವ ಚಿಂಚನಸೂರ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಹಿರಿಯ ಮುಖಂಡ ಮೌಲಾಲಿ ಅನಪುರ, ಸಾಯಿಬಣ್ಣಾ ಬೋರಬಂಡಾ, ಲಲಿತಾ ಅನಪುರ, ಅವಣ್ಣ ಮ್ಯಾಕೇರಿ, ಬಸವರಾಜ ಬೂದಿಹಾಳ,ಶೋಭಾ ಬಾಣಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೋಸಿ, ನಾಗರತ್ನ ಅನಪುರ ಸೇರಿದಂತೆಯೇ ಇತರರು ಮಾತನಾಡಿದರು.
ರಸ್ತೆ ಸಂಚಾರ ಬಂದ್ :
ಕೋಲಿ ಸಮಾಜದ ಪ್ರತಿಭಟನೆಯಿಂದಾಗಿ ನೇತಾಜಿ ಸರ್ಕಲ್ ಬಳಿ ಮೂರು ಗಂಟೆಗೂ ರಸ್ತೆ ಸಂಚಾರ ಸ್ಥಗಿತಗೊಂಡು ಅನೇಕರು ಪರದಾಡಿದರು. ಎಲ್ಲಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.







